ಮುಂದಿನ ವಾರ ಬ್ಯಾಂಕ್ ಓಪನ್ ಇರುತ್ತಾ?
ಬೆಂಗಳೂರು, ಜ.19: 'ಮುಂದಿನ ವಾರ ಬ್ಯಾಂಕ್ ಓಪನ್ ಇರುತ್ತಾ?' ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲ ತಾಣ ಸೇರಿದಂತೆ ವಾಟ್ಸಪ್, ಎಸ್ಎಂಎಸ್ ನಲ್ಲಿ ಸಂದೇಶ ಹರಿದಾಡುತ್ತಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಜ.21 ರಿಂದ ಜ.26ರ ತನಕ ಬಾಗಿಲು ಬಂದ್ ಮಾಡುವ ಸುದ್ದಿ ಈಗ ಹಾಟ್ ಟಾಪಿಕ್.
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಜ.21ರಿಂದ ಜ.26 ರತನಕ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರ ನಡೆಯುವುದೇ? ನಡೆದರೆ ಎಷ್ಟು ದಿನ? ಎಂಬುದು ಇನ್ನೂ ಖಾತ್ರಿಯಾಗಿಲ್ಲ. ನೌಕರರ ಒಕ್ಕೂಟದ ಜೊತೆ ಆಡಳಿತ ಮಂಡಳಿ ಮಾತುಕತೆ ಜಾರಿಯಲ್ಲಿದೆ. [ಮಿಸ್ಡ್ ಕಾಲ್ ಕೊಟ್ಟು ಬ್ಯಾಂಕ್ ಬ್ಯಾಲೆನ್ಸ್ ಪಡೆಯಿರಿ]

ಶೇ .25ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಬ್ಯಾಂಕ್ ನೌಕರರ ಬೇಡಿಕೆ. ಬ್ಯಾಂಕ್ ಆಡಳಿತ ಮಂಡಳಿ ಶೇ 11ರವರೆಗೆ ವೇತನ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿವೆ. ಹೀಗಾಗಿ ಮುಷ್ಕರ ನಡೆಯುವುದು ಬಹುತೇಕ ಖಚಿತವಾಗಿ. ಜ.7ರಂದು ನಡೆಯಬೇಕಿದ್ದ ಒಂದು ದಿನದ ಮುಷ್ಕರ ಸ್ಥಗಿತಗೊಳಿಸಲಾಗಿತ್ತು. ಅದರೆ, ಜ.21 ರಿಂದ ಬ್ಯಾಂಕುಗಳು ಕಾರ್ಯನಿರ್ವಹಿಸುವುದು ಕಷ್ಟ ಎಂದು ಒಕ್ಕೂಟದ ಸಂಚಾಲಕ ಮುರಳಿ ಹೇಳಿದ್ದಾರೆ.
ಹೀಗಾಗಿ 6 ದಿನಗಳ ಕಾಲ ಬ್ಯಾಂಕ್ ಅಷ್ಟೇ ಅಲ್ಲದೆ ಎಟಿಎಂಗಳು ಕಾರ್ಯ ನಿರ್ವಹಿಸುವುದಿಲ್ಲ. ಜ.21 ರಿಂದ 24ರ ತನಕ ಮುಷ್ಕರ, ಜ.25 ಭಾನುವಾರ ಜೊತೆಗೆ ಜ.26 ಗಣತಂತ್ರ ದಿನವಾದ್ದರಿಂದ ಗ್ರಾಹಕರಿಗೆ ಆಘಾತಕಾರಿ ಸುದ್ದಿಯಾಗಿದೆ.
ಮುಷ್ಕರದ ಬಗ್ಗೆ ಕೇಂದ್ರ ನೌಕರರ ಒಕ್ಕೂಟ(ಯುಎಫ್ ಬಿಯು) ಇನ್ನೂ ನಿರ್ಧರಿಸಿಲ್ಲ. ಜ.21ರಿಂದ ಮುಷ್ಕರ ಹಾಗೂ ಮಾ.19ರಿಂದ ಅನಿರ್ಧಿಷ್ಟಾವಧಿ ಮುಷ್ಕರದ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ.
ನೌಕರರ ಶ್ರಮದಿಂದ ರಾಷ್ಟ್ರೀಕೃತ ಬ್ಯಾಂಕ್ಗಳು ಕಳೆದ 5 ವರ್ಷದಲ್ಲಿ 1.30 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. ಅಲ್ಲದೆ, ಕಳೆದ ತ್ರೈಮಾಸಿಕವೂ ಉತ್ತಮವಾಗಿದೆ. ಆದ್ದರಿಂದ ವೇತನ ಹೆಚ್ಚಿಸಬೇಕು. ಸರ್ಕಾರ ಮಧ್ಯ ಪ್ರವೇಶಿಸಿ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು' ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಅಧ್ಯಕ್ಷ ವೈ.ಸುದರ್ಶನ್ ಹೇಳಿದ್ದಾರೆ.












Click it and Unblock the Notifications