ಭಾರತದ ಜಿಡಿಪಿ ಭಾರಿ ಕುಸಿತ: ಆತಂಕ ಮೂಡಿಸಿದ ವಿಶ್ವಬ್ಯಾಂಕ್ ವರದಿ
ನವದೆಹಲಿ, ಅಕ್ಟೋಬರ್ 14: ಆರ್ಥಿಕ ಕುಸಿತದ ಪರಿಣಾಮದಿಂದ ಉದ್ದಿಮೆಗಳು ಹಿನ್ನಡೆ ಅನುಭವಿಸಿರುವ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಭಾರತದ ಆರ್ಥಿಕತೆಗೆ ಭಾರಿ ಹೊಡೆತ ನೀಡುವ ಸೂಚನೆ ನೀಡಿದೆ. ಈ ಬಿಕ್ಕಟ್ಟಿನ ಪರಿಣಾಮ ಭಾರತದಲ್ಲಿ ತೀವ್ರ ಮಟ್ಟದಲ್ಲಿ ಕಂಡುಬರುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿತ್ತು. ಈಗ ವಿಶ್ವಬ್ಯಾಂಕ್ ನೀಡಿರುವ ವರದಿಯಲ್ಲಿ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎನ್ನುವ ಮಾಹಿತಿ ಲಭಿಸಿದೆ.
ವಿಶ್ವಬ್ಯಾಂಕ್ ಭಾನುವಾರ ತನ್ನ ವರದಿ ನೀಡಿದ್ದು, ಈ ಹಿಂದೆ ಅಂದಾಜಿಸಿದ್ದ ಶೇ 7.5ರ ಜಿಡಿಪಿ ದರವನ್ನು ಮುಟ್ಟುವಲ್ಲಿ ಭಾರತ ವಿಫಲವಾಗಲಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ಕೇವಲ ಶೇ 6ರಷ್ಟು ಇರಲಿದೆ ಎಂದು ಹೇಳಿದೆ.
ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕ ಬೆಳವಣಿಗೆಯ ದೇಶವಾದ ಭಾರತದಲ್ಲಿ ಬೇಡಿಕೆಯಲ್ಲಿನ ಕುಸಿತದಿಂದಾಗಿ ಕಳೆದ ಆರು ವರ್ಷಗಳಲ್ಲಿಯೇ ಜೂನ್ ತಿಂಗಳಿನಲ್ಲಿ ಆರ್ಥಿಕ ಬೆಳವಣಿಗೆ ಅತ್ಯಂತ ನಿಧಾನಗತಿಗೆ ತಲುಪಿದೆ.
ಭಾರತಕ್ಕಿಂತಲೂ ಅದರ ನೆರೆಯ ರಾಷ್ಟ್ರಗಳಾದ ನೇಪಾಳ ಮತ್ತು ಬಾಂಗ್ಲಾದೇಶಗಳ ಡಿಜಿಪಿ ಅಧಿಕವಾಗಿರಲಿದೆ. ಪಾಕಿಸ್ತಾನದ ಜಿಡಿಪಿ ಕೇವಲ ಶೇ 2.4ರಷ್ಟು ಇರಲಿದೆ.

ಮುಂದಿನ ಎರಡು ವರ್ಷದಲ್ಲಿ ಸುಧಾರಣೆ
ಆದರೆ ಈ ಬಿಕ್ಕಟ್ಟು ಮುಂದಿನ ವರ್ಷ ಇರುವುದಿಲ್ಲ. 2020-21ನೇ ಸಾಲಿನ ವೇಳೆಗೆ ಜಿಡಿಪಿ ದರವು ಶೇ 6.9ಕ್ಕೆ ಸುಧಾರಿಸಿಕೊಳ್ಳಲಿದ್ದು, ಅದರ ನಂತರದ ವರ್ಷ ಶೇ 7.2ಕ್ಕೇರಲಿದೆ ಎಂದು ವಾಷಿಂಗ್ಟನ್ ಮೂಲದ ಬ್ಯಾಂಕ್ ತನ್ನ ದಕ್ಷಿಣ ಏಷ್ಯಾ ಆರ್ಥಿಕ ನೋಟದ ವರದಿಯಲ್ಲಿ ತಿಳಿಸಿದೆ.

ಜಿಡಿಪಿ ಶೇ 6ನ್ನು ಮೀರಲಾರದು
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಸರಕು ಮತ್ತು ಸೇವೆಗಳ ಒಟ್ಟಾರೆ ಉತ್ಪಾದನೆಯ ಹೆಚ್ಚಳ ಶೇ 6ಕ್ಕಿಂತ ಅಧಿಕವಾಗಲಾರದು ಎಂದು ವರದಿಯಲ್ಲಿ ಹೇಳಲಾಗಿದೆ. 2017-18ನೇ ಸಾಲಿನಲ್ಲಿ ಶೇ 7.2ರಷ್ಟಿದ್ದ ಜಿಡಿಪಿ 2018-19ರಲ್ಲಿ ಶೇ 6.8ಕ್ಕೆ ಕುಸಿದಿತ್ತು. ಈಗ ಮತ್ತಷ್ಟು ಕುಸಿತ ಕಾಣಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಶೇ 6.1ರಷ್ಟು ದರವನ್ನು ಅಂದಾಜಿಸಿತ್ತು. ವಿಶ್ವಬ್ಯಾಂಕ್ ವರದಿ ಅದಕ್ಕೂ ಕಡಿಮೆ ಜಿಡಿಪಿ ಇರಲಿದೆ ಎಂದು ಹೇಳಿದೆ.
ಕಳೆದ ವರ್ಷ ಶೇ 7.3ರಷ್ಟಿದ್ದ ಸರುಕು ಮತ್ತು ಸೇವೆಗಳ ಬಳಕೆಯ ಪ್ರಮಾಣದ ಹೆಚ್ಚಳ, ಈಗ ಕೇವಲ ಶೇ 3.1ರಷ್ಟಿದೆ. ತಯಾರಿಕಾ ವಲಯದ ಬೆಳವಣಿಗೆ ಕೂಡ ಶೇ 10 ರಿಂದ ಶೇ 1ಕ್ಕೆ ಕುಸಿದಿದೆ. ಕಳೆದ ಸಾಲಿನಲ್ಲಿ ಶೇ 1.8ರಷ್ಟಿದ್ದ ಚಾಲ್ತಿ ಖಾತೆ ಕೊರತೆಯು 2018-19ನೇ ಸಾಲಿನಲ್ಲಿ ಜಿಡಿಪಿಯ ಶೇ 2.1ರಷ್ಟಾಗಿದೆ.

ಶೇ 5.8ಕ್ಕೆ ಇಳಿಕೆ- ಮೂಡೀಸ್
ಗುರುವಾರ ವರದಿ ಬಿಡುಗಡೆ ಮಾಡಿದ್ದ 'ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್' ಭಾರತದ ಜಿಡಿಪಿ ದರವು 2019-20ರಲ್ಲಿ ಶೇ 6.2ರಿಂದ ಶೇ 5.8ಕ್ಕೆ ಇಳಿಯಲಿದೆ ಎಂದು ಹೇಳಿತ್ತು. ದೀರ್ಘಾವಧಿ ಸಮಸ್ಯೆಗಳ ಅಂಶಗಳಿಂದಾಗಿ ಆರ್ಥಿಕತೆಯು ಹಿನ್ನಡೆ ಅನುಭವಿಸುತ್ತಿದೆ ಎಂದು ತಿಳಿಸಿತ್ತು.

ವಿಶ್ವಬ್ಯಾಂಕ್ ನೀಡಿದ ಸಲಹೆಗಳು
ಭಾರತದ ಜಿಡಿಪಿ ದರದ ವೃದ್ಧಿಗೆ ಅಗತ್ಯವಾದ ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಕೂಡ ವಿಶ್ವಬ್ಯಾಂಕ್ ಮುಂದಿಟ್ಟಿದೆ. ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಸುಧಾರಣೆ, ವಿತ್ತೀಯ ಕೊರತೆಗೆ ಕಡಿವಾಣ ಹಾಕುವುದು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ನಿಯಂತ್ರಿಸುವುದು.

ಭಾರತದ ಆರ್ಥಿಕ ಕುಸಿತಕ್ಕೆ ಕಾರಣಗಳು
ಸರಕು ಮತ್ತು ಸೇವೆಗಳ ಬೇಡಿಕೆ ಮತ್ತು ಬಳಕೆಯ ಪ್ರಮಾಣದಲ್ಲಿ ಕುಸಿತ. ನೋಟು ಅಮಾನ್ಯೀಕರಣ, ಜಿಎಸ್ಟಿ ಜಾರಿಯ ಪರಿಣಾಮಗಳು, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳಲ್ಲಿ ಪೂರೈಕೆಯ ಹಿನ್ನಡೆ, ಗ್ರಾಮೀಣ ಆರ್ಥಿಕತೆಯಲ್ಲಿನ ಬಿಕ್ಕಟ್ಟು, ನಿರುದ್ಯೋಗದ ಪ್ರಮಾಣ ಹೆಚ್ಚಳಗಳು ಅಭಿವೃದ್ಧಿ ದರ ಕುಂಠಿತಗೊಳ್ಳಲು ಕಾರಣವಾಗಿವೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಬಾಂಗ್ಲಾ, ಭೂತಾನ್, ನೇಪಾಳ
ಭಾರತದ ಆರ್ಥಿಕತೆ ಕುಸಿತಗೊಳ್ಳುತ್ತಿರುವ ಬೆನ್ನಲ್ಲೇ ನೆರೆಯ ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಜಿಡಿಪಿ ದರ ವೃದ್ಧಿಸುತ್ತಿದೆ. ಕಳೆದ ವರ್ಷ ಶೇ 7.9ರಷ್ಟಿದ್ದ ಬಾಂಗ್ಲಾದೇಶದ ಜಿಡಿಪಿ, ಪ್ರಸಕ್ತ ಸಾಲಿನಲ್ಲಿ ಶೇ 8.1ಕ್ಕೆ ಏರುವ ನಿರೀಕ್ಷೆಯಿದೆ. ನೇಪಾಳ ಶೇ 6.5ಕ್ಕೆ ತನ್ನ ಜಿಡಿಪಿ ದರ ವೃದ್ಧಿಸಿಕೊಳ್ಳಲಿದೆ. ಭೂತಾನ್ ಕೂಡ ಶೇ 7.4ರಷ್ಟು ಜಿಡಿಪಿ ಹೊಂದಿರಲಿದೆ. ಈ ಮೂರು ದೇಶಗಳನ್ನು ಹೊರತುಪಡಿಸಿ ದಕ್ಷಿಣ ಏಷ್ಯಾದ ಉಳಿದ ದೇಶಗಳು ಆರ್ಥಿಕ ಹಿನ್ನಡೆ ಎದುರಿಸುತ್ತಿವೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications