ಕೊರೊನಾ ಸೋಂಕಿತರು ಅಸ್ಪೃಶ್ಯರಲ್ಲ: ಗುಣಮುಖಗೊಂಡ ಚಾಮರಾಜನಗರ ಮಹಿಳೆ ಮಾತು
ಚಾಮರಾಜನಗರ, ಜುಲೈ 9: ಮಹಾಮಾರಿ ಕೊರೊನಾ ವೈರಸ್ ರೋಗವು ಮಾರಣಾಂತಿಕವಲ್ಲ, ಅದೇ ರೀತಿ ಕೊರೊನಾ ಸೋಕಿತರು ಅಸ್ಪೃಶ್ಯರಲ್ಲ ಎಂದು ಕೊರೊನಾ ವೈರಸ್ ನಿಂದ ಗುಣಮುಖಗೊಂಡ ಚಾಮರಾಜನಗರ ಮಹಿಳೆ ಹೇಳಿದ್ದಾಳೆ.
ಕೊರೊನಾ ವೈರಸ್ ಸೋಂಕಿತರು ಅಸ್ಪೃಶ್ಯರೂ ಅಲ್ಲ, ಕಳಂಕಿತರೂ ಅಲ್ಲ. ಅವರ ವಿಡಿಯೋ ಮಾಡುವುದು ಸರಿಯಲ್ಲವೆಂದು ಕೊರೊನಾ ವೈರಸ್ ಗೆದ್ದು, ಮನೆಗೆ ತೆರಳಿದ ಮಹಿಳೆ ಅಳಲು ತೋಡಿಕೊಂಡಿದ್ದಾಳೆ.
ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಲ್ಯಾಬ್ ಸಿಬ್ಬಂದಿಗೆ ಸೋಂಕು ತಗುಲಿ ಗುಣಮುಖರಾದ ಬಳಿಕ ಅನುಭವ ಹೇಳಿಕೊಂಡಿದ್ದಾರೆ. ಗ್ರಾಮದಲ್ಲಿ ಮೊದಲು ನಮ್ಮ ಜೊತೆ ಗೌರವದಿಂದ ಮಾತನಾಡುತ್ತಿದ್ದರು. ಆದರೆ ಈಗ ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ ಎಂದರು.

ಕೆಲವರು ನಾವು ಆ್ಯಂಬುಲೆನ್ಸ್ ನಲ್ಲಿ ಕೋವಿಡ್ ಆಸ್ಪತ್ರೆಗೆ ತೆರಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಳಂಕ ತಂದಿದ್ದಾರೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಮಹಿಳೆ ಹರಿಹಾಯ್ದಿದ್ದಾಳೆ.
ಆದರೆ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ನಮ್ಮನ್ನು ತಮ್ಮ ಮನೆಯವರಂತೆ ನೋಡಿಕೊಂಡು ನಮಗೆ ಧೈರ್ಯ ತುಂಬಿದರು. ಊಟ, ಚಿಕಿತ್ಸೆ ಚೆನ್ನಾಗಿತ್ತು. ವೈದ್ಯರು ಆತ್ಮಬಲ ತುಂಬುವುದರಿಂದಲೇ ನಮಗೆ ಆತ್ಮವಿಶ್ವಾಸ ಬಂದಿದೆ ಎಂದು ಕೊರೊನಾ ವಾರಿಯರ್ಸ್ ಗಳ ಕಾರ್ಯವನ್ನು ಶ್ಲಾಘಿಸಿದರು.
ನಮ್ಮಲ್ಲಿ ಧೈರ್ಯ, ಮನೋಸ್ಥೈರ್ಯ ಇದ್ದರೆ ಕೊರೊನಾ ವೈರಸ್ ವಿರುದ್ಧ ಗೆಲ್ಲಬಹುದು, ಕೋವಿಡ್ ಮಾರಣಾಂತಿಕವಲ್ಲ. ಅದು ಬಂದ ಕೂಡಲೇ ನಾವ್ಯಾರು ಸಾಯುವುದಿಲ್ಲ. ಸೋಂಕು ಇರುವುದು ಗೊತ್ತಾದ ಎರಡನೆ ದಿನವೇ ನಮ್ಮ ಆರೋಗ್ಯ ಸುಧಾರಿಸಿತ್ತು, ಜ್ವರ ಕಡಿಮೆಯಾಗಿತ್ತು ಎಂದು ತಮ್ಮ ಅನುಭವ ಹೇಳಿಕೊಂಡರು.
ಕೊರೊನಾ ವೈರಸ್ ಸೊಂಕಿನಿಂದ ಗುಣಮುಖರಾದವರನ್ನು ಗೌರವಯುತವಾಗಿ ಕಾಣಬೇಕು, ಕೊರೊನಾ ವೈರಸ್ ಕುರಿತು ಇರುವ ಅಜ್ಞಾನ, ಭಯದ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಸೊಂಕಿನಿಂದ ಗುಣಮುಖರಾದ ಮಹಿಳೆಯು ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮಾಡಿದ ಮನವಿ ಮಾಡಿದರು.












Click it and Unblock the Notifications