ಗುಂಡ್ಲುಪೇಟೆಯಲ್ಲಿ ಕೊರೊನಾ ಹೊಡೆತಕ್ಕೆ ಕಂಗಾಲಾಗಿದ್ದಾರೆ ರೈತರು
ಚಾಮರಾಜನಗರ, ಮಾರ್ಚ್ 12: ಕೊರೊನಾ ವೈರಸ್ ಎರಡು ಅಂತರ ರಾಜ್ಯಗಳ ಗಡಿಭಾಗವಾದ, ಚಾಮರಾಜನಗರದ ಗುಂಡ್ಲುಪೇಟೆಯ ರೈತರು ಕಂಗಾಲಾಗುವಂತೆ ಮಾಡಿದೆ. ಅಲ್ಲದೆ ಭಾರಿ ನಷ್ಟದ ಸುಳಿಗೆ ದೂಡಿದೆ.
ಈಗಾಗಲೇ ವಿಶ್ವದಾದ್ಯಂತ ಈ ವೈರಸ್ ನ ಹೊಡೆತ ಬಿದ್ದಿದ್ದು, ತಾಲೂಕಿನಲ್ಲಿಯೂ ರೈತರ ಮೇಲೆ ಪರಿಣಾಮ ಬೀರಿದೆ. ಕಷ್ಟ ಪಟ್ಟು ಬೆಳೆದ ಬೆಳೆ ರೈತರ ಕೈ ಹಿಡಿದರೂ ಬೆಲೆ ಕುಸಿತ ಮತ್ತು ಬೇಡಿಕೆಯಿಲ್ಲದೆ ಪರದಾಡುವಂತಾಗಿದೆ. ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಕೊರೊನಾ ಆರ್ಭಟ ಮಿತಿ ಮೀರಿದ್ದು, ಈ ಕಾರಣದಿಂದ ಕೇರಳಿಗರು ತರಕಾರಿ ಕೊಳ್ಳಲು ಗುಂಡ್ಲುಪೇಟೆಯತ್ತ ಸುಳಿಯುತ್ತಿಲ್ಲ. ಕೇರಳಿಗರಿಲ್ಲದೆ ತರಕಾರಿ ಬೆಲೆ ಪಾತಾಳದತ್ತ ಮುಖಮಾಡಿದೆ.
ಕಷ್ಟಕ್ಕೆ ಸಿಲುಕಿದ ಗುಂಡ್ಲುಪೇಟೆ ರೈತರು
ವಿಶ್ವದೆಲ್ಲೆಡೆ ತಲ್ಲಣ ಸೃಷ್ಟಿಮಾಡಿರುವ ಈ ಮಹಾಮಾರಿ ವೈರಸ್ ಕರ್ನಾಟಕಕ್ಕೂ ಕಾಲಿರಿಸಿದೆ. ಇದರಿಂದ ಜನರಲ್ಲಿ ಭೀತಿ ಹೆಚ್ಚಾಗಿದೆ. ಈ ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದ್ದು, ಕೇರಳ ಮತ್ತು ತಮಿಳುನಾಡು ಗಡಿನಾಡು ಗುಂಡ್ಲುಪೇಟೆಯಲ್ಲಿ ತರಕಾರಿ ಬೆಲೆ ಭಾರಿ ಕುಸಿತ ಕಂಡಿದೆ. ಇದನ್ನೇ ನಂಬಿ ಬದುಕುತ್ತಿದ್ದ ರೈತರು ನಷ್ಟ ಅನುಭವಿಸುವಂತಾಗಿದೆ.
ಕೊರೊನಾ ಎಫೆಕ್ಟ್; ಮೈಸೂರಲ್ಲಿ ಶೇ.70 ಇಳಿದಿದೆ ತರಕಾರಿ ಬೆಲೆ
ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ತರಕಾರಿಗಳು ನೇರವಾಗಿ ತಮಿಳುನಾಡು ಮತ್ತು ಕೇರಳಕ್ಕೆ ಸರಬರಾಜಾಗುತ್ತವೆ. ಪ್ರಸ್ತುತ ಕೊರೊನಾ ವೈರಸ್ ಪರಿಣಾಮದಿಂದಾಗಿ ಗುಂಡ್ಲುಪೇಟೆ ಎಪಿಎಂಸಿಯಲ್ಲಿ ತರಕಾರಿ ಹೊತ್ತೊಯ್ಯುವ ಲಾರಿಗಳು ಗಣನೀಯವಾಗಿ ಕಡಿಮೆಯಾಗಿವೆ. ವ್ಯಾಪಾರ ಇಲ್ಲದೆ ತರಕಾರಿಗಳ ಬೆಲೆ ಇಳಿಮುಖವಾಗಿ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.
ಶೇ.80ರಷ್ಟು ತರಕಾರಿ ಖರೀದಿಸುತ್ತಿದ್ದ ಕೇರಳಿಗರು
ಮಧ್ಯವರ್ತಿಗಳು ಸೇರಿದಂತೆ ಹೊರ ರಾಜ್ಯದ ವ್ಯಾಪಾರಿಗಳು ತರಕಾರಿ ಕೊಳ್ಳಲು ಮುಂದೆ ಬರುತ್ತಿಲ್ಲ. ಈ ಮೊದಲು ತರಕಾರಿ ಹರಾಜಿನ ಬಳಿಕ ಭಾರಿ ವಾಹನಗಳಲ್ಲಿ ಕೇರಳ ಮತ್ತು ತಮಿಳುನಾಡಿಗೆ ತರಕಾರಿಗಳನ್ನು ಸಾಗಿಸಲಾಗುತ್ತಿತ್ತು. ಮಾರುಕಟ್ಟೆಗೆ ಬರುತ್ತಿದ್ದ ತರಕಾರಿಗಳ ಪೈಕಿ ಶೇ.80ರಷ್ಟು ತರಕಾರಿಯನ್ನು ಕೇರಳದ ವ್ಯಾಪಾರಿಗಳೇ ಕೊಳ್ಳುತ್ತಿದ್ದರು. ಕೊರೊನಾ ವೈರಸ್ ಪ್ರಭಾವದಿಂದ ತರಕಾರಿ ಕೊಳ್ಳಲು ಯಾವುದೇ ವ್ಯಾಪಾರಿಗಳು ಮನಸ್ಸು ಮಾಡುತ್ತಿಲ್ಲ. ಇದರಿಂದ ರೈತರು ದಿನದಿಂದ ದಿನಕ್ಕೆ ನಷ್ಟ ಅನುಭವಿಸಬೇಕಾಗಿದೆ.
ಪ್ರವಾಸೋದ್ಯಮದ ಮೇಲೂ ಹೊಡೆತ
ಕೊರೊನಾ ವೈರಸ್ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರತಿನಿತ್ಯ ಊಟಿ, ಕ್ಯಾಲಿಕಟ್ ಹಾಗೂ ಬಂಡೀಪುರ ಮುಂತಾದ ಸ್ಥಳಗಳಿಗೆ ಹೋಗಲು ಗುಂಡ್ಲುಪೇಟೆ ಮೂಲಕ ತೆರಳುತ್ತಿದ್ದರು. ಹೀಗಾಗಿ ಗುಂಡ್ಲುಪೇಟೆ ಸದಾ ಪ್ರವಾಸಿಗರಿಂದ ಗಿಜುಗುಡುತ್ತಿತ್ತು. ಇದರಿಂದ ವರ್ತಕರಿಗೆ ವ್ಯಾಪಾರ ವಹಿವಾಟು ನಡೆಯುತ್ತಿದ್ದವು. ಈಗ ದೂರದಿಂದ ಪ್ರವಾಸಿಗರು ಬರುತ್ತಿಲ್ಲವಾದ ಕಾರಣ ಹೋಟೆಲ್ಗಳಲ್ಲಿ ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿವೆ. ಕೇರಳದಿಂದಲೂ ಜನ ಬರುತ್ತಿಲ್ಲ. ಇಲ್ಲಿಂದಲೂ ಕೇರಳದ ಕಡೆಗೆ ಜನ ತೆರಳುತ್ತಿಲ್ಲ.
ಕೊರೊನಾ ಎಫೆಕ್ಟ್: 4 ಸಾವಿರ ಕೋಳಿಗಳು ಜೀವಂತವಾಗಿ ಗುಂಡಿಗೆ
ಬದಲಾದ ಗುಂಡ್ಲುಪೇಟೆ ಚಿತ್ರಣ
ವಾಹನಗಳಲ್ಲಿ ತೆರಳುವ ಜನರ ಸಂಖ್ಯೆ ಕಡಿಮೆಯಾಗಿದೆ. ಕೇರಳದಿಂದ ಬಂದವರು ಇಲ್ಲಿಂದ ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರು. ಇತ್ತ ಊಟಿ ಕಡೆಗೆ ತೆರಳುವ ಪ್ರವಾಸಿಗರು ಕೂಡ ಗಂಡ್ಲುಪೇಟೆಯಲ್ಲಿ ಕೆಲವು ಕಾಲ ಇದ್ದು ಹೋಗುತ್ತಿದ್ದರು. ಆದರೆ ಈಗ ಎಲ್ಲದಕ್ಕೂ ತಡೆಯಾಗಿದೆ. ಇದರಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಲುಗಿ ಹೋಗಿದೆ. ಈ ಕುರಿತು ಮಾತನಾಡಿದ ತರಕಾರಿ ವ್ಯಾಪಾರಿ ಕುಮಾರ, "ನಮ್ಮ ಗುಂಡ್ಲುಪೇಟೆ ರೈತರ ಮೇಲೆ ಕೊರೊನಾ ವೈರಸ್ ದುಷ್ಪರಿಣಾಮ ಬೀರಿದೆ. ಪ್ರತಿ ನಿತ್ಯ ವ್ಯಾಪಾರಿಗಳಿಂದಲೇ ತುಂಬಿರುತ್ತಿದ್ದ ಮಾರುಕಟ್ಟೆ ಪ್ರಾಂಗಣ ಈಗ ಖಾಲಿಯಾಗಿದೆ. ರೋಗ ಭಯದಿಂದ ಮಾರುಕಟ್ಟೆಗೆ ಬರುವ ತರಕಾರಿಗಳು ಬಿಕರಿಯಾಗದೆ ರೈತರು ಬೆಳೆಗಳು ಹಾಳಾಗಿ ನಷ್ಟವಾಗುತ್ತಿವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.