ಎಚ್.ಡಿ.ಕೋಟೆಯಲ್ಲಿ ಮತ್ತೊಂದು ಹುಲಿ ಸೆರೆ
ಎಚ್.ಡಿ.ಕೋಟೆ, ಅಕ್ಟೋಬರ್ 10: ಚಾಮರಾಜನರ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಅಂತರಸಂತೆಯಲ್ಲಿ ಹುಲಿಯೊಂದನ್ನು ಸೆರೆ ಹಿಡಿಯಲಾಗಿದೆ. ಎಚ್.ಡಿ ಕೋಟೆಯಲ್ಲೇ ಸೋಮವಾರ ಹುಲಿಯೊಂದನ್ನು ಸೆರೆ ಹಿಡಿಯಲಾಗಿತ್ತು, ಇದೀಗ ಮತ್ತೊಂದು ಹುಲಿ ಸೆರೆ ಹಿಡಿಯಲಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿ ಅಂತರಸಂತೆ ಸಮೀಪದ ಜಮೀನೊಂದರ ಓಣಿ ಸಮೀಪದ ಪೊದೆಯಲ್ಲಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೆರೆಸಿಕ್ಕ ಹುಲಿ ಹೆಣ್ಣು ಹುಲಿಯಾಗಿದ್ದು, 6 ವರ್ಷ ಪ್ರಾಯವಾಗಿದೆ ಎಂದು ಪ್ರಾಣಿ ತಜ್ಞರು ಹೇಳಿದ್ದಾರೆ.
ನಾಗರಹೊಳೆಯಿಂದ ಹೊರ ಬಂದಿದ್ದ ಹುಲಿ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯ ಅರಣ್ಯದಿಂದ ಈ ಹೆಣ್ಣು ಹುಲಿ ಎರಡು ದಿನಗಳ ಕೆಳಗೆ ಹೊರಬಂದಿತ್ತು. ಆಗಾಗ ಘರ್ಜಿಸುತ್ತಾ ಹುಲಿ ಜನರಲ್ಲಿ ಭಯ ಸೃಷ್ಠಿಸಿತ್ತು.
ಭರ್ಜರಿ ಕಾರ್ಯಾಚರಣೆ
ಮೂರು ಆನೆಗಳು, ಪಶುವೈದ್ಯರು ಮತ್ತು ಅರವಳಿಕೆ ತಜ್ಞರನ್ನು ಬಳಸಿಕೊಂಡು ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ರೋಚಕ ಹುಲಿ ಬೇಟೆ
ತಜ್ಞರನ್ನು ಸ್ಥಳಕ್ಕೆ ಕರೆದೊಯ್ದು ಹುಲಿಯ ಹೆಜ್ಜೆ ಗುರುತನ್ನು ಆರಂಭದಲ್ಲಿ ಹುಡುಕಲಾಯಿತು. ನಂತರ ಹುಲಿ ಅಡಗಿರುವ ಸ್ಥಳಕ್ಕೆ ತೆರಳಿ ಆನೆಯ ಮೇಲಿನಿಂದ ಚುಚ್ಚು ಮದ್ದನ್ನು ಹಾರಿಸುವ ಮೂಲಕ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಭಯ ಹುಟ್ಟು ಹಾಕಿದ್ದ ಹುಲಿ
ಈ ಹೆಣ್ಣು ಹುಲಿ ಹಲವೆಡೆ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು. ಮೊದಲಿಗೆ ಉದಯ್ ಎಂಬ ರೈತನ ಜಮೀನಿನಲ್ಲಿ ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ಕಾಣಿಸಿಕೊಂಡಿತು. ಈ ವೇಳೆ ಕಾರ್ಯಾಚರಣೆ ತಂಡ ಆನೆಯೊಂದಿಗೆ ಅಲ್ಲಿಗೆ ಬಂದಿದ್ದು, ಆನೆಯ ಮೇಲಿಂದಲೇ ಹುಲಿಗೆ ಅರವಳಿಕೆ ಚುಚ್ಚುಮದ್ದನ್ನು ಹಾರಿಸಲಾಗಿತ್ತು.
ಆ ನಂತರ ಹುಲಿ ಅಲ್ಲಿಂದ ಅರ್ಧ ಕಿಲೋ ಮೀಟರ್ ದೂರ ಓಡಿದ್ದು ಹತ್ತಿ ಬೆಳೆಯ ಜಮೀನುಗಳಲ್ಲಿ ಓಡಿ ಹೋಗಿ ಜಯಣ್ಣ ಎಂಬುವವರ ಜಮೀನಿನಲ್ಲಿ ಪ್ರಜ್ಞೆ ತಪ್ಪಿ ಕೆಳಕ್ಕೆ ಉರುಳಿತು. ನಂತರ ಅದನ್ನು ಬಲೆ ಹಾಕಿ ಹಿಡಿಯಲಾಯಿತು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಗಳು
ಎಸಿಎಫ್ ಪೂವಯ್ಯ, ರಘು, ವಲಯ ಅರಣ್ಯಾಧಿಕಾರಿ ವಿನಯ್, ರುದ್ರಪ್ಪ, ಪಶುವೈದ್ಯರಾದ ಡಾ. ಮುಜೀಬ್, ಡಾ. ಗೋವಿಂದ್, ಅನೂಪ್, ಸಿಬ್ಬಂದಿ ಅಕ್ರಂಪಾಷ, ಸಂಜಯ್, ನಿಸಾರ್, ಗೌರಿಶಂಕರ್, ವನ್ಯಜೀವಿ ಪರಿಪಾಲಕರಾದ ಡಾ. ಸಂತೃಪ್ತ, ಕೃತಿಕಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.