ಚಾಮರಾಜನಗರ ದಸರಾಗೆ ಚಾಲನೆ; ಇಂದು ಸಂಜೆಯಿಂದ ಸಾಂಸ್ಕೃತಿಕ ಕಲರವ
ಚಾಮರಾಜನಗರ, ಸೆಪ್ಟೆಂಬರ್, 27: ನಾಲ್ಕು ದಿನಗಳ ಕಾಲ ನಡೆಯುವ ಚಾಮರಾಜನಗರ ಜಿಲ್ಲೆಯ ದಸರಾಗೆ ಇಂದು ಸಾಂಪ್ರದಾಯಿಕವಾಗಿ ಚಾಲನೆ ಕೊಡಲಾಗಿದೆ. ಜಿಲ್ಲೆಯಲ್ಲಿ ಇಂದಿನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ಮೇಳೈಸಲಿದೆ.
ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಶಾಸಕ ಸಿ.ಪುಟ್ಟರಂಗಶೆಟ್ಟಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತಿ ಸಿಇಒ ಕೆ.ಎಂ.ಗಾಯತ್ರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಇದ್ದರು.
ಚಾಮರಾಜನಗರ ದಸರಾಗೆ ಚಾಲನೆ
ದಸರಾ ಉತ್ಸವ ಅಂಗವಾಗಿ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿರುವ ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಉದ್ಘಾಟಿಸಿದರು. ಬಳಿಕ ಜೆ.ಎಚ್.ಪಟೇಲ್ ಸಭಾಂಗಣ ಹಾಗೂ ವರನಟ ಡಾ.ರಾಜ್ಕುಮಾರ್ ರಂಗಮಂದಿರದಲ್ಲಿ ಏರ್ಪಡಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದ್ದು, ಕೆಲವೇ ಕ್ಷಣಗಳಲ್ಲಿ ಸಚಿವ ಸೋಮಣ್ಣ ಪ್ರಧಾನ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಪ್ರತಿ ದಿನ ಜಿಲ್ಲೆಯ ಜಾನಪದ ಕಲೆಗಳು ಪ್ರದರ್ಶನ ಕಾಣಲಿವೆ. ಪ್ರತಿ ದಿನವೂ 20ಕ್ಕೂ ಹೆಚ್ಚು ಜಾನಪದ ತಂಡಗಳು ಕಲೆಯನ್ನು ಪ್ರದರ್ಶಿಸಲಿವೆ. ಸೋಬಾನೆ ಪದ, ಗೊರವರ ಕುಣಿತ, ಕಂಸಾಳೆ, ನೀಲಗಾರರ ಪದ, ತಂಬೂರಿ ಪದ, ಡೊಳ್ಳು ಕುಣಿತ, ತೊಗಲು ಗೊಂಬೆಯಾಟ, ಭಜನೆ, ನೃತ್ಯ ರೂಪಕ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆಯಲಿವೆ. ಇನ್ನು ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಕಲಾವಿದರು ಜನರನ್ನು ರಂಜಿಸಲಿದ್ದಾರೆ.
ದಸರಾ ಉತ್ಸವಕ್ಕೆ ಮುಂಚಿತವಾಗಿ ತಯಾರಿ
ಚಾಮರಾಜನಗರ ದಸರಾ ಮಹೋತ್ಸವವನ್ನು ಅದ್ಧೂರಿ ಹಾಗೂ ವೈವಿಧ್ಯಮಯವಾಗಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದರು. ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯ ಸಮಿತಿ ಸಭಾಂಗಣದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಂಬಂಧ ಜಿಲ್ಲೆಯ ಶಾಸಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿತ್ತು. ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಲ್ಲಿ ದಸರಾ ಅದ್ಧೂರಿ ಆಚರಣೆಗೆ ಸಾಧ್ಯವಾಗಿರಲಿಲ್ಲ. ಐತಿಹಾಸಿಕ ಪರಂಪರೆ ಹಿನ್ನೆಲೆ ದಸರಾ ಮಹೋತ್ಸವವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ಈ ಉದ್ದೇಶದಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವವನ್ನು ಹೆಚ್ಚು ವಿಜೃಂಭಣೆಯಿಂದ ನಡೆಸಬೇಕು ಎಂದು ಸಚಿವರು ತಿಳಿಸಿದ್ದರು.
ಅದ್ದೂರಿ ದಸರಾ ಆಚರಿಸಲು ಸಚಿವರು ಸೂಚನೆ
ಚಾಮರಾಜೇಶ್ವರ ದೇವಾಲಯದ ಬಳಿ ದಸರಾ ಮಹೋತ್ಸವದ ಪ್ರಧಾನ ವೇದಿಕೆ ಅಚ್ಚುಕಟ್ಟಾಗಿ ಹಾಗೂ ವೈಭವಯುತವಾಗಿ ಸಿದ್ದವಾಗಿದೆ. ಈ ಬಾರಿ ದೀಪಾಲಂಕಾರ ವಿಶೇಷವಾಗಿ ಆಗಬೇಕು. ಸರ್ಕಾರಿ ಕಟ್ಟಡಗಳು, ಪ್ರಮುಖ ವೃತ್ತಗಳು, ರಸ್ತೆಗಳು, ಇತರೆ ಕಡೆಗಳಲ್ಲಿಯೂ ಜಗಮಗಿಸುವ ದೀಪಾಲಂಕಾರ ಮಾಡಬೇಕು. ಜಿಲ್ಲಾ ಕೇಂದ್ರದ ಎಲ್ಲಾ ದಿಕ್ಕಿನ ಪ್ರವೇಶ ದ್ವಾರಗಳಲ್ಲಿ ಸ್ವಾಗತ ಕಮಾನುಗಳು ದೀಪಾಲಂಕಾರದಿಂದ ಕೂಡಿರಬೇಕು. ತಾಲೂಕು ಕೇಂದ್ರಗಳಲ್ಲಿಯೂ ಸಹ ಗ್ರಾಮೀಣ ದಸರಾ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ದೀಪಾಲಂಕಾರ ಆಗಬೇಕು. ಜಿಲ್ಲೆಯ ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಕಳೆಗಟ್ಟಬೇಕು ಎಂದು ಸಚಿವರು ಸೆಸ್ಕಂ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ದಸರಾ ವೈಭವ
ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ಮೂಡಿಬರಬೇಕು. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಬೇಕು. ಹೊರ ಭಾಗದ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳು ಅದ್ಧೂರಿಯಾಗಿ ಪ್ರಸ್ತುತಪಡಿಸಬೇಕು. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರಾಧಾನ್ಯತೆ ನೀಡಿ ಉತ್ತಮವಾಗಿ ದಸರಾ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಳ್ಳಬೇಕು. ಹನೂರು, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳಲ್ಲಿಯೂ ದಸರಾ ಆಚರಣೆ ವಿಜೃಂಭಣೆಯಿಂದ ನಡೆಯುವಂತಾಗಬೇಕು ಎಂದು ಸಚಿವರು ಹೇಳಿದ್ದರು.