ಗುಂಡ್ಲುಪೇಟೆ: ಮನೆಗಳ ಬಾಗಿಲು ಲಾಕ್ ಮಾಡಿ 21 ಕುರಿಗಳನ್ನು ಕದ್ದ ಖದೀಮರು.!
ಚಾಮರಾಜನಗರ, ಫೆಬ್ರವರಿ, 08: ಮನೆಗಳ ಬಾಗಿಲಿಗೆ ಚಿಲಕ ಹಾಕಿ 21 ಕುರಿಗಳನ್ನು ಕದ್ದೊಯ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದ ಬಸವನಾಯಕ ಎಂಬವರಿಗೆ ಸೇರಿದ ಕುರಿಗಳನ್ನು ಗುರುವಾರ (ಫೆಬ್ರವರಿ 08) ಮುಂಜಾನೆ 3ರ ಹೊತ್ತಿಗೆ ಕದ್ದಿದ್ದಾರೆ ಎನ್ನಲಾಗಿದೆ. ಬಸವನಾಯಕ ಎಂಬವರು ಒಟ್ಟು 25 ಕುರಿಗಳನ್ನು ಸಾಕಿದ್ದರು.

ಕೊಟ್ಟಿಗೆಯಲ್ಲಿ ಬಿಟ್ಟಿದ್ದ ವೇಳೆ ಕಳ್ಳರು ಬಸವನಾಯಕ ಮನೆ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೆ ಚಿಲಕ ಹಾಕಿ ಸಣ್ಣ ಕುರಿ-ಮರಿಗಳನ್ನು ಬಿಟ್ಟು ಮಾರಾಟಕ್ಕೆ ಯೋಗ್ಯವಾಗಿದ್ದ ಕುರಿಗಳನ್ನು ಹೊತ್ತೊಯ್ದಿದ್ದಾರೆ. ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ಬಸವನಾಯಕ ಸದ್ಯ ಕಂಗಲಾಗಿದ್ದಾರೆ. ಇನ್ನು ಮಂಚಹಳ್ಳಿ ಗ್ರಾಮಕ್ಕೆ ಬೇಗೂರು ಪೊಲೀಸರ ಭೇಟಿ ನೀಡಿ ಘಟನೆ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೆಟ್ಟು ನಿಂತ ಲಾರಿ ಮೇಲೆ ಆನೆ ದಾಳಿ: ಕೆಟ್ಟು ನಿಂತಿದ್ದ ಲಾರಿಯೊಂದರ ಮೇಲೆ ಆನೆ ದಾಳಿ ಮಾಡಿ ಟಾರ್ಪಲ್ ಕಿತ್ತೆಸೆದು ರಂಪಾಟ ಮಾಡಿರುವ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರಿನಲ್ಲಿ ನಡೆದಿದೆ.
ಆಹಾರ ಅರಸಿ ಕಾಡಿನಿಂದ ರಸ್ತೆಗಿಳಿದ ಒಂಟಿ ಸಲಗವೊಂದು ಕಬ್ಬು ಹಾಗೂ ತರಕಾರಿ ತುಂಬಿದ ವಾಹನಗಳನ್ನು ತಡಕಾಡುವಾಗ ಕೆಟ್ಟು ನಿಂತ ಲಾರಿ ಮೇಲೆ ದಾಳಿ ಮಾಡಿದೆ. ಲಾರಿಗೆ ಹೊದಿಸಿದ್ದ ಟಾರ್ಪಲ್ ಅನ್ನು ಕಿತ್ತೆಸೆದು ದಾಂಧಲೆ ಮಾಡಿರುವುದು ಲಾರಿ ಚಾಲಕನ ಮೊಬೈಲ್ನಲ್ಲಿ ದೃಶ್ಯ ಸೆರೆಯಾಗಿದೆ.
ಇನ್ನು, ಆನೆ ರಂಪಾಟದಿಂದ ಬೆಳ್ಳಂಬೆಳಗ್ಗೆ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.












Click it and Unblock the Notifications