ಗುಂಡ್ಲುಪೇಟೆಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ
ಮತ ಎಣಿಕೆ ಹಿನ್ನಲೆಯಲ್ಲಿ ಬುಧವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 6 ಗಂಟೆಯವರೆಗೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಚಾಮರಾಜನಗರ, ಏಪ್ರಿಲ್ 12: ಭಾರೀ ಕುತೂಹಲ ಕೆರಳಿಸಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಗುರುವಾ ಪ್ರಕಟವಾಗಲಿದ್ದು, ಮತ ಎಣಿಕೆಗಾಗಿ ಗುಂಡ್ಲುಪೇಟೆ ಪಟ್ಟಣದ ಸೆಂಟ್ಜಾನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ.
ಮತಎಣಿಕೆ ನಡೆಯಲಿರುವ ಸ್ಥಳದಲ್ಲಿ 4 ಕೊಠಡಿಗಳಲ್ಲಿ ಪ್ರತಿ ಕೊಠಡಿಗೆ 4 ಟೇಬಲ್ಲಿನಂತೆ ಒಟ್ಟು 16 ಟೇಬಲ್ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಕೊಠಡಿಯಲ್ಲಿ ಎಣಿಕೆ ಕಾರ್ಯದ ಮೇಲ್ವಿಚಾರಣೆ ನಡೆಸಲು ಒಬ್ಬರು ಚುನಾವಣಾಧಿಕಾರಿ, ಒಬ್ಬರು ಸಹಾಯಕ ಚುನಾವಣಾಧಿಕಾರಿ, ಇಬ್ಬರು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.

ಮತ ಎಣಿಕೆ ಕಾರ್ಯಕ್ಕಾಗಿ ಪ್ರತಿ ಟೇಬಲ್ಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕ ಅಧಿಕಾರಿ ಹಾಗೂ ಒಬ್ಬರು ಮೈಕ್ರೋ ಅಬ್ಸರ್ವರ್ ಅವರನ್ನು ನೇಮಕ ಮಾಡಲಾಗಿದೆ. ಮೊದಲಿಗೆ ಅಂಚೆ ಮೂಲಕ ಸ್ವೀಕರಿಸಲಾಗಿರುವ ಮತ ಪತ್ರಗಳ ಎಣಿಕೆ ಕಾರ್ಯ ನಡೆಸಿ, ನಂತರ ಇವಿಎಂ ಯಂತ್ರಗಳ ಮತ ಎಣಿಕೆ ನಡೆಸಲಾಗುತ್ತದೆ. [ಉಪಚುನಾವಣೆ: ಮತ ಎಣಿಕೆಗೆ ಸಿದ್ಧವಾಯ್ತು ನಂಜನಗೂಡು]
ಇನ್ನು ಮತ ಎಣಿಕೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಇಬ್ಬರು ಡಿವೈಎಸ್ಪಿ, 8 ಇನ್ಸ್ಪೆಕ್ಟರ್, 24 ಪಿಎಸ್ಐ, 41 ಎಎಸೈ, 204 ಹೆಡ್ಕಾನ್ಸ್ಟೇಬಲ್, 93 ಗೃಹ ರಕ್ಷಕ ಸಿಬ್ಬಂದಿ ಜೊತೆಗೆ ಅರೆ ಸೇನಾ ಪಡೆಯ ತುಕಡಿ ಹಾಗೂ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ನಿಷೇಧಾಜ್ಞೆ ಜಾರಿ
ಮತ ಎಣಿಕೆ ಹಿನ್ನಲೆಯಲ್ಲಿ ಬುಧವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 6 ಗಂಟೆಯವರೆಗೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇದಲ್ಲದೆ ಬುಧವಾರ ಮಧ್ಯರಾತ್ರಿ 12 ಗಂಟೆಯಿಂದ ಗುರುವಾರ ಮಧ್ಯರಾತ್ರಿ 12ರವರೆಗೆ ಒಣದಿನ ಘೋಷಣೆ ಮಾಡಲಾಗಿದ್ದು, ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ.
ಈಗಾಗಲೇ ಸ್ಟ್ರಾಂಗ್ ರೂಂನಲ್ಲಿರುವ ಇವಿಎಂ ಮತ ಯಂತ್ರಗಳನ್ನು ಪೊಲೀಸ್ ಬಂದೋಬಸ್ತಿನಲ್ಲಿ ಮತ ಎಣಿಕೆ ಸ್ಥಳಕ್ಕೆ ತಂದು ಬೆಳಿಗ್ಗೆ 8ಗಂಟೆ ವೇಳೆಯಲ್ಲಿ ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ.











Click it and Unblock the Notifications