ಮತ್ತೋರ್ವ ಬೇಗೂರು ಪೊಲೀಸ್ ಠಾಣೆಯ ಪೇದೆ ಆತ್ಮಹತ್ಯೆಗೆ ಶರಣು!
ಚಾಮರಾಜನಗರ, ಜೂನ್ 20 : ಕಳೆದ ತಿಂಗಳಷ್ಟೇ ಚಾಮರಾಜನಗರ ಜಿಲ್ಲೆಯ ಬೇಗೂರು ಪೊಲೀಸ್ ಠಾಣೆಯ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲಿಯೇ ಇದೀಗ ಅದೇ ಠಾಣೆಯ ಮುಖ್ಯಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೇಗೂರು ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ಕುಮಾರ್ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕೌಟುಂಬಿಕ ಕಲಹದಿಂದ ಬೇಸತ್ತು ಬೇಗೂರು ಪೊಲೀಸ್ ವಸತಿ ಗೃಹದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಅನಿಲ್ ಕಮಾರ್ ಅವರು ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಸಂಜೆ ಮನೆಗೆ ಬಂದು ಬಾಗಿಲು ತಟ್ಟಿದ್ದಾರೆ. ಆದರೆ, ಬಾಗಿಲು ತೆರೆಯದೇ ಇದ್ದಾಗ ಬಾಗಿಲನ್ನು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ.
ಚಾಮರಾಜನಗರದ ಬೇಗೂರಲ್ಲಿ ಪೊಲೀಸ್ ಪೇದೆ ನೇಣಿಗೆ ಶರಣು
ಅನಿಲ್ ಕಮಾರ್ ಮೂಲತಃ ಚಾಮರಾಜನಗರದವರಾಗಿದ್ದು, 2002ರಲ್ಲಿ ಕೊಳ್ಳೆಗಾಲ ಪೊಲೀಸ್ ಠಾಣೆಗೆ ಮುಖ್ಯಪೇದೆಯಾಗಿ ಕರ್ತವ್ಯಕ್ಕೆ ಸೇರಿದ್ದರು. ನಂತರ ಕಬ್ಬಹಳ್ಳಿ, ತೆರಕಣಾಂಬಿ, ಗುಂಡ್ಲುಪೇಟೆ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಕಳೆದ 1 ವರ್ಷದ ಹಿಂದೆ ಅಷ್ಟೇ ಮುಖ್ಯಪೇದೆಯಾಗಿ ಬಡ್ತಿ ಪಡೆದು ಬೇಗೂರು ಠಾಣೆಗೆ ವರ್ಗಾವಣೆಗೊಂಡು ಪೊಲೀಸ್ ವಸತಿಗೃಹದಲ್ಲಿ ಕುಟುಂಬದೊಂದಿಗೆ ವಾಸ್ತವ್ಯ ಹೂಡಿದ್ದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಭೇಟಿ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅನಿಲ್ಕುಮಾರ್ ಪತ್ನಿ ಸಹಿತ ಹಲವಾರನ್ನು ವಿಚಾರಣೆ ನಡೆಸಿದರು. ಈ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications