ಗುಂಡ್ಲುಪೇಟೆ: ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು: ಮೂತ್ರ ವಿಸರ್ಜನೆಗೆ ತೆರಳಿದ್ದ ಸ್ನೇಹಿತ ಪಾರು
ಚಾಮರಾಜನಗರ, ಆಗಸ್ಟ್, 14: ಇಬ್ಬರು ಸ್ನೇಹಿತರು ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಕಾರು ಡಿಕ್ಕಿಯಾಗಿ ಓರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆಯ ಹಂಗಳ ರಸ್ತೆಯಲ್ಲಿ ನಡೆದಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಗಣೇಶ್ (23) ಎಂಬಾತ ಮೃತಪಟ್ಟ ಬೈಕ್ ಸವಾರನಾಗಿದ್ದು, ಈತನ ಸ್ನೇಹಿತ ಈ ವೇಳೆ ಅಪಘಾತದಲ್ಲಿ ಪಾರಾದ ಘಟನೆ ನಡೆದಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಹಿಂಬದಿ ಸವಾರ ಮೂತ್ರ ವಿಸರ್ಜನೆ ಮಾಡಬೇಕೆಂದು ರಸ್ತೆ ಪಕ್ಕಕ್ಕೆ ತೆರಳಿದ್ದಾಗ ಕೇರಳ ಮೂಲದ ಕಾರು ನಿಂತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಬೈಕ್ನಲ್ಲಿ ಕುಳಿತಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಮೂತ್ರ ವಿಸರ್ಜನೆಗೆ ತೆರಳಿದ್ದ ಈತನ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಕಾರು, ಬೈಕ್ ಎರಡನ್ನೂ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
30 ಅಡಿ ಕಂದಕಕ್ಕೆ ಬಿದ್ದ ಲಾರಿ: ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಗಡಿಭಾಗದ ತಮಿಳುನಾಡಿನ ದಿಂಬಂ ಘಟ್ಟದಲ್ಲಿ 30 ಅಡಿ ಆಳಕ್ಕೆ ಲಾರಿ ಬಿದ್ದ ಘಟನೆ ನಡೆದಿದೆ.
ಮೈಸೂರಿನಿಂದ ಸತ್ಯಮಂಗಲಕ್ಕೆ ತೆರಳುತ್ತಿದ್ದ ಲಾರಿ ಇದಾಗಿದ್ದು ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳುದುಬಂದಿದೆ.
ದಿಂಬಂ ಘಟ್ಟ ಪ್ರದೇಶದಲ್ಲಿ ಒಟ್ಟು 27 ತೀವ್ರ ತಿರುವುಗಳಿದ್ದು, 17ನೇ ತಿರುವಿನಲ್ಲಿ ಲಾರಿ ತಡೆಗೋಡೆಗೆ ಗುದ್ದಿ 30 ಅಡಿ ಕಂದಕಕ್ಕೆ ಉರುಳಿದೆ. ಲಾರಿ ಬೀಳುತ್ತಿದ್ದಂತೆ ಹೊರಕ್ಕೆ ಹಾರಿದ ಲಾರಿ ಚಾಲಕನನ್ನು ಬೇರೆ ವಾಹನ ಸವಾರರು ಗಮನಿಸಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ತಮಿಳುನಾಡು ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿದ್ದಾರೆ. ಲಾರಿ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಒಂದು ತಾಸಿಗೂ ಅಧಿಕ ಕಾಲ ಅಸ್ತವ್ಯಸ್ತವಾಗಿತ್ತು.
ಚಿರತೆ ಸಾವು: ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿದ ಘಟನೆ ಮಂಗಳವಾರ (ಆಗಸ್ಟ್ 13) ರಾತ್ರಿ ಚಿತ್ರದುರ್ದುರ್ಗ ನಗರದ ಹೊರವಲಯದಲ್ಲಿ ನಡೆದಿದೆ.
ನಗರದ ಹೊರವಲಯದ ಹೊಸ ರಾಷ್ಟ್ರೀಯ ಹೆದ್ದಾರಿ ತಮಟಕಲ್ಲು ಬೈಪಾಸ್ ಬಳಿಯ ಈ ಘಟನೆ ನಡೆದಿದೆ. ಚಿರತೆ ಒಂದು ರಸ್ತೆಯಿಂದ ಮತ್ತೊಂದು ಕಡೆಗೆ ರಸ್ತೆ ದಾಟುವಾಗ ಅಪರಿಚಿತ ವಾಹನ ಚಿರತೆಗೆ ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಡಿಕ್ಕಿ ಪಡಿಸಿ
ಅಪರಿಚಿತ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇತ್ತೀಚೆಗಷ್ಟೇ ಇದೇ ಸ್ಥಳದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಕರಡಿ ಸಾವನ್ನಪ್ಪಿದ ಘಟನೆ ಕೂಡ ನಡೆದಿತ್ತು. ಇದೀಗ ಚಿರತೆ ಬಲಿಯಾಗಿದೆ.












Click it and Unblock the Notifications