Gold Rate: ಬಜೆಟ್ ಬಳಿಕ ಚಿನ್ನದ ಬೆಲೆ ಭಾರಿ ಕುಸಿತ?
2025-2026ನೇ ಸಾಲಿನ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಮಧ್ಯಮ ವರ್ಗದ ಜನತೆ ಈ ಬಾರಿ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಅದರಲ್ಲೂ ಜನರ ಮೇಲಿನ ಆರ್ಥಿಕ ಹೊರೆಗಳನ್ನು ಇಳಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ ಎನ್ನುವ ವಿಶ್ವಾಸ ಜನರಲ್ಲಿದೆ.
ಚಿನ್ನದ ವ್ಯಾಪಾರಿಗಳು ಕೂಡ ಈ ಬಾರಿ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿನ್ನ ಖರೀದಿಸುವ ಮಧ್ಯಮ ವರ್ಗದ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆ ರೂಪಿಸಿರುತ್ತಾರೆ ಎಂದು ನಂಬಿದ್ದಾರೆ.

ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದ್ದು ಇಎಂಐ ಮೂಲಕ ಚಿನ್ನವನ್ನು ಖರೀದಿ ಮಾಡಲು ಮತ್ತು ಕುಶಲಕರ್ಮಿಗಳ ಕೌಶಲ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಣಕಾಸಿನ ನೆರವು ಘೋಷಿಸಬಹುದು ಎಂದು ಚಿನ್ನಾಭರಣ ವ್ಯಾಪಾರಿಗಳು ಕಾಯುತ್ತಿದ್ದಾರೆ.
ಒಬ್ಬರೇ ನಿಯಂತ್ರಕರಿರಲಿ
ಚಿನ್ನದ ಮಾರುಕಟ್ಟೆಯನ್ನು ನಿಯಂತ್ರಿಸಲು ಯಾರಾದರೂ ಒಬ್ಬರಿಗೆ ಅಧಿಕಾರ ಕೊಡುವಂತೆ ಒತ್ತಾಯ ಮಾಡಲಾಗುತ್ತಿದೆ. ಈಗ ಸೆಬಿ, ಆರ್ಬಿಐ, ಡಿಜಿಎಫ್ಟಿ, ಹಣಕಾಸು ಸಚಿವಾಲಯ ಮತ್ತು ವಾಣಿಜ್ಯ ಸಚಿವಾಲಯ ಚಿನ್ನದ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ.
ಚಿನ್ನ ಮತ್ತು ಬೆಳ್ಳಿಯ ವ್ಯಾಪಾರಿಗಳು ಕಳೆದ ಹಲವು ವರ್ಷಗಳಿಂದ 0.65% ರಷ್ಟು ಮಾತ್ರ ಲಾಭ ಪಡೆಯುತ್ತಿದ್ದಾರೆ. ಚಿನ್ನದ ಮೇಲಿನ ಆಭರಣ ಸುಂಕವನ್ನು ಕಡಿಮೆ ಮಾಡುವ ಮೂಲಕ ಲಾಭದ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಭಾರತ ಚಿನ್ನ ಮತ್ತು ಚಿನ್ನಾಭರಣ ವ್ಯಾಪಾರಿಗಳ ಸಂಘದ (ಐಬಿಜೆಎ) ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಹೇಳಿರುವುದಾಗಿದೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಚಿನ್ನದ ಉದ್ಯಮವು ಲಕ್ಷಾಂತರ ಜನರಿಗೆ ಪರಿಣಿತ ಕುಶಲಕರ್ಮಿಗಳಿಗೆ ಉದ್ಯೋಗ ನೀಡುತ್ತಿದ್ದು, ಬಜೆಟ್ನಲ್ಲಿ ಚಿನ್ನದ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಹಣ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಮಧ್ಯಮ ವರ್ಗದ ಗ್ರಾಹಕರಿಗೆ ಇಎಂಐ ಮೂಲಕ ಆಭರಣಗಳನ್ನು ಖರೀದಿ ಮಾಡುವುದು, ತೆರಿಗೆ ದರಗಳನ್ನು ಕಡಿಮೆ ಮಾಡುವುದು ಮತ್ತು ಆಭರಣ ಮತ್ತು ಇತರ ವಲಯಗಳಿಗೆ ಮೂಲಸೌಕರ್ಯಕ್ಕೆ ಹೆಚ್ಚಿನ ಹಣಕಾಸು ಒದಗಿಸುವ ಮೂಲಕ ಉದ್ಯಮವನ್ನು ಮತ್ತಷ್ಟು ವಿಸ್ತರಿಸಲು ಅನುಕೂಲ ಮಾಡಿಕೊಡಬೇಕು ಸೆನ್ಕೊ ಗೋಲ್ಡ್ ಅಂಡ್ ಡೈಮಂಡ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುವಾಂಕರ್ ಸೇನ್ ಸಲಹೆ ನೀಡಿರುವುದಾಗ ಇಟಿ ವರದಿ ಮಾಡಿದೆ.
ಬಜೆಟ್ ಬಳಿಕ ಚಿನ್ನದ ಬೆಲೆ ಏರು ಪೇರಾಗುವುದು ಮಾತ್ರ ಸತ್ಯ. ಒಂದು ವೇಳೆ ಸರ್ಕಾರ ದೇಶಾದ್ಯಂತ ಚಿನ್ನಕ್ಕೆ ಏಕರೂಪದ ದರ ಜಾರಿಗೆ ತರುವುದು, ಆಮದು ಸುಂಕ ಕಡಿಮೆ ಮಾಡಲು ಕ್ರಮ ವಹಿಸಿದರೆ ಚಿನ್ನದ ಬೆಲೆಯಲ್ಲಿ ಕುಸಿತವನ್ನು ನಿರೀಕ್ಷೆ ಮಾಡಬಹುದು.











Click it and Unblock the Notifications