ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿದ ಬಿಜೆಪಿ ಮುಖಂಡ
ಚಾಮರಾಜನಗರ, ನ.25: ಚಾಮರಾಜನಗರ ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿ ಕಳೆದ 15 ವರ್ಷದಿಂದ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ಅಕ್ರಮ ಆಸ್ತಿ ಸಂಪಾದನರ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಆರೋಪಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಮೂಲಕ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದು, ಅವರ ವಿರುದ್ದ ಐಟಿ ಹಾಗೂ ಇಡಿಗೆ ದೂರು ನೀಡುತ್ತೇವೆಂದು ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ಹೇಳಿದ್ದಾರೆ.
ಚಾಮರಾಜನಗರದಲ್ಲಿ ರೈತರ ಕಷ್ಟ ಆಲಿಸದ ಅಧಿಕಾರಿಗಳು: ಸಚಿವ ವಿ.ಸೋಮಣ್ಣ ತರಾಟೆ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಶಾಸಕ ಪುಟ್ಟರಂಗಶೆಟ್ಟಿ ಸಂಪಾದನೆಗೂ ಮೀರಿ ಹೆಚ್ಚಿನ ಅಸ್ತಿಯನ್ನು ಕೇವಲ 15 ವರ್ಷಗಳ ಅವಧಿಯಲ್ಲಿ ಮಾಡಿದ್ದಾರೆ. ಕ್ಷೇತ್ರದ ಜನರು ತಮ್ಮ ಸೇವೆ ಮಾಡಲಿ ಎಂದು ಮತ ನೀಡಿದ್ದರೆ, ಅದನ್ನು ದುರ್ಬಳಕೆ ಮಾಡಿಕೊಂಡು ಸ್ವಾರ್ಥಕ್ಕಾಗಿ ಅಕ್ರಮವಾಗಿ ಹಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
"ಶಾಸಕರು ತಾವೇ ಹೇಳಿಕೊಂಡಂತೆ 42 ವರ್ಷಗಳಿಂದ ಗಣಿಗಾರಿಕೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿಇವರು ಸರಿಯಾಗಿ ಅದಾಯ ಮತ್ತು ತೆರಿಗೆ ಇಲಾಖೆಗಳಿಗೆ ಮಾಹಿತಿ ನೀಡದೇ ವಂಚಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅವರು ಕ್ಷೇತ್ರದ ಜನರಿಗೆ ಶ್ವೇತ ಪತ್ರವನ್ನು ಹೊರಡಿಸಲಿ. ಅವರು ಮಾಡಿರುವ ಅಕ್ರಮ ಆಸ್ತಿಗಳ ಬಗ್ಗೆ ತನಿಖೆಯಾಗಲಿ" ಎಂದು ನಿಜಗುಣರಾಜು ಒತ್ತಾಯಿಸಿದ್ದಾರೆ.
"ಯರಂಗಬಳ್ಳಿ ಬಳಿ ಕ್ವಾರಿ, ಗುಂಬಳ್ಳಿ ಬಳಿ ಕ್ವಾರಿ, ಶಂಕರಪುರದಲ್ಲಿ 20 ಗುಂಟೆ ಜಮೀನು, ನ್ಯಾಯಾಲಯ ರಸ್ತೆಯಲ್ಲಿ ಮನೆ, ಉಪ್ಪಿನ ಮೋಳೆ ಬಳಿ ಪೆಟ್ರೋಲ್ ಬಂಕ್ ಸೇರಿದಂತೆ ಇನ್ನು ಅನೇಕ ಕಡೆ ಅಸ್ತಿ ಪಾಸ್ತಿಗಳು ಪತ್ನಿ, ಮಕ್ಕಳ ಹೆಸರಿನಲ್ಲಿ ಮಾಡಿದ್ದು, ಇವೆಲ್ಲವೂ ಸಹ ಸಮಗ್ರ ತನಿಖೆಯಾಗಬೇಕು" ಎಂದು ನಿಜಗುಣರಾಜು ಹೇಳಿದ್ದಾರೆ.
ಬಿಜೆಪಿಯಿಂದ ಶಾಸಕ ಪುಟ್ಟರಂಗಶೆಟ್ಟಿ ವಿರುದ್ದ ಪತ್ರ ಚಳವಳಿ ಮಾಡಲಿದ್ದು, ಅಕ್ರಮ ಆಸ್ತಿ ಸಂಬಂಧ ಆದಾಯ ಮತ್ತು ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಕ್ಕೆ ದೂರು ಕೊಡುವುದಾಗಿ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಉದ್ಯಮಿಯೊಬ್ಬರು 9 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ದರು. ಈ ಆರೋಪವನ್ನು ಶಾಸಕರು ಅಲ್ಲಗಳೆದಿದ್ದರು, ಜೊತೆಗೆ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ವರಿಕೆ ನೀಡಿದ್ದರು.