ಬಿಆರ್ ಹಿಲ್ಸ್ ದೇಗುಲದ ಅರ್ಚಕರಿಗೆ ಕೋವಿಡ್ ಸೋಂಕು
ಚಾಮರಾಜನಗರ, ಏಪ್ರಿಲ್ 8; ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಯಳಂದೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಅರ್ಚಕರೊಬ್ಬರು ಹಾಗೂ ಅವರ ಕುಟುಂಬದ ಮೂವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಾರ್ಚ್ 29 ರಿಂದ ಏಪ್ರಿಲ್ 2ರಂದು ದೇಗುಲದ ಮಹಾ ಸಂಪ್ರೋಕ್ಷಣೆಯ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರಿಗೆ ಎರಡು ದಿನಗಳ ಹಿಂದೆ ಕೋವಿಡ್ ಇರುವುದು ದೃಢಪಟ್ಟಿತ್ತು.
ಹೀಗಾಗಿ ಅರ್ಚಕರು ಹಾಗೂ ಇತರ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಐದು ದಿನಗಳ ಕಾಲ ನಡೆದ ಮಹಾ ಸಂಪ್ರೋಕ್ಷಣೆಯ ಕಾರ್ಯಕ್ರಮದಲ್ಲಿ ಈ ಅರ್ಚಕರು ಕೂಡ ಭಾಗವಹಿಸಿರುವುದು ಈಗ ಆತಂಕ ತಂದಿದೆ.

ಕಾರಣ ಈ ಕಾರ್ಯಕ್ರಮದಲ್ಲಿ ಅದೆಷ್ಟು ಮಂದಿ ಪಾಲ್ಗೊಂಡಿದ್ದರೋ ಗೊತ್ತಿಲ್ಲ. ಆದರೆ ಪ್ರಮುಖವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ಕುಮಾರ್, ಶಾಸಕರಾದ ಎನ್. ಮಹೇಶ್, ಆರ್. ನರೇಂದ್ರ, ಉಪವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬದೋಲೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಾವಿರಾರು ಭಕ್ತರು ಕೂಡ ಇಲ್ಲಿಗೆ ಆಗಮಿಸಿದ್ದರು. ಇದೀಗ ಅರ್ಚಕರಿಗೆ ಕೊರೋನಾ ದೃಢಪಟ್ಟಿರುವುದು ಆತಂಕವನ್ನು ತಂದಿದೆ. ಸದ್ಯ ತಾಲೂಕು ಆಸ್ಪತ್ರೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ದೇವಾಲಯದ 35 ಅರ್ಚಕರು ಮತ್ತು ಪರಿಚಾರಕರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು ಫಲಿತಾಂಶ ಬಂದ ಬಳಿಕವಷ್ಟೆ ಮಹಾಮಾರಿ ಇನ್ನೆಷ್ಟು ಮಂದಿಗೆ ತಗುಲಿದೆ ಎಂಬುದು ಗೊತ್ತಾಗಲಿದೆ.
ಅರ್ಚಕರಿಗೆ ಸೋಂಕು ದೃಢಪಟ್ಟ ಬಳಿಕ ದೇಗುಲದಲ್ಲಿ ತೀರ್ಥ ಪ್ರಸಾದ ನೀಡುವುದನ್ನು ನಿಲ್ಲಿಸಲಾಗಿದೆ. ದಾಸೋಹ ಭನವದಲ್ಲಿ ಪ್ರಸಾದ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೇಗುಲದ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಬಿಳಿಗಿರಿರಂಗನಬೆಟ್ಟದ ಅರ್ಚಕರು ಸೇರಿದಂತೆ ಬುಧವಾರ 42 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ನಾಲ್ವರು ಗುಣಮುಖರಾಗಿದ್ದಾರೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 142 ಕ್ಕೆ ಏರಿಕೆ ಕಂಡಿದೆ. 81 ಮಂದಿ ಹೋಂ ಐಸೊಲೇಷನ್ನಲ್ಲಿದ್ದಾರೆ. ಐವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications