ವಿಚಿತ್ರ ಚರ್ಮರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ಕೊನೆಗೂ ಸಿಕ್ತು ಚಿಕಿತ್ಸೆ!
ಚಾಮರಾಜನಗರ, ಆಗಸ್ಟ್ 12: ಇಂದೋ ನಾಳೆಯೋ ಕುಸಿದು ಬೀಳುವಂತಿದ್ದ ಮನೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಮೈಮೇಲೆ ಬೊಬ್ಬೆಗಳಾಗಿ, ಅದು ಕೊಳೆತು ದುರ್ವಾಸನೆ ಬೀರುತ್ತಿದ್ದರೂ ಹೊರಗೆ ಬಾರದೆ ಮನೆಯ ಕೊಠಡಿಯೊಳಗೆ ದಿನಕಳೆಯುತ್ತಿದ್ದ ವ್ಯಕ್ತಿಯೊಬ್ಬನ ಬಗ್ಗೆ ಮಾಹಿತಿ ಪಡೆದ ತಹಸೀಲ್ದಾರ್ ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಪ್ಲೇಟು ತೊಳ್ಯೋಕೂ ನೀರಿಲ್ಲ, ವಡ್ಡನಹೊಸಹಳ್ಳಿ ಶಾಲೇಲಿ ಇದೆಂಥ ದುಸ್ಥಿತಿ!
ಬಂಡೀಪುರ ಹುಲಿಯೋಜನೆಯ ವ್ಯಾಪ್ತಿಗೆ ಬರುವ ಕಾರೇಮಾಳದ ಚೆಲುವಯ್ಯ(45) ಎಂಬಾತನೇ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದ ವ್ಯಕ್ತಿ. ಕೂಲಿ ಅರಸಿಕೊಂಡು ಕೊಡಗಿನತ್ತ ಕೆಲವು ತಿಂಗಳ ಹಿಂದೆ ಹೋಗಿದ್ದ ಚೆಲುವಯ್ಯ ಅಲ್ಲಿಂದ ಬಂದ ಬಳಿಕ ಕಾಯಿಲೆಗೆ ಬಿದ್ದದ್ದರು. ಎರಡು ತಿಂಗಳಿನಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯದ ಕಾರಣ ಅವರ ಮೈಮೇಲೆಲ್ಲ ಗುಳ್ಳೆಗಳು ಕಾಣಿಸಿದವು. ಅವು ಉಲ್ಭಣವಾಗಿ ಕೊಳೆಯತೊಡಗಿದವು. ಇದು ದುರ್ವಾಸನೆ ಬೀರ ತೊಡಗಿತು. ಜತೆಗೆ ಗಾಯದಲ್ಲಿ ಹುಳಗಳು ಕಾಣಿಸತೊಡಗಿದವು. ಆತನ ಬಳಿಗೆ ಹೋಗಲು ನಿರಾಕರಿಸುತ್ತಿದ್ದ ಜನ ಕಿಟಿಕಿಯಿಂದಲೇ ಊಟ ಕೊಡುತ್ತಿದ್ದರು. ಅದನ್ನು ಸೇವಿಸಿಕೊಂಡು ಚೆಲುವಯ್ಯ ಜೀವನ ಸಾಗಿಸುತ್ತಿದ್ದನು.
ಇದೀಗ ಈತನ ಬಗ್ಗೆ ತಿಳಿದ ಗುಂಡ್ಲುಪೇಟೆ ತಹಸೀಲ್ದಾರ್ ಕೆ.ಸಿದ್ದು ಅವರು ಆರೋಗ್ಯಾಧಿಕಾರಿ, ಸಿಬ್ಬಂದಿಗಳೊಂದಿಗೆ ಕಾರೇಮಾಳ ಹಾಡಿಗೆ ಹೋಗಿ ಅಲ್ಲಿನ ಇತರೆ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಜತೆಗೆ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದ ಚೆಲುವಯ್ಯನನ್ನು ಹಾಡಿಯಿಂದ ಒಂದಷ್ಟು ದೂರ ಹೊತ್ತು ತಂದು ಬಳಿಕ ಆಂಬ್ಯಲೆನ್ಸ್ ನಲ್ಲಿ ಗುಂಡ್ಲುಪೇಟೆ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚನೆ ನೀಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸುವ ಸಾಧ್ಯತೆಯಿದೆ.
ಸದ್ಯ ಆಸ್ಪತ್ರೆಗೆ ಸೇರಿದ್ದರಿಂದ ಸುತ್ತಮುತ್ತಲಿನ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಆತನಿದ್ದ ಸಂದರ್ಭ ದುರ್ವಾಸನೆ ಬೀರುತ್ತಿದ್ದರಿಂದ ಜನ ಆ ಕಡೆ ಹೋಗಲು ಹಿಂದೇಟು ಹಾಕುತ್ತಿದ್ದರು. ಹಾಡಿಗಳಲ್ಲಿ ಜನರು ಕಾಯಿಲೆ ಬಂದಾಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯದಿರುವುದರಿಂದ ಕಾಯಿಲೆಗಳು ಉಲ್ಬಣವಾಗುತ್ತಿರುವುದಲ್ಲದೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ.