ಚಾಮರಾಜನಗರ: ಐವರನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ!
ಚಾಮರಾಜನಗರ, ಜುಲೈ 23 : ಐವರನ್ನು ಹತ್ಯೆ ಮಾಡಿದ ಕೊಲೆ ಆರೋಪಿಗೆ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ 2015 ಮೇ 11ರ ಮಧ್ಯರಾತ್ರಿ ನಡೆದ ಐವರ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಕೊಲೆ ಆರೋಪಿ ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ತಾಲೂಕಿನ ಪೆರಿಯಾರ್ ದ ನಿವಾಸಿ ಮುರುಘ ಅಲಿಯಾಸ್ ಮುರುಗೇಶ್ ಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.

ಮುರುಘ ಅಲಿಯಾಸ್ ಮುರುಘೇಶ್ ರಾಜೇಂದ್ರನ್ ಪತ್ನಿ ರಾಜಮ್ಮ ಹಾಗೂ ಕಾಶಿ ಅಲಿಯಾಸ್ ಶಿವಕುಮಾರ ಪತ್ನಿ ಶಿವಮ್ಮ ಅವರನ್ನು ಲೈಂಗಿಕ ಕ್ರಿಯೆಗೆ ಪೀಡುಸುತ್ತಿದ್ದ.
ಈ ಮಹಿಳೆಯರು ಮುರುಗೇಶನ ಇಚ್ಛೆಗೆ ಒಪ್ಪದಿದ್ದಾಗ 2015 ಮೇ 11ರ ಮಧ್ಯರಾತ್ರಿ ಈ ಐದು ಜನರು ಗಾಢ ನಿದ್ರೆಯಲ್ಲಿದ್ದಾಗ ಪಟ್ಟದ ಕತ್ತಿಯಿಂದ ರಾಜೇಂದ್ರನ್, ರಾಜಮ್ಮ, ರೂಪ, ಕಾಶಿ ಅಲಿಯಾಸ್ ಶಿವಕುಮಾರ ಹಾಗೂ ಶಿವಮ್ಮ ಈ ಐದು ಜನರನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದನು.
ಮುರುಘೇಶ್ ಐದು ಜನರನ್ನು ಹತ್ಯೆಮಾಡಿ ಬಳಿಕ ರಾಜೇಂದ್ರನ್ ಬಳಿ ಇದ್ದ ಎಟಿಎಂ ಕಾರ್ಡ್ ಹಾಗೂ ಹತ್ತು ಸಾವಿರಕ್ಕೂ ಹೆಚ್ಚಿನ ಹಣವನ್ನು ತೆಗೆದು ಕೊಂಡು ಪರಾರಿಯಾಗಿದ್ದನು.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿಯ ಪತ್ತೆಗೆ ಬಲೆ ಬೀಸಿದರು.
2015ರ ಮೇ 13ರಂದು ಹನೂರು ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುತ್ತಿದ್ದ ಮುರುಘೇಶ್ ನನ್ನು ಬಂಧಿಸಿ ವಿಚಾರಣೆಗೊಳ ಪಡಿಸಿದ ನಂತರ ಮುರುಘೇಶ್ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದನು.
ಈ ಸಂಬಂಧ ಶನಿವಾರ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜಿಲ್ಲಾನ್ಯಾಯಾಧೀಶ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಮುರುಘೇಶ್ ಕೊಲೆ ಮಾಡಿರುವುದು ಸಾಕ್ಷಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.
ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಟಿ.ಎಚ್.ಲೋಲಾಕ್ಷಿ ವಾದ ಮಂಡಿಸಿದರು.












Click it and Unblock the Notifications