ಬಂಡೀಪುರದ ಹಚ್ಚಹಸಿರನ್ನು ಸವಿಯಲು ಬಂದ ಪ್ರವಾಸಿಗರು!
ಚಾಮರಾಜನಗರ, ಆಗಸ್ಟ್ 16: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬಂದಿರುವುದು ವಿಶೇಷ. ಸಾಲು ಸಾಲು ರಜೆ ಬಂದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರಿಂದ ಎಲ್ಲೆಡೆ ನೂಕು ನುಗ್ಗಲು ಕಂಡು ಬಂದಿತ್ತು. ಈ ನಡುವೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ ಸಫಾರಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೊನೆಗೂ ಬಂದ್ ಆಯ್ತು ಬಂಡೀಪುರದ ಅಕ್ರಮ ಹೊಟೇಲ್!
ಪ್ರವಾಸಿಗರ ಪೈಕಿ ರಾಜ್ಯ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮಾತ್ರವಲ್ಲದೆ ವಿದೇಶಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ಅತಿ ಹೆಚ್ಚು ಎಂದರೆ ಐನೂರು ಜನ ಬರುತ್ತಿದ್ದರೆ, ರಜಾ ದಿನವಾದ್ದರಿಂದ ಸಾವಿರಾರು ಪ್ರವಾಸಿಗರು ಸಫಾರಿಗೆ ತೆರಳಿದ್ದು ಕಂಡು ಬಂತು. ಶನಿವಾರ, ಭಾನುವಾರ ಹಾಗೂ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ.
ಜಂಗಲ್ ಲಾಡ್ಜ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡಿದ್ದರು. ಸಫಾರಿಗೆ 8 ಬಸ್ ಮತ್ತು 5 ಜಿಪ್ಸಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಅರಣ್ಯ ಇಲಾಖೆ ಮೂಲಗಳ ಪ್ರಕಾರ ಆ.12 ಮತ್ತು 13ರಂದು ತಲಾ 2.5ಲಕ್ಷ ಮತ್ತು 3.5 ಲಕ್ಷರೂಪಾಯಿ ಹಣ ಸಫಾರಿಯಿಂದ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಮಳೆ ಬಿದ್ದು ಪ್ರಕೃತಿ ಹಚ್ಚ ಹಸುರಿನಿಂದ ಕೂಡಿದ್ದು ಮೇವು ಹೇರಳವಾಗಿ ದೊರೆಯುತ್ತಿರುವುದರಿಂದ ಪ್ರಾಣಿಗಳು ಎಲ್ಲೆಂದರಲ್ಲಿ ಅಡ್ಡಾಡುತ್ತಿವೆ ಹೀಗಾಗಿ ಸಫಾರಿ ತೆರಳುವವರಿಗೆ ಕಾಡು ಪ್ರಾಣಿಗಳ ದರ್ಶನವಾಗುತ್ತಿವೆ. ಈ ನಡುವೆ ಸಫಾರಿಗೆ ತೆರಳಿದ ಪ್ರವಾಸಿಗರೊಬ್ಬರು ನೀರು ಕುಡಿಯಲು ಬಂದ ಸಾರಂಗವನ್ನು ಬೇಟೆಯಾಡಲು ಹುಲಿಯೊಂದು ಜಿಗಿಯುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದು ಅದು ವೈರಲ್ ಆಗಿದೆ. ಹುಲಿ, ಕಾಡೆಮ್ಮೆ, ಆನೆ, ಜಿಂಕೆ, ಚಿರತೆ, ಹಂದಿ, ನವಿಲುಗಳ ನೋಡಲು ಸಿಗುತ್ತಿದ್ದು, ಇದರಿಂದ ಬಂಡೀಪುರದತ್ತ ತೆರಳುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.