ಚಾಮರಾಜನಗರ: ಬಸ್ ಪಲ್ಟಿಯಾಗಿ, 30 ಮಂದಿ ಕಾರ್ಮಿಕರಿಗೆ ಗಾಯ
ಚಾಮರಾಜನಗರ, ಮಾರ್ಚ್, 01: ಕಾರ್ಖಾನೆ ಬಸ್ ಪಲ್ಟಿಯಾಗಿ 30 ಮಂದಿ ಗಾಯಗೊಂಡ ಘಟನೆ ಚಾಮರಾಜನಗರದ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ (ಮಾರ್ಚ್ 01) ಮಧ್ಯಾಹ್ನ ನಡೆದಿದೆ.
ಚಾಮರಾಜನಗರದ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಕಲರ್ ಟ್ಯೂನ್ ಎಂಬ ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಕಂಪನಿ ಬಸ್ನಲ್ಲಿ ತೆರಳುತ್ತಿದ್ದ ವೇಳೆ ತಿರುವಿನಲ್ಲಿ ಈ ಅವಘಡ ನಡೆದಿದೆ.

ಕೆಸಲ ಮುಗಿಸಿದ್ದ ಕಾರ್ಮಿಕರನ್ನು ಕರೆದೊಯ್ಯುವಾಗ ತಿರುವಿನಲ್ಲಿ ಬಸ್ ಪಲ್ಟಿಯಾಗಿದ್ದು, ಈ ವೇಳೆ ಗಾಯಗೊಂಡಿದ್ದ 30 ಮಂದಿಯಲ್ಲಿ 4 ಮಂದಿಗೆ ಗಂಭೀರ ಪೆಟ್ಟು ಬಿದ್ದು ಐಸಿಯುಗೆ ದಾಖಲಾಗಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇನ್ನು ಚಾಲಕನ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವು: ಹೊಸ ವರ್ಷದ ಹೊಸ್ತಿಲಲ್ಲಿ ಪ್ರತ್ಯೇಕ ಅಪಘಾತದಲ್ಲಿ ಮೂವರು ಅಸುನಿಗಿದ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ನಡೆದಿತ್ತು.
ಚಿತ್ರದುರ್ಗ ತಾಲೂಕಿನ ಹೊಸ ಕಲ್ಲಹಳ್ಳಿ ಬಳಿ ಆಟೋ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರ ಪ್ರಾಣ ಪಕ್ಷಿ ಸ್ಥಳದಲ್ಲೇ ಹಾರಿ ಹೋದ ಘಟನೆ ನಡೆದಿದೆ. ಮೃತರನ್ನ ಬೈಕ್ ಹಿಂಬದಿ ಕುಳಿತಿದ್ದ ಶಿಲ್ಪ (30), ಆಟೋದಲ್ಲಿ ಪ್ರಯಾಣಿಸುತಿದ್ದ ಬರ್ಕತ್ ಆಲಿ (35) ಸ್ಥಳದಲ್ಲೇ ಸಾವೀಗೀಡಾದ ದುರ್ದೈವಿಗಳು ಎಂದು ಗುರುತಿಸಲಾಗಿತ್ತು.
ಇನ್ನು ಆಟೋದಲ್ಲಿದ್ದ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರನ ಅತಿ ವೇಗ ಮತ್ತು ಅಜಾಗ್ರತೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಟಿವಿಎಸ್ ಬೈಕ್ & ಬುಲೋರ ನಡುವೆ ಅಪಘಾತ: ಮತ್ತೊಂದು ಅಪಘಾತ ಚಳ್ಳಕೆರೆ ತಾಲೂಕಿನ ತಳುಕು ಸಮೀಪದ ಗಿರಿಯಮ್ಮನಹಳ್ಳಿ ಬಳಿ ಟಿವಿಎಸ್ ಬೈಕ್ ಮತ್ತು ಬುಲೋರ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಳುಕು ಲಂಬಾಣಿಹಟ್ಟಿ ಗ್ರಾಮದ ರಾಜನಾಯ್ಕ (55) ವರ್ಷ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನು ಸಿಟ್ಟಿಗೆದ್ದ ಮೃತ ಸಂಬಂಧಿಕರು ಗಿರಿಯಮ್ನಳ್ಳಿ ಗ್ರಾಮಸ್ಥರು ಕೆಲಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ನಿಪ್ಪಾಣಿ ಬಳಿ ಕಾಲುವೆಗೆ ಉರುಳಿದ ಸಾರಿಗೆ ಬಸ್: ಇನ್ನು ಇತ್ತೀಚೆಗಷ್ಟೇ ಸಾರಿಗೆ (NWKSRTC) ಬಸ್ವೊಂದು ರಸ್ತೆ ಬದಿಯ ಕಾಲುವೆಗೆ ಉರುಳಿದ್ದು, ಪರಿಣಾಮ 10ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ನಡೆದಿತ್ತು.
ಎದುರಿನಿಂದ ವೇಗವಾಗಿ ಬಂದ ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಚಾಲಕ ಬಸ್ಅನ್ನು ಪಕ್ಕಕ್ಕೆ ತಿರುಗಿಸಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆ ಬಸ್ ಕಾಲುವೆಗೆ ಉರುಳಿತ್ತು. ಮಹಾರಾಷ್ಟ್ರದ ಇಂಚಲಕರಂಜಿಯಿಂದ ನಿಪ್ಪಾಣಿಗೆ ಬರುತ್ತಿದ್ದ ಬಸ್ ಕಾಲುವೆಗೆ ಬಿದ್ದಿದೆ. ಬಸ್ನಲ್ಲಿ ಸುಮಾರು 75 ಜನ ಪ್ರಯಾಣಿಕರಿದ್ದರು. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿತ್ತು.












Click it and Unblock the Notifications