ಚಾಮರಾಜನಗರ: ರಸ್ತೆ ಬದಿ ತಿನಿಸು ಮಾರಾಟಕ್ಕೆ ತಡೆ
ಚಾಮರಾಜನಗರ, ಜೂನ್ 25: ಈಗಾಗಲೇ ಜಿಲ್ಲೆಯಲ್ಲಿ ಡೆಂಗ್ಯೂ ಮತ್ತು ಚಿಕೂನ್ಗುನ್ಯಾ ಹಾವಳಿ ಮಿತಿಮೀರಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಇದೀಗ ಚಾಮರಾಜನಗರದ ನಗರಸಭೆಯು ರಸ್ತೆ ಬದಿಯ ಪಾನಿಪೂರಿ, ಎಣ್ಣೆಯಲ್ಲಿ ಕರಿದ ತಿಂಡಿ ತಿನಿಸುಗಳ ಮಾರಾಟಕ್ಕೆ ತಡೆಯೊಡ್ಡಿದೆ.
ಈ ಸಂಬಂಧ ನಗರಸಭಾ ಪ್ರಭಾರ ಅಧ್ಯಕ್ಷರಾದ ರಾಜಪ್ಪ ಮತ್ತು ಪೌರಾಯುಕ್ತ ರಾಜಣ್ಣನವರು ಅಧಿಕಾರಿಗಳ ಜೊತೆಗೂಡಿ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ ರಸ್ತೆ ಬದಿ ತಳ್ಳುಗಾಡಿಗಳಲ್ಲಿ ಪಾನಿಪೂರಿ ಸೇರಿದಂತೆ ಇನ್ನಿತರ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದವರಿಗೆ ಸೂಚನೆ ನೀಡಿ ತೆರವುಗೊಳಿಸಿದ್ದಾರೆ.
ಚಾಮರಾಜನಗರದ ರಥದಬೀದಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರಲ್ಲದೆ, ಪಾನಿ, ಮಸಾಲೆ ಪದಾರ್ಥಗಳನ್ನು ಚರಂಡಿಗೆ ಚೆಲ್ಲಿದರು. ಪರವಾನಗಿ ಪಡೆಯದೆ ನಡೆಸುತ್ತಿದ್ದ ಕೆಲವು ಅಂಗಡಿಗಳನ್ನು ಮುಚ್ಚಿಸಿ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ತೆರೆಯದಂತೆ ಎಚ್ಚರಿಕೆ ನೀಡಿದರು.
ದಿಢೀರ್ ಕಾರ್ಯಾಚರಣೆ ಮಾಡಿದ್ದರಿಂದ ಆತಂಕಗೊಂಡ ಅಂಗಡಿಯ ಮಾಲೀಕರು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದುವರು ಹೀಗೆ ಏಕಾಏಕಿ ಅಂಡಿಗಳನ್ನು ತೆರವುಗೊಳಿಸಿದರೆ ಏನು ಮಾಡೋದು ಎಂದು ನೋವು ತೋಡಿಕೊಳ್ಳುತ್ತಿದ್ದದ್ದು ಗೋಚರಿಸಿತು.
ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಮಾತನಾಡಿದ ನಗರಸಭಾ ಪ್ರಭಾರ ಅಧ್ಯಕ್ಷ ರಾಜಪ್ಪ ನಗರದಲ್ಲಿ ಡೆಂಗ್ಯೂ ಜ್ವರ ಹಾಗೂ ಚಿಕೂನ್ಗುನ್ಯಾ ಕಾಯಿಲೆಗಳು ಹೆಚ್ಚುತ್ತಿರುವ ಕಾರಣ, ಜತೆಗೆ ಈ ಅಂಗಡಿಗಳಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿರುವುದರಿಂದ ಕಾರ್ಯಾಚರಣೆ ನಡೆಸಲಾಗಿದೆ.
ಇನ್ನು ಮುಂದೆ ಸ್ವಚ್ಛತೆಗೆ ಆದ್ಯತೆ ನೀಡಿ ಯಾವ ಅಂಗಡಿಗಳ ಮಾಲಿಕರು ಸ್ವಚ್ಛತೆಯನ್ನು ಕಾಪಾಡುವುದಿಲ್ಲವೋ ಅಂತಹ ಅಂಗಡಿಗಳ ಪರವಾನಗಿ ರದ್ದು ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಕಾರ್ಯಾಚರಣೆ ಕೇವಲ ಒಂದು ದಿನದಲ್ಲ. ಪ್ರತಿ ದಿನವೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಮಡಿಕೇರಿಯಲ್ಲೂ ಪಾನಿಪೂರಿ ಬಂದ್
ಜಾಂಡೀಸ್ ಕಾಯಿಲೆ ಹರಡುತ್ತಿರುವುದು ಮಡಿಕೇರಿಯಲ್ಲಿ ಕಂಡು ಬಂದಿದ್ದರಿಂದ ನಗರದಲ್ಲಿ ರಸ್ತೆ ಬದಿ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಇಲ್ಲಿನ ಬೀದಿಗಳಲ್ಲಿ ಪಾನಿಪೂರಿ ಸೇರಿದಂತೆ ವಿವಿಧ ತಿನಿಸುಗಳ ಅಂಗಡಿಗಳು ಹುಟ್ಟಿಕೊಂಡಿದ್ದವು.
ರಾಜಸ್ತಾನ್ ಸೇರಿದಂತೆ ಹೊರ ಊರುಗಳ ಜನರು ಇಲ್ಲಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಆದರೆ ನಗರದಲ್ಲಿ ಜಾಂಡೀಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭಯವಿರುವುದರಿಂದಾಗಿ ರಸ್ತೆ ಬದಿಯ ತಿನಿಸು ಮಾರಾಟವನ್ನು ನಿಲ್ಲಿಸಲಾಗಿದೆ.