ಚಾಮರಾಜನಗರ : ಕಾಂಗ್ರೆಸ್ ಗೆಲುವಿನ ಓಟಕ್ಕೆ ಕಡಿವಾಣ ಬೀಳುತ್ತಾ?
Recommended Video

ಚಾಮರಾಜನಗರ, ಏಪ್ರಿಲ್ 12 : ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಬೇಕು ಎಂದು ಬಿಜೆಪಿ ಪಣ ತೊಟ್ಟಿದೆ. ಹಾಲಿ ಸಂಸದ ಕಾಂಗ್ರೆಸ್ನ ಆರ್.ಧ್ರುವನಾರಾಯಣ್ ಅವರು ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದಾರೆ.
ಚಾಮರಾಜನಗರ-ಮೈಸೂರು ಜಿಲ್ಲೆಯನ್ನು ಒಳಗೊಂಡ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಏಪ್ರಿಲ್ 18ರಂದು ಚುನಾವಣೆ ನಡೆಯಲಿದೆ. ಸತತ 10 ವರ್ಷಗಳ ಕಾಲ ಮಾಡಿದ ಸಾಧನೆಯ ಕಿರುಹೊತ್ತಿಗೆ ಹೊರತಂದು ಅದನ್ನು ಜನರ ಮುಂದಿಟ್ಟು ಧ್ರುವನಾರಾಯಣ್ ಅವರು ಮತ ಕೇಳುತ್ತಿದ್ದಾರೆ.
ನಂಜನಗೂಡು ಉಪ ಚುನಾವಣೆ ಬಳಿಕ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕರ್ತರು, ನಾಯಕರ ಒತ್ತಾಯಕ್ಕೆ ಮಣಿದು ಚಾಮರಾಜನಗರದಿಂದ ಕಣಕ್ಕಿಳಿದಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಬ್ಬರು ಬಿಎಸ್ಪಿ ಶಾಸಕರು ಇದ್ದಾರೆ. ಆದ್ದರಿಂದ ಪಕ್ಷ ಡಾ.ಶಿವಕುಮಾರ್ ಅವರನ್ನು ಲೋಕಸಭಾ ಕಣಕ್ಕಿಳಿಸಿದೆ. ಮೈಸೂರಿನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ಪಕ್ಷದ ವರಿಷ್ಠೆ ಮಾಯಾವತಿ ಅವರು ಪ್ರಚಾರವನ್ನು ನಡೆಸಿದ್ದಾರೆ....

ಬಿಜೆಪಿ ಗೆದ್ದೇ ಇಲ್ಲ
ಹಿಂದಿನ ಚುನಾವಣೆ ಫಲಿತಾಂಶವನ್ನು ನೀಡಿದರೆ ಚಾಮರಾಜನರ ಕಾಂಗ್ರೆಸ್ ಭದ್ರಕೋಟೆ. 14 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್ ಗೆದ್ದಿದೆ. 4 ಬಾರಿ ಜನತಾ ಪರಿವಾರದ ಅಭ್ಯರ್ಥಿ ಗೆದ್ದಿದ್ದಾರೆ. ಈ ಬಾರಿ ಗೆದ್ದರೆ ಬಿಜೆಪಿ ಖಾರೆ ತೆರಯಬೇಕು. ಹಿತೈಷಿಗಳಾದ ಆರ್.ಧ್ರುವನಾರಾಯಣ್ ಮತ್ತು ವಿ.ಶ್ರೀನಿವಾಸ ಪ್ರಸಾದ್ ಎದುರಾಳಿಗಳು.

ಕ್ಷೇತ್ರವಾರು ಬಲಾಬಲ
ಚಾಮರಾಜನಗರ ಜಿಲ್ಲೆಯ 4, ಮೈಸೂರೂ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಲೋಕಸಭಾ ವ್ಯಾಪ್ತಿಗೆ ಸೇರುತ್ತವೆ.
* ಚಾಮರಾಜನಗರ, ಹನೂರು, ವರುಣಾ, ಎಚ್.ಡಿ.ಕೋಟೆ - ಕಾಂಗ್ರೆಸ್
* ಕೊಳ್ಳೇಗಾಲ - ಬಿಎಸ್ಪಿ
* ಗುಂಡ್ಲುಪೇಟೆ, ನಂಜನಗೂಡು - ಬಿಜೆಪಿ
* ತಿ.ನರಸೀಪುರ - ಜೆಡಿಎಸ್

ಆರ್.ಧ್ರುವನಾರಾಯಣ್ ಪ್ಲಸ್ ಪಾಯಿಂಟ್
ಹಾಲಿ ಸಂಸದ ಆರ್.ಧ್ರುವನಾರಾಯಣ್ ಅವರು 5 ವರ್ಷದಲ್ಲಿ ಕ್ಷೇತ್ರಕ್ಕೆ 25 ಕೋಟಿ ಅನುದಾನ ತಂದಿದ್ದಾರೆ. 3 ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿದ್ದಾರೆ. ಅಧಿವೇಶನಕ್ಕೆ ತಪ್ಪದೇ ಹಾಜರಾಗುತ್ತಾರೆ. 2009, 2014ರಲ್ಲಿ ಮಾಡಿದ ಕೆಲಸದ ಕಿರು ಹೊತ್ತಿಗೆ ಮುದ್ರಿಸಿ ಅದನ್ನು ಜನರ ಮುಂದಿಟ್ಟು ಮತ ಕೇಳುತ್ತಿದ್ದಾರೆ. ಸರಳ ವ್ಯಕ್ತಿತ್ವ, ಜನರಿಗೆ ಸದಾ ಸಿಗುತ್ತಾರೆ ಎಂಬುದು ಪ್ಲಸ್ ಪಾಯಿಂಟ್.

ವಿ.ಶ್ರೀನಿವಾಸ ಪ್ರಸಾದ್
20 ವರ್ಷಗಳ ಬಳಿಕ ವಿ.ಶ್ರೀನಿವಾಸ ಪ್ರಸಾದ್ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. 1984, 1989, 1991, 1999ರಲ್ಲಿ ಸಂಸದರಾಗಿ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿ ಅವರ ಅಲೆಯನ್ನು ನೆಚ್ಚಿಕೊಂಡಿದ್ದಾರೆ. ಕಾರ್ಯಕರ್ತರು ಬೆನ್ನಿಗೆ ನಿಂತಿದ್ದು, ಗೆಲ್ಲಿಸಿಕೊಂಡು ಬರುವ ಅಭಯ ನೀಡಿದ್ದಾರೆ.

ಆರ್.ಧ್ರುವನಾರಾಯಣ್ ಗೆಲುವು
2014ರ ಚುನಾವಣೆಯಲ್ಲಿ ಕಾಂಗ್ರೆಸ್ನ ಆರ್.ಧ್ರುವನಾರಾಯಣ್ ಅವರು 5,67,782 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ ಅವರು 4,26,600 ಮತಗಳನ್ನು ಪಡೆದಿದ್ದರು. ಜೆಡಿಎಸ್ನ ಎಂ.ಶಿವಣ್ಣ ಅವರು 58,760 ಮತ ಪಡೆದಿದ್ದರು.












Click it and Unblock the Notifications