ಸಿದ್ದರಾಮಯ್ಯ ರಾಜಕೀಯ ಅಲೆಮಾರಿ, ಅಂಜುಬುರುಕ- ಸಂಸದ ಶ್ರೀನಿವಾಸ ಪ್ರಸಾದ್
ಚಾಮರಾಜನಗರ ನವೆಂಬರ್9: ಸಿದ್ದರಾಮಯ್ಯ ರಾಜಕೀಯ ಅಲೆಮಾರಿ, ಸ್ಪರ್ಧೆ ಮಾಡುವ ಕ್ಷೇತ್ರ ಘೋಷಣೆ ಮಾಡದ ಅಂಜುಬುರುಕ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಒಂದು ಊರಲ್ಲಿ ನಿಲ್ಲದ ಅಲೆಮಾರಿಗಳಂತೆ ಕ್ಷೇತ್ರದಿಂದ ಕ್ಷೇತ್ರಕ್ಕೆ ಹಾರುವ ಸಿದ್ದರಾಮಯ್ಯ ರಾಜಕೀಯ ಅಲೆಮಾರಿ ಇದ್ದಂತೆ. ಉಪಕಾರ ಸ್ಮರಣೆ ಇಲ್ಲದ ಸಿದ್ದರಾಮಯ್ಯ ಪಕ್ಷ ಕಟ್ಟಲಿ. ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಅಗತ್ಯ ಇದೆ. ಅದು ಬಿಟ್ಟು ವೀರಾವೇಶದ ಮಾತಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಈಶ್ವರಪ್ಪನವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಿ: ಕೆ.ಮುಕುಡಪ್ಪ ಒತ್ತಾಯ
ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿನಂದನಾ ಸಮಾರಂಭದಲ್ಲಿ ಟೇಬಲ್ ಕುಟ್ಟಿ ಮಾತನಾಡುತ್ತಾರೆ. ಅವರು ಗೆದ್ದಿರುವುದು ಒಂದು ಸ್ಥಾನ. ಇನ್ನು ಬಿಜೆಪಿ 25 ಸಂಸದ ಸ್ಥಾನ ಗೆದ್ದಿದ್ದು ನಾವು ಯಾವ ರೀತಿ ಮಾತನಾಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಂದಿನ ಸಿಎಂ ಎಂದು ಮಣ್ಣು ಮುಕ್ಕಿದ್ದಾರೆ. ರಾಹುಲ್ ಗಾಂಧಿನೇ ಪ್ರಧಾನ ಮಂತ್ರಿ ಎಂದು ರಾಯಚೂರಿನಲ್ಲಿ ಹೇಳಿದ್ದರು ಏನಾಯಿತು ಈಗ..? ಎಂದು ಪ್ರಶ್ನಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೊನೆಗೊಂಡಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಎಂದು ಅಲ್ಲಿಗೂ ಹೋಗೆ ಇಲ್ಲ, ತೆಲಂಗಾಣದಲ್ಲಿ ಅವರ ಯಾತ್ರೆಗೆ ಜನರೇ ಇರಲಿಲ್ಲ. ಸಿದ್ದರಾಮಯ್ಯ ದಾವಣಗೆರೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. 8 ಲಕ್ಷ ಜನ ಟಾನಿಕ್ ಕೊಟ್ಟಿದ್ದಾರೆ. ಹೀಗಾದರೂ ತಾವು ನಿಲ್ಲುವ ಕ್ಷೇತ್ರ ಘೋಷಣೆ ಮಾಡುತ್ತಿಲ್ಲ. ಅಂಜುಬುರುಕ, ಮಲ್ಲಿಕಾರ್ಜುನ ಖರ್ಗೆಗೆ ಮರದ ಕತ್ತಿ ಕೊಟ್ಟು ಯುದ್ಧ ಮಾಡು ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.
ಇನ್ನು ಹಿಂದೂ ಪದದ ಬಗ್ಗೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ವಿ.ಶ್ರೀನಿವಾಸ ಪ್ರಸಾದ್, ಬಿಜೆಪಿ ಜೊತೆಗೆ ಕಾಂಗ್ರೆಸ್ ನಾಯಕರು ಕೂಡ ಅವರ ಮಾತನ್ನು ಒಪ್ಪಲು ತಯಾರಿಲ್ಲ. ಕ್ಷಮೆ ಕೇಳಿ ಅಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ, ಕ್ಷಮೆ ಕೇಳಲ್ಲ ಅಂತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.