ಪ್ರಾಣಿಪ್ರಿಯರಿಗೆ Good news: ರಾಜ್ಯದಲ್ಲಿ ಮತ್ತೊಂದು ವನ್ಯಜೀವಿ ಸಫಾರಿ ಆರಂಭ
ಚಾಮರಾಜನಗರ, ಡಿಸೆಂಬರ್, 02: ಪರಿಸರ ಪ್ರವಾಸೋದ್ಯಮ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಇಂದಿನಿಂದ ಮತ್ತೊಂದು ವನ್ಯಜೀವಿ ಸಫಾರಿ ಆರಂಭಗೊಂಡಿದೆ.
ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಈಗಾಗಲೇ ಬಂಡೀಪುರ, ಕೆ.ಗುಡಿ, ಗೋಪಿನಾಥಂನಲ್ಲಿ ವನ್ಯಜೀವಿ ಸಫಾರಿ ಇದ್ದು, ಇಂದಿನಿಂದ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಪಿ.ಜಿ.ಪಾಳ್ಯ ಸಮೀಪ ಸಫಾರಿ ಆರಂಭಗೊಂಡಿದೆ. ಒಂದೇ ಜಿಲ್ಲೆಯಲ್ಲಿ ನಾಲ್ಕು ಕಡೆ ವನ್ಯಜೀವಿ ಸಫಾರಿ ನಡೆಸಬಹುದಾಗಿದ್ದು, ಪಿ.ಜಿ.ಪಾಳ್ಯದ ಕಡೆ ಹುಲಿ, ಚಿರತೆ ಆನೆ, ಕಾಡೆಮ್ಮೆ, ಜಿಂಕೆ, ವೈವಿಧ್ಯಮಯ ಪಕ್ಷಿಗಳು ಸೇರಿದಂತೆ ಎಲ್ಲಾ ಪ್ರಾಣಿಗಳನ್ನು ಇನ್ಮುಂದೆ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.

ಇಂದು ಬೆಳಗ್ಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಸಫಾರಿಗೆ ಚಾಲನೆ ನೀಡಿದ್ದು, ಪ್ರವಾಸಿಗರು ಇದರ ಸದುಪಯೋಗಪಡಿಸಿಕೊಂಡು ಪರಿಸರವನ್ನು ಕಣ್ತುಂಬಿಕೊಳ್ಳಬೇಕು ಹಾಗೂ ಪರಿಸರ ಉಳಿಸುವತ್ತ ಎಲ್ಲರೂ ಮುಂದಾಗಬೇಕು ಎಂದು ಹೇಳಿದ್ದಾರೆ. ಇನ್ನು, ಸಫಾರಿಗೆ ತೆರಳುವ ಪ್ರವಾಸಿಗರಿಗೆ ವಾಹನ ಶುಲ್ಕವಾಗಿ 100 ರೂಪಾಯಿ, ವಯಸ್ಕರಿಗೆ ತಲಾ 400 ಹಾಗೂ ಮಕ್ಕಳಿಗೆ 200 ರೂಪಾಯಿ ದರವನ್ನು ನಿಗದಿ ಪಡಿಸಲಾಗಿದೆ.
ಆನೆ ನಡೆದದ್ದೇ ದಾರಿ ಎಂಬ ಮಾತಿಗೆ ಸಾಕ್ಷಿಯಾದ ಈ ಘಟನೆ
ಆನೆಯೊಂದು ಇದು ನನ್ ಏರಿಯಾ ಎಂಬಂತೆ ಸಫಾರಿ ವಾಹನಕ್ಕೆ ಅಡ್ಡ ಹಾಕಿ ದಾರಿ ಕೊಡದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ವನ್ಯಜೀವಿ ಸಫಾರಿಯಲ್ಲಿ ನಡೆದಿದೆ.
ಗುರುವಾರ ಸಂಜೆಯ ಸಫಾರಿ ವೇಳೆ ಸಫಾರಿ ಬಸ್ ಅನ್ನು ಅಡ್ಡ ಹಾಕಿರುವ ಸಲಗ, ವಾಹನವನ್ನು ಹಿಮ್ಮೆಟ್ಟಿಸಿದೆ. ಆನೆ ನಡೆದಿದ್ದೆ ಹಾದಿ ಎಂಬುದಕ್ಕೆ ಬಂಡೀಪುರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದ್ದು, ಸಲಗ ದಾರಿ ಕೊಡದ ಪರಿಣಾಮ ಚಾಲಕ ವಾಹನವನ್ನು ರಿವರ್ಸ್ ಗೇರ್ನಲ್ಲಿ ಚಲಾಯಿಸಿ ಬೇರೆ ದಾರಿ ಮೂಲಕ ಸಫಾರಿಗೆ ತೆರಳಿದ್ದಾರೆ. ಈ ಆನೆ ದಾದಾಗಿರಿ ವೀಡಿಯೋ ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿದೆ. ಹೀಗೆ ಸಫಾರಿ ವೇಳೆ ಆಗಾಗ್ಗೆ ಆನೆಗಳು ವಾಹನ ಅಟ್ಟಾಡಿಸುತ್ತಿರುತ್ತವೆ.












Click it and Unblock the Notifications