ಕೊರೊನಾ ಸೋಂಕಿತ ಚಾಮರಾಜನಗರ ಜಿಲ್ಲೆಯ ನಿವಾಸಿಯಲ್ಲ!
ಚಾಮರಾಜನಗರ, ಜೂನ್ 09: ಇದುವರೆಗೆ ಯಾವುದೇ ಕೊರೊನಾ ವೈರಸ್ ಸೋಂಕಿತ ಪ್ರಕರಣವಿಲ್ಲದ ಚಾಮರಾಜನಗರದಲ್ಲಿ ಇದೀಗ ವೈದ್ಯಕೀಯ ವಿದ್ಯಾರ್ಥಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಆದರೆ ಆತ ಜಿಲ್ಲೆಯ ವ್ಯಕ್ತಿಯಲ್ಲ, ಮಹಾರಾಷ್ಟ್ರ ಮೂಲದ ವೈದ್ಯಕೀಯ ವಿದ್ಯಾರ್ಥಿಯಾಗಿರುವುದರಿಂದ ಜಿಲ್ಲೆ ಹಸಿರು ವಲಯದಲ್ಲಿಯೇ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದ್ದಾರೆ.
Recommended Video
ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ಕಳೆದ ನಾಲ್ಕು ದಿನಗಳಿಂದ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಈ ವಿದ್ಯಾರ್ಥಿಗೆ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿರುವ ಐಸೊಲೇಷನ್ ವಾರ್ಡ್ ಗೆ ಸ್ಥಳಾಂತರಿಸಿ ಗಂಟಲು ದ್ರವ ಹಾಗೂ ರಕ್ತ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.

ಪಳನಿಮೇಡುಗೆ ಮುಂಬೈನಿಂದ ಬಂದಿದ್ದರು
ಮುಂಬೈನ ಘಾಟ್ಕೋಪಾರ್ ಈಸ್ಟ್ ನಿವಾಸಿಯಾದ ತಾಯಿ ಹಾಗು ಆಕೆಯ ಮಕ್ಕಳಿಬ್ಬರು ಗುರುವಾರ ರಾತ್ರಿ ಶ್ರಮಿಕ್ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿರುವ ಮಾವನ ಮನೆಗೆ ತಾಯಿಯನ್ನು ಬಿಟ್ಟು ಹೋಗಲು ಈ ಮಕ್ಕಳು ಬಂದಿದ್ದರು. ಇವರ ಮಾವ ಮಾರ್ಟಳಿಯ ಜಾನ್ ಎಂಬುವರು ಬೆಂಗಳೂರಿಗೆ ತಮ್ಮ ಕಾರಿನಲ್ಲೇ ಹೋಗಿ ಇವರನ್ನು ಮಾರ್ಟಳ್ಳಿಯ ಪಳನಿಮೇಡು ಗ್ರಾಮದ ಮನೆಗೆ ಶುಕ್ರವಾರ ರಾತ್ರಿ ಕರೆದುಕೊಂಡು ಬಂದಿದ್ದರು.

ಹನೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್
ಇನ್ನು ಮನೆಗೆ ಬಂದವರು ಮಹಾರಾಷ್ಟ್ರದಿಂದ ಬಂದಿದ್ದಾರೆ ಎಂಬುದು ಗ್ರಾಮಸ್ಥರಿಗೆ ಗೊತ್ತಾದರೆ ವಿರೋಧ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಜಾನ್, ಮಾರನೇ ದಿನವೇ ಈ ಮೂವರನ್ನು ಕೊಳ್ಳೇಗಾಲದಲ್ಲಿರುವ ಫೀವರ್ ಕ್ಲಿನಿಕ್ ಗೆ ಕರೆತಂದಿದ್ದಾರೆ. ಅಲ್ಲಿ ಇವರು ಮಹಾರಾಷ್ಟ್ರದಿಂದ ಬಂದಿದ್ದಾರೆ ಎಂಬುದು ಗೊತ್ತಾದ್ದರಿಂದ ಈ ಮೂವರನ್ನು ಹನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.

ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ದೃಢ
ತಾಯಿ ಮಧುಮೇಹಿ ರೋಗಿಯಾಗಿದ್ದರಿಂದ ಅಂದೇ ಆಕೆಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯು ನೆಗೆಟಿವ್ ಬಂದಿತ್ತು. ಆದರೆ ಕ್ವಾರಂಟೈನ್ ನಲ್ಲಿದ್ದ ವೇಳೆ ಭಾನುವಾರ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಕಿರಿಯ ಮಗನಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಸಹೋದರರಿಬ್ಬರನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿರುವ ಐಸೊಲೇಷನ್ ವಾರ್ಡ್ ಗೆ ಸ್ಥಳಾಂತರಿಸಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಕಿರಿಯ ಮಗನ ಪರೀಕ್ಷೆ ಪಾಸಿಟಿವ್ ಬಂದಿದೆ.
ಈ ಹಿನ್ನೆಲೆಯಲ್ಲಿ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿರಿಯ ಮಗ, ತಾಯಿ, ಮಾವ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಮಾವನ ಪತ್ನಿ ಹಾಗೂ ಮಾವನ ಇಬ್ಬರು ಮಕ್ಕಳನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಲಾಗಿದೆ. ಈ ನಡುವೆ ಹಿರಿಯ ಮಗನ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ಜಿಲ್ಲೆಯ ಲೆಕ್ಕಕ್ಕೆ ಇವರು ಸೇರಲ್ಲ
ಮಾವ ಜಾನ್ ಅವರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಸದ್ಯಕ್ಕೆ ಎಲ್ಲರೂ ಕ್ವಾರಂಟೈನ್ ನಲ್ಲಿದ್ದು, ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಪಾಸಿಟಿವ್ ಬಂದಿರುವ ವಿದ್ಯಾರ್ಥಿ ಗುಣಮುಖನಾದ ಮೇಲೆ ಮಹಾರಾಷ್ಟ್ರಕ್ಕೆ ಈ ಕುಟುಂಬವನ್ನು ವಾಪಸ್ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಈ ವಿದ್ಯಾರ್ಥಿಯ ಕುಟುಂಬ ಸೇವಾಸಿಂಧು ಪೋರ್ಟಲ್ ನಲ್ಲೂ ಸಹ ನೋಂದಣಿ ಮಾಡಿಸಿಲ್ಲ. ಗುರುವಾರ ರಾತ್ರಿ ಬೆಂಗಳೂರಿನ ರೈಲು ನಿಲ್ದಾಣಕ್ಕೆ ಶ್ರಮಿಕ್ ರೈಲಿನಲ್ಲಿ ಬಂದಿಳಿದ ಇವರಿಗೆ ಅಲ್ಲಿ ಥರ್ಮಲ್ ಸ್ಕೀನಿಂಗ್ ಆಗಿದೆ. ನಂತರ ಇವರು ಚಾಮರಾಜನಗರ ಜಿಲ್ಲೆಗೆ ಬರುತ್ತಾರೆ ಎಂಬ ಬಗ್ಗೆ ಬೆಂಗಳೂರು ರೈಲು ನಿಲ್ದಾಣದಿಂದ ಮಾಹಿತಿ ಕೊಡಬೇಕಿತ್ತು. ಆದರೆ ಅಲ್ಲಿಂದ ಯಾವ ಮಾಹಿತಿಯೂ ನೀಡಿಲ್ಲ.
ಇವರು ಬೇರೆ ರಾಜ್ಯಕ್ಕೆ ಸೇರಿದವರು, ಈ ಕೊರೊನಾ ಪ್ರಕರಣ ಚಾಮರಾಜನಗರ ಜಿಲ್ಲೆಗೆ ಸಂಬಂಧಿಸಿದ್ದಲ್ಲ. ಚಾಮರಾಜನಗರ ಜಿಲ್ಲೆಯ ಲೆಕ್ಕಕ್ಕೆ ಇವರು ಬರುವುದಿಲ್ಲ. ಇತರೆ ವಿಭಾಗಕ್ಕೆ ಸೇರುತ್ತಾರೆ. ಹಾಗಾಗಿ ಚಾಮರಾಜನಗರ ಜಿಲ್ಲೆ ಹಸಿರು ವಲಯದಲ್ಲಿಯೇ ಇದೆ. ಹಾಗಾಗಿ ಜನತೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications