ಆರ್ಟಿಕಲ್ 370 ರದ್ದಿಗೆ ಸುಪ್ರೀಂ ಅಸ್ತು: ಚಾಮರಾಜನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ
ಚಾಮರಾಜನಗರ, ಡಿಸೆಂಬರ್, 11: ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370ನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಹಿನ್ನೆಲೆ ಇಂದು ಚಾಮರಾಜನಗರದಲ್ಲಿ ಬಿಜೆಪಿಗರು ಸಂಭ್ರಮಾಚರಣೆ ನಡೆಸಿದರು.
ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದ ತನಕ ಜೈಕಾರ ಘೋಷಣೆ ಹಾಕುತ್ತಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದಕ್ಕೆ ನೀಡಿದ್ದ ವಿಶೇಷ ಹಕ್ಕನ್ನು ತೆಗೆಯುವ ಮೂಲಕ ಭಾರತ ಸಾರ್ವಭೌಮತೆಯನ್ನು ಎತ್ತಿ ಹಿಡಿಲಾಗಿದೆ. 370 ರದ್ದಾದ ಬಳಿಕ ಅಲ್ಲಿ ಅಭಿವೃದ್ಧಿ ಆಗುತ್ತಿದ್ದು, ಅಹಿತಕರ ಘಟನೆಗಳು ನಿಯಂತ್ರಣಕ್ಕೆ ಬಂದಿದೆ ಎಂದು ಮಾಜಿ ಶಾಸಕ ಎನ್.ಮಹೇಶ್ ಹೇಳಿದರು. ಇನ್ನು ಮಾಜಿ ಶಾಸಕ ಬಾಲರಾಜು ಸೇರಿದಂತೆ ಬಿಜೆಪಿ ಮುಖಂಡರು ಪರಸ್ಪರ ಸಿಹಿ ಹಂಚಿ ಸುಪ್ರೀಂ ಕೋರ್ಟ್ ತೀರ್ಪುನ್ನು ಸ್ವಾಗತಿಸಿದರು.
ಕೈ ಸಂಸದ ಸಾಹು ವಿರುದ್ಧ ಕಮಲಪಡೆ ಪ್ರತಿಭಟನೆ
ಜಾರ್ಖಂಡ್ನ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಮನೆಯಲ್ಲಿ ಪತ್ತೆಯಾದ ಕೋಟ್ಯಂತರ ದಾಖಲೆರಹಿತ ಹಣದ ವಿರುದ್ಧ ಇಂದು ಚಾಮರಾಜೇಶ್ವರ ದೇಗುಲ ಮುಂಭಾಗ ಬಿಜೆಪಿ ಮುಖಂಡರು ಧರಣಿ ನಡೆಸಿ ಕೈಪಡೆ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ, ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಕಾಂಗ್ರೆಸ್ನವರ ಬಳಿ ಎಷ್ಟರ ಮಟ್ಟಿಗೆ ಕಪ್ಪು ಹಣ ಇದೆ ಎಂಬುದಕ್ಕೆ ಸಾಹು ಪ್ರಕರಣ ಸಾಕ್ಷಿಯಾಗಿದೆ ಎಂದು ಆಕ್ರೋಶ ಹೊಹಾಕಿದರು.
ಸಿದ್ದರಾಮಯ್ಯ ಹೇಳುತ್ತಾರೆ, ಕಾಂಗ್ರೆಸ್ನವರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ ಅಂತಾ. ಕಾಂಗ್ರೆಸ್ ಅವರ ಬಳಿ ಕಪ್ಪು ಹಣ ಇದೆ, ಅದಕ್ಕೆ ಐಟಿ ಅಧಿಕಾರಿಗಳು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಾಹು ಮನೆಯಲ್ಲಿ ಎಷ್ಟರ ಮಟ್ಟಿಗೆ ಹಣ ಇದೆ ಎಂದರೆ ನೋಟು ಎಣಿಸುವ ಮೆಷಿನ್ ಗಳೇ ಕೆಟ್ಟು ಹೋಗುತ್ತಿವೆ, ಅವರ ಸಂಪತ್ತನ್ನು ಇನ್ನೂ ಲೆಕ್ಕ ಹಾಕಲಾಗುತ್ತಿದೆ, ಈಗ ಸಾಹು ಮನೆಯಲ್ಲಿ ಆದ ದಾಳಿ ಮುಂದಿನ ದಿನಗಳಲ್ಲಿ ಪ್ರಿಯಾಂಕಾ ವಾದ್ರ ಮನೆಯಲ್ಲೂ ಆಗಲಿದೆ ಎಂದು ಹೇಳಿದರು.
ಇದೇ ವೇಳೆ, ಸದನದಲ್ಲಿರುವ ಸಾವರ್ಕರ್ ಫೋಟೋ ತೆಗೆಯಬೇಕು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಮಾಡಲು ಬಹಳಷ್ಟು ಕೆಲಸಗಳಿವೆ. ಅದನ್ನು ಅವರು ಮಾಡಲಿ. ಸಾವರ್ಕರ್ ಅವರನ್ನು ವೀರ ಸಾವರ್ಕರ್ ಎಂದು ಕರೆದಿದ್ದು, ಇಂದಿರಾ ಗಾಂಧಿ, ನನಗೂ ಕೂಡ ಗಾಂಧೀಜಿ, ನೆಹರೂ ಅವರ ಬಗ್ಗೆ ಬಹಳಷ್ಟು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಗಾಂಧಿ ಫೋಟೋ ತೆಗೆಯಿರಿ, ನೆಹರೂ ಫೋಟೋ ತೆಗೆಯಿರಿ ಎಂದು ಹೇಳಲಾಗತ್ತಾ ಎಂದು ಆಕ್ರೋಶ ಹೊರಹಾಕಿದರು.












Click it and Unblock the Notifications