ಚಾಮರಾಜನಗರ: ಸಿದ್ದರಾಮಯ್ಯರಿಂದ ಜೆಎಸ್ಎಸ್ ಆಸ್ಪತ್ರೆ ಲೋಕಾರ್ಪಣೆ
ಚಾಮರಾಜನಗರದಲ್ಲಿ ಇಪ್ಪತ್ತೈದು ಕೋಟಿ ರೂಪಾಯಿ ವೆಚ್ಚದಲ್ಲಿ ಜೆಎಸ್ಎಸ್ ಸಂಸ್ಥೆ ನಿರ್ಮಿಸಿದ 100 ಹಾಸಿಗೆಗಳ ನೂತನ ಆಸ್ಪತ್ರೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಜನತೆಗೆ ಸಮರ್ಪಿಸಿದ್ದಾರೆ.
ಚಾಮರಾಜನಗರ, ಮೇ 14: ಚಾಮರಾಜನಗರದಲ್ಲಿ ಇಪ್ಪತ್ತೈದು ಕೋಟಿ ರೂಪಾಯಿ ವೆಚ್ಚದಲ್ಲಿ ಜೆಎಸ್ಎಸ್ ಸಂಸ್ಥೆ ನಿರ್ಮಿಸಿದ 100 ಹಾಸಿಗೆಗಳ ನೂತನ ಆಸ್ಪತ್ರೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಜನತೆಗೆ ಸಮರ್ಪಿಸಿದ್ದಾರೆ.
ಇದೇ ವೇಳೆ ಅವರು ಜೆಎಸ್ಎಸ್ ಮಹಿಳಾ ಕಾಲೇಜು ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನೂ ನೆರವೇರಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ನಡೆಸಿರುವ ಜೆಎಸ್ಎಸ್ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ಗ್ರಾಮೀಣ ಜನರಿಗೆ ಹೆಚ್ಚಿನ ಸೇವೆ ಒದಗಿಸಬೇಕೆಂಬ ಸದಾಶಯದಿಂದ ಈ ಆಸ್ಪತ್ರೆಯನ್ನು ಸ್ಥಾಪಿಸಿದೆ.
ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ 100 ಹಾಸಿಗೆಗಳ ಈ ನೂತನ ಆಸ್ಪತ್ರೆಯಲ್ಲಿ ಕಳೆದ ವರ್ಷವಷ್ಟೇ ಹೊರ ರೋಗಿಗಳಿಗೆ ಚಿಕಿತ್ಸೆ ಆರಂಭಿಸಲಾಗಿತ್ತು. ಇದೀಗ ಜೆಎಸ್ಎಸ್ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಕಾರ್ಯ ನಿರ್ವಹಿಸಲಿದ್ದು 18 ಸ್ಪೆಷಾಲಿಟಿ ಹಾಗೂ 5 ಸೂಪರ್ ಸ್ಪೆಷಾಲಿಟಿ ವಿಭಾಗಗಳು ಕಾರ್ಯ ನಿರ್ವಹಣೆ ಮಾಡಲಿವೆ.
ಅತ್ಯಾಧುನಿಕ ಪ್ರಯೋಗಾಲಯಗಳು, ಸಿಟಿ ಸ್ಕ್ಯಾನ್, ಎಕ್ಸ್ ರೇ, ಅಲ್ಟ್ರಾ ಸೌಂಡ್, ಎರಡು ಶಸ್ತ್ರ ಚಿಕಿತ್ಸಾ ಕೊಠಡಿಗಳು, ಹೆರಿಗೆ ಶಸ್ತ್ರ ಚಿಕಿತ್ಸಾ ಕೊಠಡಿಗಳು, ತೀವ್ರಾ ನಿಗಾ ಘಟಕಗಳನ್ನು ಈ ಆಸ್ಪತ್ರೆ ಹೊಂದಿದೆ.
ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕೊಪಯೋಗಿ ಸಚಿವ ಮಹದೇವಪ್ಪ, ಉಸ್ತುವಾರಿ ಸಚಿವ ಯುಟಿ ಖಾದರ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಂಸದ ಧ್ರುವನಾರಾಯಣ್, ಶಾಸಕ ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ವಾಟಾಳ್ ನಾಗರಾಜ್ ಸೇರಿದಂತೆ ಇನ್ನಿತರು ಹಾಜರಿದ್ದರು