ಕಬಿನಿ ಹಿನ್ನೀರಿನ ರೆಸಾರ್ಟ್ ನಲ್ಲಿ ಕೇರಳಿಗ ಸಾವು
ಕಬಿನ್ನಿ ಹಿನ್ನೀರಿನ ರೆಸಾರ್ಟ್ ನ ಈಜುಕೊಳದಲ್ಲಿ ಕೇರಳದ ರಾಮಗೋಪಾಲ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅನುಮಾನಗಳಿರುವುದರಿಂದ ರೆಸಾರ್ಟ್ ಮಾಲೀಕರ ವಿಚಾರಣೆ ನಡೆದಿದೆ
ಎಚ್.ಡಿ.ಕೋಟೆ, ನವೆಂಬರ್ 28: ಮೋಜು- ಮಸ್ತಿಗಾಗಿ ಹೊರ ರಾಜ್ಯದಿಂದ ಬರುವ ಪ್ರವಾಸಿಗರು ಕುಡಿದ ಮತ್ತಿನಲ್ಲಿ ನೀರಿನಲ್ಲಿ ಆಟವಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇದೀಗ ಕಬಿನಿ ಹಿನ್ನೀರಿನಲ್ಲಿರುವ ರೆಡ್ ಅರ್ತ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಕೇರಳ ರಾಜ್ಯದ ಕಣ್ಣೂರಿನ ರಾಮಗೋಪಾಲ್ (40) ಸಾವನ್ನಪ್ಪಿದ ದುರ್ದೈವಿ. ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಅವರು ಈಜುಕೊಳದಲ್ಲಿ ಈಜುತ್ತಿದ್ದ ಸಂದರ್ಭ ಮೃತಪಟ್ಟಿದ್ದಾರೆ. ಸಾವು ಹೇಗೆ ಸಂಭವಿಸಿದೆ ಎಂಬುವುದು ತನಿಖೆಯಿಂದಷ್ಟೆ ತಿಳಿಯಬೇಕಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಪತ್ನಿ ಹಿತಾ ಮತ್ತು ಪುತ್ರನೊಂದಿಗೆ ಆಗಮಿಸಿ ರೆಡ್ ಅರ್ತ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು.[ಹೆತ್ತ ಮಕ್ಕಳನ್ನೇ ಕೊಂದಿದ್ದ ಆರೋಪಿ ಬಂಧನ]

ಸೋಮವಾರ ಬೆಳಾಗ್ಗೆ ಪತ್ನಿಯೊಂದಿಗೆ ರೆಸಾರ್ಟ್ ನಲ್ಲಿರುವ ಈಜುಕೊಳದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ರಾಮಗೋಪಾಲ ಮೃತಪಟ್ಟಿದ್ದಾರೆ. ಮೃತದೇಹವನ್ನು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೇರಳಕ್ಕೆ ಕೊಂಡೊಯ್ಯಲಾಗಿದೆ.
ಈ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೆಸಾರ್ಟ್ ನ ಶ್ರೀನಿವಾಸ್ ಮತ್ತು ರವಿ ಎಂಬುವರನ್ನು ವಿಚಾರಣೆಗೊಳಪಡಿಸಲಾಗಿದೆ.












Click it and Unblock the Notifications