ಮಳೆ ನೀರಿನ ರಭಸಕ್ಕೆ ಚಾಮರಾಜನಗರದಲ್ಲಿ ಕೊಚ್ಚಿಹೋದ ಸೇತುವೆ
ಚಾಮರಾಜನಗರ, ಅಕ್ಟೋಬರ್ 13: 10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಹನೂರು ಸಮೀಪದ ಹೂಗ್ಯಂ ಅಣೆಕಟ್ಟು ಭರ್ತಿಯಾಗಿದ್ದು, ಜಲಾಶಯದಿಂದ ಹೊರ ಹೋಗುತ್ತಿರುವ ಅಪಾರ ಪ್ರಮಾಣದ ನೀರಿನ ರಭಸಕ್ಕೆ ಸೇತುವೆಯೊಂದು ಕೊಚ್ಚಿ ಹೋಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ಹೂಗ್ಯಂ ಜಲಾಶಯವು ಮಳೆರಾಯನ ಕೃಪೆಯಿಂದಾಗಿ ಭರ್ತಿಯಾಗಿದ್ದರೆ, ಜಲಾಶಯದಿಂದ ಹೊರಗೆ ಹೋಗುವ ರಭಸಕ್ಕೆ ಎರಡು ಗ್ರಾಮಗಳಿಗೆ ಸಂಪರ್ಕವಾದ ಸೇತುವೆಯೊಂದು ಕೊಚ್ಚಿಹೋಗಿದೆ. ಇದರಿಂದ ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಸಂಚಾರಕ್ಕಾಗಿ ಪರಡಾಡುತ್ತಿದ್ದಾರೆ.

ಜಲಾಶಯದ ಬಳಿಯಿರುವ ಸೇತುವೆ ಕೊಚ್ಚಿ ಹೋಗಿದ್ದರ ಬಗ್ಗೆ ಹನೂರು ಕ್ಷೇತ್ರದ ಶಾಸಕ ಆರ್. ನರೇಂದ್ರ ಅವರ ಗಮನಕ್ಕೆ ಬರುತ್ತಿದ್ದಂತೆ, ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸ್ಪಷ್ಟ ನಿದೇರ್ಶನ ನೀಡಿದ್ದಾರೆ. ಅಧಿಕಾರಿಗಳು ಹೂಗ್ಯಂ ಜಲಾಶಯದ ಬಳಿ ಜೆಸಿಬಿಯಿಂದ ಕೊಚ್ಚಿ ಹೋಗಿದ್ದ ಸೇತುವೆ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ.
ಹಿತ್ತಲ್ ದೊಡ್ಡಿ ಗ್ರಾಮ ಜಲಾವೃತ
ಧಾರಾಕಾರವಾಗಿ ಮಳೆಗೆ ಕೊಳ್ಳೇಗಾಲ ತಾಲೂಕಿನ ಹಿತ್ತಲ್ ದೊಡ್ಡಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ.
ಮಳೆಯಿಂದಾಗಿ ನೀರು ಹೊಳೆಯಂತೆ ಹರಿಯುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ಮಕ್ಕಳು ಮತ್ತು ಯುವಕರು ರಸ್ತೆಯಲ್ಲಿ ಈಜಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ಹಿತ್ತಲ್ ದೊಡ್ಡಿ ಗ್ರಾಮದಲ್ಲಿ ಸುಮಾರು ಸಾವಿರಾರು ಜನರಿದ್ದು, ಇತ್ತೀಚಿನ ದಿನಗಳಲ್ಲಿ ಸೇತುವೆ ನಿರ್ಮಾಣವಾಗಿತ್ತು. ಅದಾಗಲೇ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಇದರಿಂದ ಗ್ರಾಮದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಜನರ ನೆರವಿಗೆ ಮುಂದಾಗಬೇಕಾಗಿದೆ.












Click it and Unblock the Notifications