ಗುಂಡ್ಲುಪೇಟೆ: ಅನೈತಿಕ ಸಂಬಂಧ, ಪತ್ನಿಯನ್ನು ಹತ್ಯೆಗೈದ ಪತಿ ಬಂಧನ
ಗುಂಡ್ಲುಪೇಟೆ, ಜುಲೈ 23 : ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ತೆರಕಣಾಂಬಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಯರಿಯೂರು ಗ್ರಾಮದ ನಿವಾಸಿ ರಾಜು ಎಂಬಾತನೇ ಬಂಧಿತ ಆರೋಪಿ. ಈತ ಜುಲೈ 14ರಂದು ತನ್ನ ಹೆಂಡತಿಯೊಂದಿಗೆ ಜಗಳ ತೆಗೆದು ಕೊಡಲಿಯಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದನು.
ಪ್ರಕರಣದ ಕುರಿತು ಮೃತಳ ಸಹೋದರ ನೀಡಿದ ದೂರನ್ನು ಸ್ವೀಕರಿಸಿದ ತೆರಕಣಾಂಬಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಶನಿವಾರ ಬೆಳಗ್ಗೆ ನಂಜನಗೂಡಿನ ಬಸ್ ನಿಲ್ದಾಣದಲ್ಲಿ ಆರೋಪಿಯಿರುವುದು ಪತ್ತೆಹಚ್ಚಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಆರೋಪಿಯಿಂದ ಹತ್ಯೆಗೆ ಬಳಸಿದ ಕೊಡಲಿಯನ್ನು ವಶಕ್ಕೆ ಪಡೆದುಕೊಂಡಿದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಕೆ.ವಿ.ಕೃಷ್ಣಪ್ಪ, ಸಹಾಯಕ ಸಬ್ಇನ್ಸ್ಪೆಕ್ಟರ್ಗಳಾದ ಮಹದೇವ, ಶಿವಣ್ಣ, ಸಿಬ್ಬಂದಿ ಪುಟ್ಟರಾಜು, ಮಲ್ಲೇಶ್, ಕುಮಾರ್ ಹಾಗೂ ಅಸಾದುಲ್ಲಾ ಭಾಗವಹಿಸಿದ್ದರು.