ಜನರೇ ಹುಷಾರ್..! ಚಾಮರಾಜನಗರ ಜಿಲ್ಲೆಯಲ್ಲಿದೆ ವಂಚಕರ ದೊಡ್ಡ ಜಾಲ
ಚಾಮರಾಜನಗರ, ನವೆಂಬರ್.29: ಜಿಲ್ಲೆಯಲ್ಲಿ ವಂಚಕರ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದ್ದು, ಸುಲಭವಾಗಿ ಹಣ ಮಾಡುವ ಸಲುವಾಗಿ ವಂಚನೆ ಮಾಡಲು ವಿವಿಧ ಮುಖವಾಡಗಳನ್ನು ಧರಿಸಿಕೊಂಡು ಬರುತ್ತಿರುವುದು ಇತ್ತೀಚೆಗಿನ ಬೆಳವಣಿಗಳಿಂದ ಬೆಳಕಿಗೆ ಬಂದಿದೆ.
ಗಾಂಜಾ, ಚಿಪ್ಪುಹಂದಿ ಮಾರಾಟ, ಆನೆದಂತ ಹಾಗೂ ನಕಲಿ ನಾಗಮಣಿಗಳನ್ನು ಮಾರಾಟ ಮಾಡಿ ದಿಢೀರ್ ದುಡ್ಡು ಮಾಡುವ ಸಲುವಾಗಿ ಒಬ್ಬರ ನಂತರ ಒಬ್ಬರು ಎಂಬಂತೆ ವಂಚಕರು ಪೊಲೀಸರಿಗೆ ಸಿಕ್ಕಿ ಬೀಳುತ್ತಿದ್ದಾರೆ.
ಹನೂರು ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಗಾಂಜಾದ ಕಮಟು ವಾಸನೆ ಬರುತ್ತಿತ್ತು. ಮೇಲಿಂದ ಮೇಲೆ ಗಾಂಜಾ ಬೆಳೆದವರನ್ನು, ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಚಿಪ್ಪು ಹಂದಿ ಮಾರಾಟದ ಎರಡು ಪ್ರಕರಣಗಳು ಪತ್ತೆಯಾಗಿದ್ದವು.
ಇದೀಗ ವ್ಯಕ್ತಿಯೊಬ್ಬ ನಕಲಿ ಮಣಿಯನ್ನು ತಂದು ಇದು ನಾಗರಹಾವಿನ ಹೆಡೆಯಿಂದ ತೆಗೆದಿದ್ದಾಗಿ ಪುಂಗಿ ಬಿಡುತ್ತಾ ಎರಡು ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದನು.
ಈ ವಿಚಾರ ಸಿಸಿಬಿ ಪೊಲೀಸರ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ರವೀಂದ್ರ ಮತ್ತು ಎಎಸೈ ಜಯಸುಂದ್ರ, ಮಹದೇವಪ್ಪ, ಮುಖ್ಯಪೇದೆಗಳಾದ ಸಿದ್ದಮಲ್ಲಶೆಟ್ಟಿ, ಸ್ವಾಮಿ ಮೊದಲಾದವರು ಸಾರ್ವಜನಿಕರಂತೆ ಕಾರಿನಲ್ಲಿ ತೆರಳಿದ್ದಾರೆ. ಮುಂದೆ ಓದಿ..

ಸಿಕ್ಕಿ ಬಿದ್ದ ಹಳ್ಳಿಮುತ್ತು
ಈ ವೇಳೆ ಪೊಲೀಸರ ಸುಳಿವು ಸಿಗುತ್ತಿದ್ದಂತೆಯೇ ಸುತ್ತಮುತ್ತಲಿದ್ದವರು ಓಡಿ ಹೋಗಿದ್ದು ನಾಗಮಣಿ ಎಂದು ನಂಬಿಸುತ್ತಿದ್ದ ಹಳ್ಳಿಮುತ್ತು ಸಿಕ್ಕಿ ಬಿದ್ದಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗಿದೆ.

ತಪ್ಪೊಪ್ಪಿಕೊಂಡ ಆರೋಪಿ
ಹಳ್ಳಿಮುತ್ತುನನ್ನು ವಿಚಾರಣೆಗೊಳಪಡಿಸಿದಾಗ ಆತ ಅವರೆಕಾಳು ಗಾತ್ರದ ನಕಲಿ ಮಣಿಯೊಂದನ್ನು ತೋರಿಸಿ ಅದು ನಾಗರಹಾವಿನಿಂದ ಸಿಕ್ಕಿದ್ದಾಗಿ ಜನಕ್ಕೆ ಹೇಳಿ 2 ಲಕ್ಷ ರೂ. ನೀಡಿದರೆ ಕೊಡುವುದಾಗಿ ವ್ಯವಹಾರಕ್ಕೆ ಯತ್ನಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಹನೂರು ಪೊಲೀಸರಿಗೆ ಒಪ್ಪಿಸಲಾಗಿದ್ದು ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ಸುಲಿಗೆ ಮಾಡುವ ದಂಧೆ
ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರು, ಕೊಳ್ಳೇಗಾಲ ವ್ಯಾಪ್ತಿಯಲ್ಲಿ ವಂಚಕರ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದು, ಹಲವು ಬಗೆಯ ಅಕ್ರಮ ವ್ಯವಹಾರಗಳನ್ನು ಮಾಡುತ್ತಾ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ದಂಧೆಗಿಳಿದ್ದಾರೆ.

ಪೊಲೀಸ್ ಠಾಣೆಗೆ ಮಾಹಿತಿ ನೀಡಿ
ನಾಗಮಣಿ ಎನ್ನುತ್ತಾ ಯಾವುದೋ ಮಣಿಯೊಂದನ್ನು ನೀಡಿ ವಂಚಿಸುವುದು ಒಂದು ಕಡೆಯಾಗಿದ್ದರೆ ಈ ಭಾಗದಲ್ಲಿ ಚಿಪ್ಪು ಹಂದಿ ಸೇರಿದಂತೆ ಹಲವು ಪ್ರಾಣಿಪಕ್ಷಿಗಳು ಮನೆಯಲ್ಲಿಟ್ಟುಕೊಂಡರೆ ಅದೃಷ್ಟ ಒಲಿಯುತ್ತದೆ ಎಂದು ತಲೆಸವರಿ ಮಾರಾಟ ದಂಧೆಯೂ ನಡೆಯುತ್ತಿದೆ.
ಇನ್ನಾದರೂ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕಿದ್ದು, ಇಂತಹ ದಂಧೆಗಳ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.












Click it and Unblock the Notifications