ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ನವರು ಬಾಗಿಲು ಹಾಕಿಸಿದರು, ಬಿಜೆಪಿಯವರು ತೆಗೆಸಿದರು
ಚಾಮರಾಜನಗ, ಸೆಪ್ಟೆಂಬರ್ 10: ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದರೂ ಗುಂಡ್ಲುಪೇಟೆ ತಾಲೂಕಿನಲ್ಲಿ ಮಾತ್ರ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಾಗಿಲು ಮುಚ್ಚಿಸಿದರೆ, ಬಿಜೆಪಿ ಕಾರ್ಯಕರ್ತರು ಬಾಗಿಲು ತೆರೆಸಿದ ಘಟನೆ ನಡೆದಿದೆ.
ಇಲ್ಲಿ ಬಿಜೆಪಿ ಶಾಸಕರಿರುವ ಕಾರಣ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಯಶಸ್ವಿಗೊಳಿಸಲು ಕಾಂಗ್ರೆಸ್ ಮುಖಂಡರು ಬಾಗಿಲು ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರೆ ಬಿಜೆಪಿ ಕಾರ್ಯಕರ್ತರು ಸರತಿ ಸಾಲಿನಲ್ಲಿ ನಿಂತು ಬೈಕುಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುವ ಮೂಲಕ ತಿರುಗೇಟು ನೀಡಿದರು.
ಆದರೆ ಮೋದಿ ಅಭಿಮಾನಿಗಳು ತಮ್ಮ ಅಂಗಡಿಗಳ ಬಾಗಿಲು ತೆರೆದು ವ್ಯಾಪಾರ ಮಾಡುವುದು ಅಲ್ಲಲ್ಲಿ ಕಂಡುಬಂದಿತು. ಇವರನ್ನು ಬಿಜೆಪಿ ಕಾರ್ಯಕರ್ತರು ಅಭಿನಂದಿಸುತ್ತಿದ್ದದ್ದು ವಿಶೇಷವಾಗಿತ್ತು.

ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ತೈಲೋತ್ಪನ್ನಗಳ ಬೆಲೆಯೇರಿಕೆಯಿಂದ ಆಹಾರ ಪದಾರ್ಥಗಳು ದುಬಾರಿಯಾಗಿದ್ದು ಶ್ರೀ ಸಾಮಾನ್ಯರು ಹಾಗೂ ಬಡವರಿಗೆ ತೊಂದರೆಯಾಗಿದೆ. ಈ ಬಗ್ಗೆ ಜನತೆ ಬಂದ್ಗೆ ಉತ್ತಮ ಬೆಂಬಲ ನೀಡಿದೆ. ಆದ್ದರಿಂದ ಇನ್ನಾದರೂ ಕೇಂದ್ರ ಸರ್ಕಾರ ಇಂಧನದ ಬೆಲೆಯಿಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣಕ್ಕೆ ಬಂದ ಎಲ್ಲ ಬಸ್ಸುಗಳನ್ನು ಡಿಪೋ ಒಳಗೆ ಕಳುಹಿಸಲಾಯಿತು. ಈ ಬಸ್ಸುಗಳಲ್ಲಿ ಬಂದ ಪ್ರಯಾಣಿಕರು ಬೇರೆಡೆ ತೆರಳಲು ಸೌಕರ್ಯವಿಲ್ಲದೆ ಪರದಾಡಿದರು. ಸಾರಿಗೆ ಸಂಸ್ಥೆಯು ತನ್ನ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದರಿಂದ ಎಲ್ಲ ಸಿಬ್ಬಂದಿ ಬೆಳಗಿನಿಂದಲೇ ಡಿಪೋ ಎದುರು ಕಾದು ನಿಂತಿದ್ದು ಕಂಡು ಬಂತು.
ಬೇರೆಡೆಗೆ ತೆರಳಬೇಕಾಗಿದ್ದ ಸಾರ್ವಜನಿಕರು, ಆಸ್ಪತ್ರೆಗೆ ತೆರಳುವ ರೋಗಿಗಳು, ಸರ್ಕಾರಿ ಕಚೇರಿಗೆ ತೆರಳುವ ನೌಕರರು ಆಟೋ ಹಾಗೂ ಟೆಂಪೋಗಳಲ್ಲಿ ಪ್ರಯಾಣಿಸಿದರು. ಸ್ವಂತ ಬೈಕ್ ಹೊಂದಿರುವವರು ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸಲು ಬಂಕ್ ಮುಂದೆ ಸಾಲುಗಟ್ಟಿ ನಿಂತಿದ್ದರು.
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪುರಸಭೆ ಸದಸ್ಯ ಗೋವಿಂದರಾಜನ್ ಅವರ ಮಾಲೀಕತ್ವದ ಬಂಕ್ ಮುಚ್ಚಿಸಲು ಮುಂದಾದಾಗ ಮಾತಿನ ಚಕಮಕಿ ನಡೆದು ಪೊಲೀಸ್ ಭದ್ರತೆಯಲ್ಲಿ ಡೀಸೆಲ್ ಪೆಟ್ರೋಲ್ ಹಾಕಲಾಯಿತು. ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಬಂಕ್ ಮಾಲೀಕ ಗೋವಿಂದರಾಜನ್, ಪುತ್ರ ಕಣ್ಣನ್ ಹಾಗೂ ಸಿಬ್ಬಂದಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಪೆಟ್ರೋಲ್ ಹಾಕಿದರು.
ಒಟ್ಟಾರೆ ಗುಂಡ್ಲುಪೇಟೆಯಲ್ಲಿ ರಾಜಕೀಯ ನಾಯಕರ ಸ್ವಪ್ರತಿಷ್ಠೆಗೆ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದ್ದು ಮಾತ್ರ ಬೇಸರದ ಸಂಗತಿಯಾಗಿದೆ.












Click it and Unblock the Notifications