ತಿನ್ನುವ ಪ್ರಸಾದಕ್ಕೆ ವಿಷ ಹಾಕಿದ್ದು ನಾನೇ: ತಪ್ಪೊಪ್ಪಿಕೊಂಡ ಮಹಿಳೆ?
ಚಾಮರಾಜನಗರ, ಡಿಸೆಂಬರ್ 18: ಚಾಮರಾಜನಗರದ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದಲ್ಲಿ 15 ಮಂದಿಯನ್ನು ಬಲಿತೆಗೆದುಕೊಂಡ ವಿಷ ಪ್ರಸಾದ ದುರಂತಕ್ಕೆ ತಾನೇ ಕಾರಣ ಎಂದು ಅಂಬಿಕಾ ಎಂಬ ಮಹಿಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದರಿಂದ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ದುರಂತಕ್ಕೆ ಕಾರಣ ಬಹಿರಂಗವಾಗುವ ಸುಳಿವು ದೊರೆತಿದೆ. ದೇವಸ್ಥಾನದ ಕಿರಿಯ ಸ್ವಾಮೀಜಿ ಮಹದೇವಸ್ವಾಮಿ, ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ ಮಾದೇಶ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.
ವಿಷ ಪ್ರಸಾದವನ್ನು ಉಣಿಸಲು ಅಂಬಿಕಾ ಮುಂದಾಗಿದ್ದಾದರೂ ಏಕೆ ?
ಸಾಲೂರು ಮಠದ ಕಿರಿಯ ಸ್ವಾಮೀಜಿ, ಟ್ರಸ್ಟ್ನ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಸೂಚನೆಯಂತೆ ತಾನೇ ಪ್ರಸಾದಕ್ಕೆ ವಿಷ ಬೆರೆಸಿದ್ದಾಗಿ ಮಾದೇಶ ಅವರ ಪತ್ನಿ ಅಂಬಿಕಾ ಪೊಲೀಸರ ಎದುರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಷ ಪ್ರಸಾದ ಪ್ರಕರಣ : ಮೃತರ ಸಂಖ್ಯೆ 14, ನಾಲ್ವರು ಶಂಕಿತರು ವಶಕ್ಕೆ
ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ತನಿಖೆ ನಡೆದಿದೆ. ಟ್ರಸ್ಟ್ ಅಧ್ಯಕ್ಷ ಮಹದೇವ ಸ್ವಾಮಿ, ಮಠದ ವ್ಯವಸ್ಥಾಪಕ ಮಾದೇಶ ಮತ್ತು ಆತನ ಪತ್ನಿ ಅಂಬಿಕಾ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟ್ರಸ್ಟ್ ಮೇಲೆ ಹಿಡಿತದ ಗುರಿ
ತಮಿಳುನಾಡಿನವರಾದ ಅಂಬಿಕಾ ಮಾದೇಶ್ ಅವರನ್ನು ಮದುವೆಯಾದ ಬಳಿಕ ಗ್ರಾಮದಲ್ಲಿ ನೆಲೆಸಿದ್ದರು. ಮಠ ಮತ್ತು ದೇವಸ್ಥಾನದ ಹಿಡಿತವನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಉದ್ದೇಶ ಹೊಂದಿದ್ದರು. ಟ್ರಸ್ಟ್ನ ಪೂಜಾರಿ ಚಿನ್ನಪ್ಪಿ ಅವರನ್ನು ಬೆದರಿಸುವುದು ಅವರ ಗುರಿಯಾಗಿತ್ತು. ಈ ಕಾರಣಗಳಿಂದ ಆಹಾರಕ್ಕೆ ವಿಷ ಬೆರೆಸಿದ್ದರು ಎನ್ನಲಾಗಿದೆ.
ದೇವಾಲಯದ ಪ್ರಸಾದದಲ್ಲಿ ವಿಷ ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿದ್ದಾರೆ: ವೈದ್ಯಾಧಿಕಾರಿ
ಉತ್ತಮ ಸಂಬಂಧವಿರಲಿಲ್ಲ
ಸಾಲೂರು ಮಠದ ಕಿರಿಯ ಸ್ವಾಮೀಜಿಗೂ ಹಿರಿಯರಾದ ಗುರುಸ್ವಾಮಿ ಅವರಿಗೂ ಉತ್ತಮ ಸಂಬಂಧವಿರಲಿಲ್ಲ ಎನ್ನಲಾಗಿದೆ. ಗುರುಸ್ವಾಮಿ ಅವರು ಮಹದೇವಸ್ವಾಮಿ ಜೊತೆ ಮಾತುಕತೆ ನಡೆಸುತ್ತಿರಲಿಲ್ಲ. ಹಾಗೆಯೇ ಮಠದ ಸಂಪೂರ್ಣ ಅಧಿಕಾರವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವುದು ಮಹದೇವಸ್ವಾಮಿ ಮತ್ತು ಮಾದೇಶ್ ಉದ್ದೇಶವಾಗಿತ್ತು. ಇವೆಲ್ಲ ಸಂಗತಿಗಳೂ ಈ ಮಹಾ ದುರಂತಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.
ವಿಷಪ್ರಸಾದ ಸೇವನೆ: ಹುಟ್ಟುಹಬ್ಬದಂದೇ ಸಾವನ್ನಪ್ಪಿದ ಬಾಲಕ
ಆಸ್ಪತ್ರೆ ಸೇರಿದ್ದ ಕಿರಿಯ ಸ್ವಾಮೀಜಿ
ಅನಾರೋಗ್ಯದ ನೆಪವೊಡ್ಡಿ ಮಹದೇವ ಆಸ್ಪತ್ರೆಗೆ ದಾಖಲಾಗಿದ್ದರು. ಕಳಶ ಸ್ಥಾಪನೆಯ ದಿನ ಅವರು ದೇವಸ್ಥಾನಕ್ಕೆ ಬಂದಿರಲಿಲ್ಲ. ಇದು ಅವರ ಮೇಲೆ ಅನುಮಾನ ಮೂಡುವಂತೆ ಮಾಡಿತ್ತು. ಅವರು ದೇವಸ್ಥಾನದ ಭೂ ವಿವಾದಗಳಿಂದ ಅಸಮಾಧಾನಗೊಂಡಿದ್ದರು. ಆದರೆ ಘಟನೆಯಲ್ಲಿ ತಮ್ಮ ಪಾತ್ರ ಇಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದರು.
ಅಂಬಿಕಾ ಹೇಳಿಕೆ ನೀಡುತ್ತಿದ್ದಂತೆಯೇ, ಮಹದೇವಸ್ವಾಮಿ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
ಯಾವ ಸೆಕ್ಷನ್ ಅಡಿ ದೂರು ದಾಖಲಿಸುವುದು?
ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವುದು, ಅವರ ಮೇಲೆ ಯಾವ ಸೆಕ್ಷನ್ ಹಾಕಬೇಕು ಎಂದು ಚರ್ಚಿಸಲಾಗುತ್ತಿದೆ. ಪ್ರಾಥಮಿಕ ತನಿಖೆಯ ವರದಿಯನ್ನು ಡಿವೈಎಸ್ಪಿ ಪುಟ್ಟ ಮಾದಯ್ಯ ಸಲ್ಲಿಸಿದ್ದು, ಅದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಆರೋಪಿಗಳ ಹಿನ್ನೆಲೆ, ಘಟನೆಗೆ ಸಂಬಂಧಿಸಿದ ಇತರೆ ಮಾಹಿತಿಗಳನ್ನು ಸಂಗ್ರಹಿಸುವಂತೆ ಪಶ್ಚಿಮ ವಲಯ ಐಜಿಪಿ ಶರತ್ ಚಂದ್ರ ಸೂಚನೆ ನೀಡಿದ್ದಾರೆ.
ಕೊಳ್ಳೇಗಾಲದ ದಾಸೋಹ ಮಠದಲ್ಲಿ ಇರುವ ಇಮ್ಮಡಿ ಮಹದೇವಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ.