ಧೈರ್ಯ ಮೆರೆದು ಮಕ್ಕಳ ಜೀವ ಉಳಿಸಿದ ವಿದ್ಯಾರ್ಥಿಗೆ ಶೌರ್ಯ ಪ್ರಶಸ್ತಿ
ಚಾಮರಾಜನಗರ, ಜೂನ್ 23: ಸುವರ್ಣ ನ್ಯೂಸ್-ಕನ್ನಡ ಪ್ರಭ ಪತ್ರಿಕೆ ಕೊಡಮಾಡುವ 2017ನೇ ಸಾಲಿನ ಶೌರ್ಯ ಪ್ರಶಸ್ತಿಗೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗೂಳಿಪುರ ಗ್ರಾಮದ ನಿವಾಸಿ ನಾ. ಮಂಜುನಾಥಸ್ವಾಮಿ ಮತ್ತು ಗಾಯತ್ರಿ ದಂಪತಿ ಪುತ್ರ ಜಿ.ಎಂ.ಶಶಿಕುಮಾರ್ ಭಾಜನನಾಗಿದ್ದಾನೆ.
16 ವರ್ಷದ ಈ ಬಾಲಕ ಈ ಹಿಂದೆ ಧೈರ್ಯ, ಸಾಹಸ, ಸಮಯ ಪ್ರಜ್ಞೆಗಾಗಿ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ನೀಡಲಾಗುವ ಹೊಯ್ಸಳ ಶೌರ್ಯ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ಪಡೆದಿದ್ದ.

ಶಶಿಕುಮಾರ್ ಶಾಲಾ ಬಸ್ಗೆ ಬೆಂಕಿ ತಗುಲಿದಾಗ ಮಕ್ಕಳನ್ನು ರಕ್ಷಿಸುವಲ್ಲಿ ತೋರಿದ ಸಾಧನೆಗಾಗಿ ಸುವರ್ಣ ನ್ಯೂಸ್-ಕನ್ನಡ ಪ್ರಭ ಪತ್ರಿಕೆ ಜಂಟಿಯಾಗಿ ನೀಡುವ 2017 ನೇ ಸಾಲಿನ ಶೌರ್ಯಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಕಳೆದ ವರ್ಷ ಬನ್ನೂರು ರಸ್ತೆಯಲ್ಲಿರುವ ನವಕೀಸ್ ಶಾಲೆಯಲ್ಲಿ ಶಶಿಕುಮಾರ್ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವೇಳೆ 2016 ಜೂನ್ 6ರಂದು ನಾಡನಹಳ್ಳಿ ಬಳಿ ಶಾರ್ಟ್ಸಕ್ರ್ಯೂಟ್ನಿಂದಾಗಿ ತಾನು ಪ್ರಯಾಣಿಸುತ್ತಿದ್ದ ಶಾಲಾ ವಾಹನಕ್ಕೆ ಬೆಂಕಿ ತಗುಲಿತ್ತು. ಈ ವೇಳೆ ಧೈರ್ಯ ತೋರಿ ತನ್ನ ಸಹಪಾಠಿಗಳೊಡಗೂಡಿ ಸಮಯ ಪ್ರಜ್ಞೆ ಮೆರೆದು, ತುರ್ತು ನಿರ್ಗಮನದ ಬಾಗಿಲನ್ನು ತಕ್ಷಣ ತೆರೆದಿದ್ದ. ಈ ಮೂಲಕ ಅಳುತ್ತಿದ್ದ ಮಕ್ಕಳನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದ. ಈತ ತೋರಿದ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದಾಗಿ ಸುಮಾರು 60ಕ್ಕೂ ಹೆಚ್ಚು ಮಕ್ಕಳ ಪ್ರಾಣ ಉಳಿದಿತ್ತು. ಸದ್ಯ ಆತನೀಗ ಮೈಸೂರಿನ ಬೇಸ್ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ.
ಜೂ.23ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಶಿಕುಮಾರ್ ಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.












Click it and Unblock the Notifications