ಬಂಡೀಪುರದಲ್ಲಿ ಬೇಸಿಗೆ ಕಾಳ್ಗಿಚ್ಚು ತಡೆಗೆ ಈಗಿನಿಂದಲೇ ತಯಾರಿ
ಚಾಮರಾಜನಗರ, ನವೆಂಬರ್ 22: ಕಳೆದ ವರ್ಷ ಬೇಸಿಗೆ ಸಮಯದಲ್ಲಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ ಇನ್ನೂ ಮಾಸಿಲ್ಲ. ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದಲ್ಲದೆ, ಸಜೀವ ದಹನವೂ ನಡೆದಿತ್ತು. ಇಂತಹ ಘಟನೆಗಳು ಮತ್ತೆ ಘಟಿಸಬಾರದೆಂಬ ಉದ್ದೇಶದಿಂದ ಈ ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳು ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಈ ಸಂಬಂಧ ಬಂಡೀಪುರದ ಅರಣ್ಯಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಬೆಂಕಿನಂದಿಸುವ ಉಪಕರಣಗಳ ಪ್ರಾತ್ಯಕ್ಷಿಕೆಯನ್ನು ನಡೆಸಲಾಗಿದೆ. ಈ ಕುರಿತಂತೆ ಮಾತನಾಡಿದ ಎಂದು ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ಅವರು, ಬಂಡೀಪುರದಲ್ಲಿ ಕಳೆದ ಬಾರಿ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ಹುಲ್ಲು ಮತ್ತು ಲಂಟಾನ ಒಣಗಿದ್ದರಿಂದ ಕಾಳ್ಗಿಚ್ಚಿಗೆ ಭಾರೀ ಪ್ರಮಾಣದ ಅರಣ್ಯ ಪ್ರದೇಶ ಆಹುತಿಯಾಗಿತ್ತು.

ಈ ಬಾರಿ ಅಂತಹ ಅನಾಹುತ ತಪ್ಪಿಸಲು ನಿಗದಿತ ಅವಧಿಯಲ್ಲಿ ಬೆಂಕಿ ರೇಖೆ ನಿರ್ಮಾಣ ಮಾಡುವುದರೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ ಸುಮಾರು 50 ಮೀಟರ್ ಎತ್ತರಕ್ಕೂ ವಾಟರ್ಸ್ಪ್ರೇ ಮಾಡಿ ಬೆಂಕಿ ನಂದಿಸುವ ಉಪಕರಣಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರಲ್ಲದೆ ಅದರ ಕಾರ್ಯನಿರ್ವಹಣೆಯ ಬಗ್ಗೆಯೂ ಮಾಹಿತಿ ನೀಡಿದರು.
ಎಲ್ಲ ವಲಯ ಅಧಿಕಾರಿಗಳಿಗೆ ಬೆಂಕಿ ನಂದಿಸುವ ಬಗ್ಗೆ ಅರಿವು ಮೂಡಿಸಿ ಉಪಕರಣಗಳನ್ನು ಬಳಸುವ ವಿಧಾನವನ್ನು ತಿಳಿಸಲಾಗಿದೆ. ಮೇಲಾಧಿಕಾರಿಗಳ ಅನುಮತಿ ಪಡೆದು ಕೇರಳದ ಆಗ್ರೋ ಕಂಪನಿಯಿಂದ ಯಂತ್ರೋಪಕರಣಗಳನ್ನು ಖರೀದಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.

ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನಲೆಯಲ್ಲಿ ಕೆರೆ ಕಟ್ಟೆಗಳು ಭಾಗಶಃ ತುಂಬಿವೆ ಅಲ್ಲದೆ ಅರಣ್ಯ ಪ್ರದೇಶವು ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಆದ್ದರಿಂದ ಯಾವುದೇ ಬೆಂಕಿ ಅನಾಹುತ ಸಂಭವಿಸುವ ಸಾಧ್ಯತೆ ಕಡಿಮೆಯಿದೆ. ಆದರೂ ಬೇಸಿಗೆಯಲ್ಲಿ ನಡೆಯಬಹುದಾದ ಅಗ್ನಿ ಅವಘಡಗಳನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳಲಾಗುವುದು ಎಂದರು.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಎಸಿಎಫ್ ರವಿಕುಮಾರ್, ಆರ್ಎಫ್ಓ ನವೀನ್ಕುಮಾರ್, ಪುಟ್ಟಸ್ವಾಮಿ, ಸುನೀಲ್, ಶೈಲೇಂದ್ರಕುಮಾರ್, ಶ್ರೀನಿವಾಸ್ ಈ ಸಂದರ್ಭ ಇದ್ದರು.












Click it and Unblock the Notifications