ಬಂಡೀಪುರ ಅರಣ್ಯದಲ್ಲಿ ಕೂಂಬಿಂಗ್ ನಡೆಸಿದ್ದೇಕೆ?
ಗುಂಡ್ಲುಪೇಟೆ ಜನವರಿ 27: ಬಂಡೀಪುರ ಅರಣ್ಯದಲ್ಲಿ ಪ್ರಾಣಿಗಳ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಜೋಡಿ ಹುಲಿಗಳ ಸಾವು ಬೇಟೆಗಾರರ ಕೈವಾಡ ಇರಬಹುದಾ ಎಂಬ ಸಂಶಯ ವ್ಯಕ್ತವಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯಿಂದ ಕೂಂಬಿಂಗ್ ನಡೆಸಲಾಗಿದೆ.
ಹುಲಿಯೋಜನೆಯ ಕ್ಷೇತ್ರ ನಿರ್ದೇಶಕ ಮನೋಜ್ಕುಮಾರ್ ಮತ್ತು ಸಿಎಫ್ ಅಂಬಾಡಿ ಮಾಧವ್ ನೇತೃತ್ವದಲ್ಲಿ ಗೋಪಾಲಸ್ವಾಮಿಬೆಟ್ಟ, ಬಂಡೀಪುರ, ಕುಂದಕರೆ ಹಾಗೂ ಮದ್ದೂರು ವಲಯದ ಆರ್ಎಫ್ಓಗಳು ಹಾಗೂ 60 ಸಿಬ್ಬಂದಿ ಸೋಮನಾಥಪುರ ಬೀಟ್ ಹಾಗೂ ಸುತ್ತಲೂ 5 ತಂಡಗಳಾಗಿ ಕೂಂಬಿಂಗ್ ನಡೆಸಿದ್ದಾರೆ.
ಹುಲಿ ದರ್ಶನ ಮಾಡಬೇಕಿದ್ದರೆ ಬಂಡೀಪುರಕ್ಕೆ ಬಂಡಿ ಹತ್ತಿ
ಆದರೆ ಅರಣ್ಯದಲ್ಲಿ ಮನುಷ್ಯರು ಓಡಾಡಿದ ಕುರುಹುಗಳು ಮಾತ್ರ ಕಂಡು ಬಂದಿಲ್ಲ. ಜತೆಗೆ ಅರಣ್ಯದಲ್ಲಿ ಜಾನುವಾರುಗಳು ಅಡ್ಡಾಡಿದ ಗುರುತು ಕೂಡ ಸಿಕ್ಕಿಲ್ಲ. ಇದರಿಂದ ಅರಣ್ಯದಲ್ಲಿ ಬೇಟೆಗಾರರು ನುಸುಳಿರುವ ಯಾವುದೇ ಲಕ್ಷಣಗಳಿಲ್ಲ ಎನ್ನಲಾಗುತ್ತಿದೆ.
ಬೇಸಿಗೆ ಬರುತ್ತಿದ್ದಂತೆಯೇ ಅರಣ್ಯದಲ್ಲಿ ಕಳ್ಳಬೇಟೆ ಆಡುವವರು, ಬೆಂಕಿ ಹಚ್ಚುವ ದುಷ್ಕರ್ಮಿಗಳ ಸಂಖ್ಯೆ ಹೆಚ್ಚಾಗುವ ಕಾರಣದಿಂದ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಪ್ರಾಣಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿ ಜಿಂಕೆ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಬೇಟೆಯಾಡುವ ಜಾಲವೂ ಇರುವುದರಿಂದ ಅರಣ್ಯ ಇಲಾಖೆ ಇತ್ತ ಹೆಚ್ಚಿನ ನಿಗಾವಹಿಸಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇತ್ತೀಚೆಗೆ ಎರಡು ಹುಲಿಗಳು ಹಾಗೂ ಆನೆ ಸಾವನ್ನಪ್ಪಿದ್ದು, ಇವುಗಳ ಸಾವಿನ ಬಗ್ಗೆ ನಿಖರ ಕಾರಣ ಮಾಹಿತಿ ಕಲೆಹಾಕಲು ಮತ್ತು ಯಾರಾದರೂ ಕಳ್ಳಬೇಟೆಗಾರರು ಅರಣ್ಯದಲ್ಲಿ ನುಸುಳಿದ್ದಾರೆಯೇ ಎಂಬುದನ್ನು ಕಲೆಹಾಕಲು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆ ಎನ್ನಲಾಗಿದೆ.