14 ವರ್ಷಗಳ ನಂತರ ತುಂಬಿತು ಮಲ್ಲಯ್ಯನ ಕೆರೆ, ತಂಡೋಪತಂಡವಾಗಿ ಬಂದ ರೈತರು
ಚಾಮರಾಜನಗರ, ಅಕ್ಟೋಬರ್.22: ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಬರ ತಾಂಡವವಾಡುತ್ತಿದ್ದುದರಿಂದ ಗ್ರಾಮಗಳ ನೀರಿನ ಸೆಲೆಯಾಗಿದ್ದ ಹಲವು ಕೆರೆಗಳು ಕಳೆದೊಂದು ದಶಕದಿಂದ ನೀರಿಲ್ಲದೆ ಬತ್ತಿ ಹೋಗಿದ್ದವು.
ಹಿಂದೆ ಮಳೆಗಾಲದಲ್ಲಿ ಸುರಿದ ಮಳೆಯ ನೀರು ಈ ಕೆರೆಗಳಲ್ಲಿ ಸಂಗ್ರಹಗೊಂಡು ರೈತರಿಗೆ ವರದಾನವಾಗಿದ್ದವು. ಆದರೆ ಕಳೆದೊಂದು ದಶಕದಲ್ಲಿ ವಾಡಿಕೆಯ ಮಳೆ ಸುರಿಯದ ಕಾರಣ ಜತೆಗೆ ಬರವೂ ಆವರಿಸಿದ ಕಾರಣ ಕೆರೆಗಳು ಬತ್ತಿ ಹೋಗಿ ಇನ್ನು ಮುಂದೆ ಕೆರೆಗಳಲ್ಲಿ ನೀರೇ ತುಂಬಲೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇಂತಹ ಸಂದರ್ಭದಲ್ಲೇ ಕೆಲ ವರ್ಷಗಳ ಹಿಂದೆ ಸರ್ಕಾರ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದಿತು. ಇದರಿಂದ ಬಹಳಷ್ಟು ಕೆರೆಗಳು ನೀರು ಕಂಡವು. ಜತೆಗೆ ಕಳೆದ ವರ್ಷ ಹಿಂಗಾರು ಮಳೆಗೆ ಹಲವು ಕೆರೆಗಳು ನೀರು ಕಾಣುವಂತಾಯಿತು.
ಈ ಬಾರಿ ಕೂಡ ಮುಂಗಾರು ಉತ್ತಮವಾದ ಕಾರಣ ಅಲ್ಲದೆ ಕಾವೇರಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿದಿದ್ದರಿಂದ ಬಹಳಷ್ಟು ಕೆರೆಗಳು ತುಂಬಿವೆ. ಈ ಕುರಿತ ಚಿಕ್ಕ ವರದಿ ಇಲ್ಲಿದೆ...

ಅಂತರ್ಜಲ ವೃದ್ಧಿಗೂ ಸಹಕಾರಿ
ನದಿಯಿಂದ ನೀರು ತುಂಬಿಸುತ್ತಿರುವ ಕಾರಣ ಸುಮಾರು ವರ್ಷಗಳಿಂದ ನೀರು ಕಾಣದಿದ್ದ ಕೆರೆಗಳಲ್ಲೂ ನೀರು ಕಾಣುವಂತಾಗಿದೆ. ಇದು ಆ ಕೆರೆಗಳ ವ್ಯಾಪ್ತಿಯ ರೈತರಿಗೆ ಸಂತಸವನ್ನುಂಟು ಮಾಡಿದೆ. ಕೆರೆಗಳಲ್ಲಿ ನೀರು ಸಂಗ್ರಹವಾದರೆ ಜನ ಜಾನುವಾರುಗಳಿಗೆ ಅನುಕೂಲವಾಗುವುದರೊಂದಿಗೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ.

ಇಮ್ಮಡಿಯಾಗಿದೆ ಜನರ ಸಂತಸ
ಬರದಿಂದಾಗಿ ನೂರಾರು ಅಡಿ ಭೂಮಿ ಕೊರೆದು ತೆಗೆದ ಕೊಳವೆ ಬಾವಿಗಳಲ್ಲೂ ನೀರು ಪಾತಾಳ ಸೇರಿತ್ತು. ಆದರೆ ಇದೀಗ ಅಂತರ್ಜಲದ ಮಟ್ಟ ಏರಿಕೆಯಾಗಿರುವುದು ಎಲ್ಲರಿಗೂ ರೈತರಿಗೆ ಖುಷಿ ತಂದಿದೆ. ಈ ನಡುವೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಕೆರೆ ಇತ್ತೀಚೆಗೆ ಸುರಿದ ಮಳೆಯಿಂದ ಭರ್ತಿಯಾಗಿದ್ದು, ಜನರ ಸಂತಸವನ್ನು ಇಮ್ಮಡಿಗೊಳಿಸಿದೆ.

ಕೆರೆ ನೋಡಲು ಬರುತ್ತಿರುವ ರೈತರು
ಜನರ ಸಂತಸಕ್ಕೆ ಕಾರಣವೂ ಇದೆ. ಈ ಕೆರೆ ಕಳೆದ 14 ವರ್ಷಗಳಿಂದ ಭರ್ತಿಯೇ ಆಗಿರಲಿಲ್ಲವಂತೆ. ಆದರೆ ಈ ಬಾರಿಯ ಮಳೆಗೆ ಕೆರೆ ತುಂಬಿದ್ದು, ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ರೈತರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಗ್ರಾಮಸ್ಥರಲ್ಲಿ ನೆಮ್ಮದಿ, ಸಂತಸ
ಮಲ್ಲಯ್ಯನಪುರ ಕೆರೆಯು ಸುಮಾರು 150 ಎಕರೆ ವಿಸ್ತೀರ್ಣ ಹೊಂದಿದ್ದು, ಸುತ್ತಮುತ್ತಲ ಗ್ರಾಮಗಳ ರೈತರಿಗೆ ವರದಾನವಾಗಿತ್ತು. ಆದರೆ ಈ ಕೆರೆ ನೀರಿಲ್ಲದೆ ಬತ್ತಿದ್ದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲದ ಕೊರತೆ ಎದುರಾಗಿ ನೀರಿಗೆ ಸಮಸ್ಯೆ ಕಂಡು ಬಂದಿತ್ತು. ಮಳೆಗೆ ಕೆರೆಯು ತುಂಬಿ ಕೋಡಿ ಬೀಳುವ ಹಂತ ತಲುಪಿದ್ದರಿಂದ ಗ್ರಾಮಸ್ಥರಲ್ಲಿ, ನೆಮ್ಮದಿ ಸಂತಸ ಮನೆ ಮಾಡಿದೆ.












Click it and Unblock the Notifications