ಹನೂರು: ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ, ಗ್ರಾಮಸ್ಥರು ಉಗ್ರರೂಪ ತಾಳಲು ಕಾರಣ ಏನು?
ಚಾಮರಾಜನಗರ, ಏಪ್ರಿಲ್, 26: ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರು ಇದೀಗ ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.

ಇಂದು (ಏಪ್ರಿಲ್ 26) ರಾಜ್ಯದ 14 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಸಹ ಮಾಡಲಾಗಿದೆ. ಇದರ ನಡುವೆಯೇ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ ಘಟನೆ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.

ಮೂಲಸೌಕರ್ಯಕ್ಕೆ ಆಗ್ರಹಿಸಿ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ 5 ಗ್ರಾಮಗಳ ಜನರು ಮತದಾನ ಬಹಿಷ್ಕಾರ ಮಾಡಿದ್ದರು. ಬಳಿಕ ಅಧಿಕಾರಿಗಳು ಮನವೊಲಿಕೆಗೆ ತೆರಳಿದ್ದ ವೇಳೆ ತಾವು ಮತದಾನ ಮಾಡಲ್ಲವೆಂದು ಗ್ರಾಮಸ್ಥರೆಲ್ಲ ಸೇರಿ ಮತಗಟ್ಟೆಯನ್ನು ಧ್ವಂಸ ಮಾಡಿದ್ದಾರೆ.
ಘಟನೆಗೆ ಕಾರಣವೇನು?: ಮಲೆ ಮಹದೇಶ್ವರ ಗ್ರಾಮ ಪಂಚಾಯಿತಿಗೆ ಸೇರಿದ ಇಂಡಿಗನತ್ತ, ಮೆಂದಾರೆ ,ತುಳಿಸಿಕರೆ, ತೇಕಣೆ, ಪಡಸಲನತ್ತ ಈ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸದೆ ಮತದಾರರು ದೂರ ಉಳಿದಿದ್ದರು.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತುಳಿಸಿಕರೆಯ 480 ಮತದಾರರು, ಇಂಡಿಗನತ್ತ ಪೋಡಿನ 528 ಮತದಾರರು, ಪಡಸಲನತ್ತ ಪೋಡಿನ 298 ನಿವಾಸಿಗಳು ಮತದಾನದಿಂದ ದೂರ ಉಳಿದಿದ್ದರು. ತಮಗೆ ಮೂಲಸೌಕರ್ಯ ಕೊಡಬೇಕು ಇಲ್ಲದಿದ್ದರೇ ತಾವು ಮತ ಹಾಕುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ವಿಚಾರ ಅರಿತ ಪೊಲೀಸ್ ಸಿಬ್ಬಂದಿ, ಚುನಾವಣಾ ಅಧಿಕಾರಿಗಳು ಮತದಾರರನ್ನು ಮನವೊಲಿಸಲು ತೆರಳಿದ್ದರು. ಈ ವೇಳೆ ಕೆಲವರನ್ನು ಮತದಾನಕ್ಕೆ ಮನವೊಲಿಸಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆ ಧ್ಚಂಸ ಮಾಡಿ, ಇವಿಎಂ ಹೊಡೆದು ಹಾಕಿ, ಕಲ್ಲು ತೂರಿದ್ದಾರೆ. ಈ ವೇಳೆ ಅಲ್ಲಿದ್ದ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಲ್ಲದೆ, ಮತಗಟ್ಟೆಯ ಬಾಗಿಲು, ಮೇಜು-ಕುರ್ಚಿ, ಇವಿಎಂ ಯಂತ್ರ ಇತರೆ ಪರಿಕರಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚುವ ಯತ್ನ ಮಾಡಿದ್ದಾರೆ. ಇನ್ನು ಈ ಘಟನೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಎಎಸ್ಪಿ ಉದೇಶ್ ಭೇಟಿ ಕೊಟ್ಟಿದ್ದಾರೆ.
ಫಿಲಿಫೈನ್ಸ್ನಿಂದ ಬಂದು ಮತದಾನ ಮಾಡಿದ ಯುವತಿ: ಲೋಕಸಭಾ ಚುನಾವಣೆ ಮತದಾನ ಅಂಗವಾಗಿ ಫಿಲಿಫೈನ್ಸ್ನಿಂದ ಬಂದು ಯುವತಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಚಿತ್ರದುರ್ಗ ನಗರದ ಶಿಕ್ಷಕರ ಕಾಲೋನಿ ನಗರ ನಿವಾಸಿಯಾಗಿರುವ ಲಿಖಿತ ಅವರು ಫಿಲಿಪೈನ್ಸ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಲಿಖಿತ ಇಂದು ಚಿತ್ರದುರ್ಗಕ್ಕೆ ಬಂದು ಮತದಾನ ಮಾಡಿದರು. ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲಿರುವ ಮತಗಟ್ಟೆ ಸಂಖ್ಯೆ 230ರಲ್ಲಿ ಮತಚಲಾಯಿಸಿದರು












Click it and Unblock the Notifications