ಚಾಮರಾಜನಗರದಲ್ಲಿ ಪತ್ನಿಯನ್ನು ಕೊಂದ ಪತಿ ಬಂಧನ
ಚಾಮರಾಜನಗರ, ಆಗಸ್ಟ್ 4: ಹನ್ನೆರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಪತಿ ಮಹಾಷಯ ಪತ್ನಿಯನ್ನು ಹಣಕ್ಕಾಗಿ ಪೀಡಿಸಿದ್ದಲ್ಲದೆ ಅಮಾನುಷವಾಗಿ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಾಮರಾಜನಗರ ಗಾಳೀಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಮೈಸೂರಿನ ನಿವಾಸಿ ಬೀಬಿ ಆಯಿಷಾ (36) ಎಂಬಾಕೆಯೇ ಗಂಡನಿಂದ ಕೊಲೆಯಾದ ದುರ್ದೈವಿ. ಈಕೆಯನ್ನು ಚಾಮರಾಜನಗರದ ಗಾಳೀಪುರ ಬಡಾವಣೆಯಲ್ಲಿರುವ ಬೀಡಿ ಕಾಲೋನಿಯ ಅಬ್ದುಲ್ ಆಸೀಫ್ ಎಂಬಾತ ವಿವಾಹವಾಗಿದ್ದನು. ವಿವಾಹದ ವೇಳೆ ವರದಕ್ಷಿಣೆಯಾಗಿ ಚಿನ್ನಾಭರಣ ಮತ್ತು ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳನ್ನು ಪಡೆದುಕೊಂಡಿದ್ದನು.

ವಿವಾಹದ ನಂತರ ಮೂವರು ಮಕ್ಕಳಿದ್ದು, ದಂಪತಿ ಮೊದಲಿಗೆ ಅನೋನ್ಯವಾಗಿದ್ದರು. ಆ ನಂತರ ಅಬ್ದುಲ್ ಆಸೀಫ್ ಪತ್ನಿಯನ್ನು ಅನುಮಾನಿಸುವುದು, ತವರು ಮನೆಯಿಂದ ಹಣವನ್ನು ತರುವಂತೆ ಕಿರುಕುಳ ನೀಡುವುದು ಮಾಡುತ್ತಿದ್ದನು. ಬೀಬಿ ಆಯಿಷಾ ಮನೆಯವರು ಕೇಳಿದ್ದನ್ನೆಲ್ಲ ಕೊಟ್ಟು ಸುಸ್ತಾಗಿದ್ದರಲ್ಲದೆ ಸಾಲ ಮಾಡಿಕೊಂಡು ಕಂಗಾಲಾಗಿದ್ದರು.
ಈ ನಡುವೆ ಜುಲೈ 31 ರಂದು ಮನೆಯಲ್ಲಿ ಪತಿ ಮತ್ತು ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಂದು ರಾತ್ರಿ ಅಬ್ದುಲ್ ಆಸೀಪ್ ಪತ್ನಿ ಬೀಬಿ ಆಯಿಷಾಳ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಈ ನಡುವೆ ಆಗಸ್ಟ್ 1ರ ಬೆಳಗಿನ ಜಾವ ಬೀಬಿ ಆಯಿಷಾರ ಶವವನ್ನು ತರಾತುರಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಯಿತು. ಆ ಬಳಿಕ ಆಯಿಷಾ ಕುಟುಂಬದವರು ಆಯಿಷಾ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಇದೊಂದು ಕೊಲೆ ಎಂದು ಆರೋಪಿಸಿ ಪತಿಯೇ ತನ್ನ ಪತ್ನಿಯನ್ನು ಹತ್ಯೆಗೈದಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರಕುಮಾರ್ ಮೀನಾರವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೂಡಲೇ ಆಯಿಷಾ ಪತಿ ಅಬ್ದುಲ್ ಆಸೀಫ್ನನ್ನು ಬಂಧಿಸಿದ್ದಾರೆ.












Click it and Unblock the Notifications