ಚಾಮರಾಜನಗರ: ಮುಂಗಾರು ಪೂರ್ವ ಮಳೆಗೆ ತುಂಬಿವೆ ಕೆರೆ ಕಟ್ಟೆಗಳು
ಚಾಮರಾಜನಗರ, ಜೂನ್ 3: ಮುಂಗಾರು ಪೂರ್ವ ಮಳೆಯು ಜಿಲ್ಲೆಯ ವಿವಿಧೆಡೆ ಜೋರಾಗಿ ಸುರಿದಿದ್ದು, ಈಗಾಗಲೇ ಹಲವೆಡೆ ಕೊಳ, ಕೃಷಿ ಹೊಂಡ ಮತ್ತು ಕೆರೆಕಟ್ಟೆಗಳಲ್ಲಿ ನೀರು ಕಾಣಿಸಿಕೊಂಡಿರುವುದರಿಂದ ರೈತರು ಖುಷಿಯಾಗಿದ್ದಾರೆ.
ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ. ಇದು ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ.
ಮೇ ಮೊದಲ ಮತ್ತು ಎರಡನೇ ವಾರ ಚಾಮರಾಜನಗರ ಸುತ್ತಮುತ್ತ, ಬಿಳಿಗಿರಿರಂಗನಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಹಂಗಳ ಮತ್ತು ತೆರಕಣಾಂಬಿ ಹೋಬಳಿಯ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆಯಾಗಿತ್ತು. ನಂತರ ಮಳೆ ಕೈಕೊಟ್ಟಿತ್ತು. ಇದೀಗ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ರೈತರ ಮುಖದಲ್ಲಿ ಖುಷಿ ತಂದಿದೆ. ಕೃಷಿ ಚಟುವಟಿಕೆಗಳು ಬಿರುಸುಗೊಂಡು ನೆಲಗಡಲೆ ಬಿತ್ತನೆಗೆ ಜಮೀನು ಹದ ಮಾಡುವ ಕಾರ್ಯ ಸಾಗಿದೆ.

ಇತ್ತೀಚೆಗೆ ಜಿಲ್ಲೆಯಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬಿರು ಬಿಸಿಲಿನಿಂದ ಕಂಗಾಲಾದ ಜನರು ಮಳೆ ಯಾವಾಗ ಬೀಳುತ್ತದೋ ಎಂದು ಕಾಯುವಂತಾಗಿತ್ತು. ಈ ಹಿಂದೆ ಬಿದ್ದ ಮಳೆಗೆ ಭೂಮಿ ತೇವಗೊಂಡಿದ್ದರಿಂದ ರೈತರು ಜೋಳ, ಸೂರ್ಯಕಾಂತಿ, ಹೆಸರು, ಉದ್ದು, ಅಲಸಂದೆ, ಹತ್ತಿ ಬಿತ್ತನೆ ಮಾಡಿ ಮಳೆಯತ್ತ ಮುಖ ಮಾಡಿದ್ದರು. ಕಳೆದೆರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದ ರೈತರು ಸಮಾಧಾನಗೊಂಡಿದ್ದಾರೆ.
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯ ತನಕ ಒಟ್ಟು 222 ಮಿ.ಮೀ. ವಾಡಿಕೆ ಮಳೆಯಾಗಬೇಕು. ಆದರೆ 179 ಮಿ.ಮೀ. ಆಗಿದೆ. ಮೇ ತಿಂಗಳ 30ರತನಕ 110 ಮಿ.ಮೀ. ಮಳೆಯಾಗಿದೆ. ಇನ್ನೊಂದೆಡೆ ಇತಿಹಾಸ ಪ್ರಸಿದ್ಧ ದೊಡ್ಡರಸನ ಕೊಳವು ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಅರ್ಧ ತುಂಬಿಕೊಂಡಿದೆ. ಇನ್ನೊಂದು ಮಳೆಯಾದರೆ ತುಂಬಿ ಕೋಡಿ ಬೀಳುವ ಸಾಧ್ಯತೆಯಿದೆ. ಚಾಮರಾಜನಗರ ನಗರಸಭೆ ವತಿಯಿಂದ ಕಳೆದ ವರ್ಷ ಯಡಬೆಟ್ಟದಿಂದ ಹರಿದು ಬರುವ ನೀರನ್ನು ಪೈಪ್ಲೈನ್ ಮೂಲಕ ಖಾಸಗಿ ಬಸ್ ನಿಲ್ದಾಣದ ಬಳಿಯ ದೊಡ್ಡ ಅರಸನ ಕೊಳ ತಲುಪುವ ಕೆಲಸ ಮಾಡಲಾಗಿತ್ತು. ಇದರಿಂದ ನೀರು ಸಂಗ್ರಹವಾಗಲು ಸಾಧ್ಯವಾಗಿದೆ.
ಕಳೆದ ವರ್ಷವು ಮೇ ತಿಂಗಳ ಅಂತ್ಯದಲ್ಲೇ ಈ ಕೆರೆ ತುಂಬಿತ್ತು. ನಗರದಲ್ಲಿ ಗೌರಿ-ಗಣೇಶ ಹಬ್ಬದ ಸಮಯದಲ್ಲಿ ವಿದ್ಯಾ ಗಣಪತಿ ಮಂಡಳಿಯವರು ಪ್ರತಿಷ್ಠಾಪಿಸಿ ಪೂಜಿಸುವ ಗಣೇಶ ಮೂರ್ತಿಯನ್ನು ಇದೇ ಕೊಳದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಆಗ ಬೋರ್ವೆಲ್ ನೀರಿನಿಂದ ಕೊಳದ ಸ್ವಲ್ಪ ಭಾಗವನ್ನು ತುಂಬಿಸಲಾಗುತ್ತಿತ್ತು. ಆದರೆ ಈ ಬಾರಿ ಈ ಕೆರೆಯಲ್ಲಿ ಸಂಗ್ರಹವಾಗುವುದರಿಂದ ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗಿದೆ. ಇದನ್ನು ಮೈಸೂರಿನ ಒಡೆಯರ್ ಆಳ್ವಿಕೆಯ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು. ಇಡೀ ನಗರವೇ ಕೆರೆಯ ನೀರನ್ನು ಬಳಸುತ್ತಿತ್ತು. ವರ್ಷವೆಲ್ಲ ನೀರು ಇರುತ್ತಿದ್ದರಿಂದ ಅಂತರ್ಜಲವೂ ಸಮೃದ್ಧವಾಗಿತ್ತು. ಮಳೆ ಪ್ರಮಾಣ ಕಡಿಮೆಯಾದ್ದರಿಂದ ಕೊಳಕ್ಕೆ ನೀರು ಬರುವುದು ಕಡಿಮೆಯಾಯಿತು ಎನ್ನಲಾಗುತ್ತಿದೆ.
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಹೋಬಳಿಯ ಭಾಗದ ವೆಂಕಟಯ್ಯಛತ್ರ, ಬಸವಾಪುರ, ಅಮಚವಾಡಿ, ಚಂದಕವಾಡಿ, ಕೋಡಿಮೋಳೆ, ನಲ್ಲೂರು, ನಾಗವಳ್ಳಿ, ಅಂಕಶೆಟ್ಟಿಪುರ ಭಾಗಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳು ಈ ಬಾರಿಯ ಮಳೆಗೆ ಭರ್ತಿಯಾಗಿದ್ದು ರೈತಾಪಿ ವರ್ಗ ನೆಮ್ಮದಿಯುಸಿರು ಬಿಡುವಂತಾಗಿದೆ.












Click it and Unblock the Notifications