ಮಾಂಗಲ್ಯ ಸರ ಎಗರಿಸುತ್ತಿದ್ದ ಮೂವರು ಕಳ್ಳಿಯರ ಬಂಧನ
ಮಹಿಳೆಯರ ಮಾಂಗಲ್ಯ ಸರಗಳನ್ನು ಎಗರಿಸುತ್ತಿದ್ದ ಮೂವರು ಕಳ್ಳಿಯರು ಶಿವಮೊಗ್ಗದಲ್ಲಿ ಸಿಕ್ಕಿಬಿದ್ದಿದ್ದಾರೆ. ಚಾಮರಾಜನಗರ ವ್ಯಾಪ್ತಿಯಲ್ಲಿ ನಡೆದ ಮಾಂಗಲ್ಯ ಸರ ಕಳವು ಪ್ರಕರಣಗಳಲ್ಲಿಯೂ ಇವರ ಕೈವಾಡವಿರುವುದ ಪತ್ತೆಯಾಗಿದೆ.
ಚಾಮರಾಜನಗರ, ಏಪ್ರಿಲ್ 16: ದೇವಸ್ಥಾನ, ಜಾತ್ರೆ ಸೇರಿದಂತೆ ಜನಜಂಗುಳಿಯಲ್ಲಿ ಸಮಯ ಸಾಧಿಸಿ ಮಹಿಳೆಯರ ಮಾಂಗಲ್ಯ ಸರಗಳನ್ನು ಎಗರಿಸುತ್ತಿದ್ದ ಮೂವರು ಕಳ್ಳಿಯರು ಶಿವಮೊಗ್ಗದಲ್ಲಿ ಸಿಕ್ಕಿಬಿದ್ದಿದ್ದಾರೆ. ಚಾಮರಾಜನಗರ ವ್ಯಾಪ್ತಿಯಲ್ಲಿ ನಡೆದ ಮಾಂಗಲ್ಯ ಸರ ಕಳವು ಪ್ರಕರಣಗಳಲ್ಲಿಯೂ ಇವರ ಕೈವಾಡವಿರುವುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.
ಮೈಸೂರಿನ ವಿಜಯನಗರ ನಿವಾಸಿ ಮಲ್ಲು ಎಂಬವರ ಪತ್ನಿ ವಸಂತ ಅಲಿಯಾಸ್ ಗೀತಾ ಅಲಿಯಾಸ್ ಸುಮಿತ್ರ(50), ಹಾಸನದ ಚನ್ನರಾಯಪಟ್ಟಣದ ವೆಂಕಟೇಶ್ ಎನ್ನುವವರ ಪತ್ನಿ ನಾಗರತ್ನ ಅಲಿಯಾಸ್ ಸವಿತಾ(35) ಮತ್ತು ಗುಂಡ್ಲುಪೇಟೆ ತಾಲೂಕಿನ ಮುದ್ದಯ್ಯನಹುಂಡಿ ಗ್ರಾಮದ ಶ್ರೀನಿವಾಸ ಎಂಬವರ ಪತ್ನಿ ಜ್ಯೋತಿ ಅಲಿಯಾಸ್ ರಮ್ಯ(37) ಬಂಧಿತರಾಗಿದ್ದಾರೆ.[ಗುಂಡ್ಲುಪೇಟೆ ಬಳಿ ಟಿಪ್ಪರ್ ಗುದ್ದಿದ ಸ್ಕಾರ್ಪಿಯೋ ನಜ್ಜುಗುಜ್ಜು, ವ್ಯಕ್ತಿ ಸಾವು]
ಈ ಮೂವರು ಒಟ್ಟಾಗಿ ಜಾತ್ರೆ, ದೇವಸ್ಥಾನ, ಬಸ್ ನಿಲ್ದಾಣಗಳಿಗೆ ತೆರಳಿ ಜನಜಂಗುಳಿಯಲ್ಲಿ ಮಹಿಳೆಯರ ಮಾಂಗಲ್ಯ ಸರ ಸೇರಿದಂತೆ ಚಿನ್ನದ ಸರಗಳನ್ನು ಎಗರಿಸುತ್ತಿದ್ದರು ಎನ್ನಲಾಗಿದೆ.
ಈ ನಡುವೆ ಕೊಳ್ಳೇಗಾಲ ತಾಲೂಕಿನ ಲಿಂಗಣಾಪುರ ಗ್ರಾಮದ ನಿವಾಸಿ ಪ್ರಭುಸ್ವಾಮಿ ಅವರ ಪತ್ನಿ ಗೀತಾ ಎನ್ನುವವರು ಫೆ.18ರಂದು ಚಿಲಕವಾಡಿ ಬೆಟ್ಟಕ್ಕೆ ಆನಂದ ಗುರೂಜಿ ಆಗಮಿಸಿದ ಹಿನ್ನಲೆಯಲ್ಲಿ ಅವರನ್ನು ನೋಡಲು ತೆರಳಿದ್ದರು. ಈ ವೇಳೆ ಜನಜಂಗುಳಿಯಲ್ಲಿ ಗೀತಾ ಮಾಂಗಲ್ಯವನ್ನು ಯಾರೋ ಕಳವು ಮಾಡಿದ್ದರು. ಈ ಬಗ್ಗೆ ಅವರು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾತ್ರೆಗಳ ಸಮಯದಲ್ಲಿ ಮಹಿಳೆಯರ ಚಿನ್ನದ ಮಾಂಗಲ್ಯ ಸರಗಳನ್ನು ಕಳುವು ಮಾಡುತ್ತಿದ್ದಾಗ ವಸಂತ, ನಾಗರತ್ನ, ಜ್ಯೋತಿ ಅವರು ಸಿಕ್ಕಿಬಿದ್ದಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ ಚಾಮರಾಜನಗರ ವ್ಯಾಪ್ತಿಯಲ್ಲಿ ಮಾಡಿದ್ದ ಕಳವು ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದರು.[ರಾಜಕುಮಾರನ ಅಸಹಜ ಸಾವಿನ ತನಿಖೆ ಅಪೂರ್ಣ]
ಆರೋಪಿಗಳನ್ನು ಕೊಳ್ಳೇಗಾಲ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ವಾರೆಂಟ್ ಮೇಲೆ ಹಾಜರುಪಡಿಸಿ ವಿಚಾರಣೆಗಾಗಿ ಕೊಳ್ಳೇಗಾಲ ಪೊಲೀಸರು ತಮ್ಮ ವಶಕ್ಕೆ ಪಡೆದು ಕೊಂಡಿದ್ದರು.
ಕೊಳ್ಳೇಗಾಲ ವೃತ್ತ ನಿರೀಕ್ಷಕರಾದ ಅಮರನಾರಾಯಣ್ ಅವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಸುಮಾರು ನಾಲ್ಕು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಕಳವು ಮಾಡಿದ ಮಾಲುಗಳನ್ನು ಪಿರಿಯಾಪಟ್ಟಣ, ಮೈಸೂರು, ಚೆನ್ನರಾಯಪಟ್ಟಣ ಹಾಗೂ ಗುಂಡ್ಲಪೇಟೆಯ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದರು.
ಪೊಲೀಸರು ಬಂಧಿತರಿಂದ ಒಟ್ಟು 227 ಗ್ರಾಂ ತೂಕದ 9 ಚಿನ್ನದ ಮಾಂಗಲ್ಯ ಸರಗಳನ್ನು ವಶಪಡಿಸಿಕೊಂಡಿದ್ದು, ಸರಗಳ ಮೌಲ್ಯ ಆರು ಲಕ್ಷ ರೂಪಾಯಿಯಾಗಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸರು ಇದೇ ಆರೋಪಿಗಳಿಂದ ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರಬೆಟ್ಟ ಪೊಲೀಸ್ ಠಾಣೆ ಹಾಗೂ ಗುಂಡ್ಲುಪೇಟೆ ಪೊಲೀಸ್ ಠಾಣೆ ಸಂಬಂಧಿಸಿದ ಒಟ್ಟು 10 ಪ್ರಕರಣಗಳಲ್ಲಿ 331.44 ಗ್ರಾಂ ತೂಕದ 8,15,500 ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರಗಳನ್ನು ವಶಪಡಿಸಿಕೊಂಡಿದ್ದಾರೆ.