ಚಾಮರಾಜ ನಗರ: ಅಕ್ಟೋಬರ್ ನಲ್ಲಿ ತೆಂಗಿನಕಾಯಿ ಸಂಸ್ಕರಣಾ ಘಟಕಕ್ಕೆ ಚಾಲನೆ
ಚಾಮರಾಜನಗರ, ಸೆಪ್ಟೆಂಬರ್ 19 : ತಾಲೂಕಿನ ಕಾಳನಹುಂಡಿ ಸಮೀಪದ ಮುಣಚನಹಳ್ಳಿಯಲ್ಲಿ ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದಿಂದ ಸರ್ಕಾರದ ಅನುದಾನದಡಿಯಲ್ಲಿ ತೆಂಗಿನಕಾಯಿ ಪೌಡರ್ ತಯಾರು ಮಾಡುವ ಘಟಕ ಆರಂಭವಾಗಿದ್ದು ಮುಂದಿನ ತಿಂಗಳು(ಅಕ್ಟೋಬರ್) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವ ಸಾಧ್ಯತೆಯಿದೆ.
ವಿಶಾಲವಾದ ಮೈದಾನದಲ್ಲಿ ರೈತ ಸಂಘದ ಮುಖಂಡರ ಶ್ರಮದಿಂದ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಆರಂಭವಾದ ತೆಂಗಿನ ಕಾಯಿ ಪೌಡರ್ ನಿರ್ಮಾಣ ಘಟಕ ಇದಾಗಿದೆ. ಇದರಿಂದ ಜಿಲ್ಲೆಯ ತೆಂಗು ಬೆಳೆಗರರಿಗೆ ಉತ್ತಮ ಬೆಲೆ ದೊರೆಯುವ ಮತ್ತು ಒಂದಷ್ಟು ಮಂದಿಗೆ ಉದ್ಯೋಗ ದೊರಕುವ ನಿರೀಕ್ಷೆಯೂ ಇದೆ.
ಈ ಕುರಿತು ಮಾಹಿತಿ ನೀಡಿರುವ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಪ್ರಭು ಅವರು, ಪ್ರತಿ ದಿನ 50 ಸಾವಿರ ಕಾಯಿಯನ್ನು ಪೌಡರ್ ಮಾಡುವ ಘಟಕ ಇದಾಗಿದೆ. ಸರ್ಕಾರದ ಅನುದಾನ ಮತ್ತು ಸದಸ್ಯರ ಷೇರು ಹಣವನ್ನು ವಿನಿಯೋಗ ಮಾಡಿ ಘಟಕವನ್ನು ನಿರ್ಮಿಸಲಾಗಿದೆ.
ತೆಂಗಿನಕಾಯಿ ಪೌಡರ್ ಘಟಕದ ಜೊತೆಗೆ ನೀರಾ ಸಂಸ್ಕರಣ ಘಟಕವನ್ನು ನಿರ್ಮಾಣ ಮಾಡುವ ಆಲೋಚನೆ ನಮ್ಮದಾಗಿದೆ. ಈಗಾಗಲೇ ಇದಕ್ಕಾಗಿ ಜಾಗವನ್ನು ಸಿದ್ದಪಡಿಸಿಕೊಂಡಿದ್ದೇವೆ. ನೀರಾ ಪೇಯವನ್ನು ಟಾಟ್ರಾ ಪ್ಯಾಕೇಟ್ನಲ್ಲಿ ಸಂಸ್ಕರಣ ಮಾಡಿ ಮಾರಾಟ ಮಾಡಲು ಅನುಮತಿಯನ್ನು ಕೊಡಿಸುವಂತೆ ಸರ್ಕಾರವನ್ನು ಕೋರಿರುವುದಾಗಿಯೂ ಅವರು ಹೇಳಿದರು.
ಈ ನಡುವೆ ಸಂಸದ ಆರ್. ಧ್ರುವನಾರಾಯಣ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಮಗಾರಿಯ ಗುಣಮಟ್ಟ ಹಾಗೂ ಮಿಷನರಿಗಳ ಜೋಡಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ತೆಂಗಿನಕಾಯಿ ದಾಸ್ತಾನು ಘಟಕ, ಬ್ಲಾಯರ್ ವಿಭಾಗ, ಪೌಡರ್ ತಯಾರಿಕೆ ಘಟಕ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅವರು, ಮಿಷನರಿಗಳ ಜೋಡಣೆ ಮತ್ತು ಅವುಗಳ ಕಾರ್ಯಾರಂಭದ ಬಗ್ಗೆ ಮಾಹಿತಿ ಪಡೆದುಕೊಂಡರು.
ಅಕ್ಟೋಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಬಹು ಕುಡಿಯುವ ನೀರು ಯೋಜನೆಯ 2ನೇ ಹಂತದ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿಯೇ ಈ ಘಟಕವನ್ನು ಉದ್ಘಾಟನೆ ಮಾಡುವಂತೆ ಅವರಲ್ಲಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.