ಐಟಿ ವಲಯದಲ್ಲಿ ಕೆಲಸದಿಂದ ತೆಗೆಯೋದು ಯಾರನ್ನು, ಯಾಕೆ?
ಐಟಿ ವಲಯದಲ್ಲಿ ಈಗ ಸಾಮೂಹಿಕ ವಜಾ ಪರ್ವ ಶುರುವಾಗಿದೆ. ಅಲ್ಲಿಂದ ಎದ್ದ ಅಲ್ಲೋಲ ಕಲ್ಲೋಲ ಉದ್ಯೋಗಿಗಳಿಗೆ ಕಂಪನಿಗಳ ಮೇಲಿನ ಕೋಪಕ್ಕೆ ಕಾರಣವಾಗಿದೆ. ಏನಿದು ಕೆಲಸದಿಂದ ಏಕಾಏಕಿ ತೆಗೆಯುವ ರೀತಿ ಸರಿಯಲ್ಲ. ಮನುಷ್ಯತ್ವ ಅಲ್ಲ. ನೈತಿಕತೆ ಅಲ್ಲ... ಹೀಗೆ ನಾನಾ ಬಗೆಯ ಆಕ್ರೋಶಕ್ಕೂ ಕಾರಣವಾಗಿದೆ.
ಅಷ್ಟೇ ಅಲ್ಲ, ಪ್ರತಿಭಟನೆ- ಆಕ್ರೋಶ ಅಂತ ಎಂದೂ ತೋರಿಸಿಕೊಳ್ಳದಿದ್ದ ಐಟಿ ಉದ್ಯೋಗಿಗಳು ಇತ್ತೀಚೆಗೆ ಕೋಪಗೊಂಡು, ಸ್ವಾತಂತ್ರ್ಯ ಉದ್ಯಾನದ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲಿ ಭಾಗವಹಿಸಿದ್ದವರನ್ನೇ ಮಾತನಾಡಿಸಿದರೆ ಒಬ್ಬೊಬ್ಬರದು ಒಂದೊಂದು ಸಿನಿಮಾಗಾಗುವಷ್ಟು ಕಥೆ. ಪ್ರತಿ ತಿಂಗಳು ಸಾವಿರಾರು ರುಪಾಯಿ ಕಮಿಟ್ ಮೆಂಟ್ ಗಳು, ದೊಡ್ಡ ಕುಟುಂಬ ಅದೂ ಇದೂ ಎಂದು ಒತ್ತಡವೋ ಒತ್ತಡ.
ಆದರೆ, ಈ ವಲಯದಲ್ಲಿ ಯಾಕೆ ಹೀಗಾಯಿತು, ಏಕಾಏಕಿ ಕೆಲಸದಿಂದ ಏಕೆ ತೆಗೆಯುತ್ತಾರೆ? ಇದೇನು ಮೊದಲ ಸಲ ಹೀಗಾಗ್ತಾ ಇದೆಯಾ? ಕೆಲಸದಿಂದ ತೆಗೆದುಹಾಕುವ ಹಿಂದಿನ ಲೆಕ್ಕಾಚಾರಗಳೇನು? ಇತ್ಯಾದಿ ವಿಚಾರಗಳ ಬಗ್ಗೆ ಕಂಪನಿಯೊಂದರ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿ ಜತೆಗೆ ಒನ್ಇಂಡಿಯಾ ಕನ್ನಡ ಮಾತನಾಡಿದೆ. ಅವರು ನೀಡಿದ ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ಬೇಡಿಕೆ ಹೆಚ್ಚಿದ್ದಾಗ ಬಂದವರು
ಐಟಿ ವಲಯಕ್ಕೆ ವಿಪರೀತ ಬೇಡಿಕೆ ಇದ್ದ ಕಾಲದಲ್ಲಿ ಕೆಲವು ಮಾನದಂಡಗಳನ್ನು ಪಕ್ಕಕ್ಕಿಟ್ಟು, ನೇಮಕಾತಿ ಮಾಡಿಕೊಳ್ಳಲಾಗಿದೆ. ಅಂಥವರ ವೇತನ, ನೀಡುವ ಸವಲತ್ತು ವಿಪರೀತವಾಗಿದೆ. ಅಂದರೆ ಹೊರೆಯಾಗಿ ಪರಿಣಮಿಸಿದೆ. ಅಂಥವರು ಕಲಿಕೆಗೂ ಮುಂದಾಗಲಿಲ್ಲ.
ಯಾವುದೇ ಕಂಪನಿ ತನ್ನ ಗ್ರಾಹಕರಿಗೆ ವರ್ಷದಿಂದ ವರ್ಷಕ್ಕೆ ಖರ್ಚು ಉಳಿಸುತ್ತಿರುವುದಾಗಿ ತೋರಿಸಬೇಕು. ಜತೆಗೆ ಕಂಪನಿಯ ವೆಚ್ಚವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಷ್ಟು ವರ್ಷ ಕೆಲಸದಿಂದ ತೆಗೆಯುತ್ತಿರಲಿಲ್ಲ ಅಂತಲ್ಲ. ಆದರೆ ಅದು ಈ ಪ್ರಮಾಣದಲ್ಲಿ ಸುದ್ದಿ ಆಗುತ್ತಿರಲಿಲ್ಲ.

ಧೋರಣೆ ಗಮನಿಸುವ ಆಡಳಿತ ಮಂಡಳಿ
ಉದ್ಯೋಗಿ ಎಷ್ಟೇ ಬುದ್ಧಿವಂತ ಆದರೂ ಅವರ ಧೋರಣೆ ಹೇಗಿದೆ ಅನ್ನೋದನ್ನು ಆಡಳಿತ ಮಂಡಳಿ ಗಮನಿಸುತ್ತದೆ. ಹೇಳಿದ ಮಾತನ್ನು ಕೇಳಲ್ಲ. ಎಲ್ಲ ವಿಚಾರದಲ್ಲೂ ಬೇಕಂತಲೇ ರೊಳ್ಳೆ ತೆಗೆಯುವವರು ಕೂಡ ಇಂಥ ಸಂದರ್ಭದಲ್ಲಿ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಒಂದು ತಂಡದಲ್ಲಿ ಒಬ್ಬ ವ್ಯಕ್ತಿ ಎಲ್ಲಕ್ಕೂ ಉಲ್ಟಾ ಹೊಡೆದರೆ, ಅದೇ ಗುಣ ಇತರರಲ್ಲೂ ಕಾಣಿಸಿಕೊಳ್ಳುತ್ತದೆ.
ಒಟ್ಟಾರೆ ಒಂದು ತಂಡದ ವಾತಾವರಣ ಅಂಥವರಿಂದ ಹಾಳಾಗುತ್ತದೆ. ಆದ್ದರಿಂದ ಇಂಥ ಸನ್ನಿವೇಶದಲ್ಲಿ ಆ ರೀತಿ ಧೋರಣೆಯವರೇ ಆಚೆಗೆ ಕಳಿಸಲು ಮೊದಲ ಗುರಿ.

ಅದಕ್ಷರಿಗೆ ಸರಕಾರವೇ ಎಚ್ಚರಿಕೆ ಕೊಟ್ಟಿದೆ
ಪ್ರತಿ ವರ್ಷ ಯಾವುದೇ ಉದ್ಯೋಗಿಯ ಪರ್ಫಾರ್ಮೆನ್ಸ್ ಹೇಗಿದೆ ಅನ್ನೋದನ್ನು ಕಂಪನಿ ಖಂಡಿತಾ ಗಮನಿಸುತ್ತದೆ. ಈಚೆಗೆ ಸರಕಾರವೇ ಹೇಳಿದೆ: ಅದಕ್ಷ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಕೊಡ್ತೀವಿ ಅಂತ. ಅಂದರೆ ಸರಕಾರವೇ ಅದಕ್ಷರನ್ನು ಸಹಿಸುವುದಿಲ್ಲ. ಇಂಥ ಕ್ರಮಕ್ಕೆ ಜನ ಸಾಮಾನ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಂಥದ್ದರಲ್ಲಿ ಸಾವಿರಾರು ಉದ್ಯೋಗಿಗಳ ಹಿತ ಕಾಪಾಡಬೇಕಾದ ಕಂಪನಿಗಳು ಹೇಗೆ ಯೋಚಿಸಬೇಕು?
ಹದಿನೈದು- ಇಪ್ಪತ್ತು ವರ್ಷದ ಅನುಭವ ಇರುವವರು ಉಪಾಧ್ಯಕ್ಷ, ಸಿಇಒ ಹೀಗೆ ಮೇಲ್ ಸ್ತರದ ಹುದ್ದೆಗಳಿಗೆ ಏರಿರಬೇಕು. ಆದರೆ ಅಷ್ಟು ಅನುಭವ ಇರುವ ಎಲ್ಲರೂ ಹಾಗೆ ಆಗಲು ಸಾಧ್ಯವಿಲ್ಲ. ಅಂಥವರು ನಿರ್ವಹಿಸುವ ಕೆಲಸವನ್ನು ಅವರಿಗಿಂತ ಅರ್ಧ ಸಂಬಳಕ್ಕೆ, ಚಿಕ್ಕ ವಯಸ್ಸಿನ ಚುರುಕಾದ ಹುಡುಗರು ಮಾಡಬಲ್ಲರು. ಆದ್ದರಿಂದ ಹೆಚ್ಚಿನ ಅನುಭವ ಆಗಿ, ಹೊಸದೇನನ್ನೂ ಕಲಿಯದವರು ಗುರಿಯಾಗುತ್ತಾರೆ.

ಬೇಕಂತಲೇ ರಜಾ ಹಾಕುವವರು
ತುಂಬ ಮುಖ್ಯ ಕೆಲಸ ಇದ್ದು, ಇದೇ ಡೆಡ್ ಲೈನ್ ಅಂತ ಗೊತ್ತಿದ್ದರೂ ಬೇಕಂತಲೇ ರಜಾ ಹಾಕುವವರು, ನೆಪಗಳನ್ನು ಹೇಳಿ ಅಗತ್ಯ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡಲು ಸಿದ್ಧರಿಲ್ಲದ ಉದ್ಯೋಗಿಗಳು ಕೂಡ ಪಟ್ಟಿಯಲ್ಲಿ ಬೇಗ ಸೇರ್ಪಡೆಯಾಗುತ್ತಾರೆ.

ಒಂದೆರಡು ದಿನದ ಮುಂಚೆ ಪಟ್ಟಿ ಸಿದ್ಧವಾಗುತ್ತದೆ
ಉದ್ಯೋಗದಿಂದ ತೆಗೆದು ಹಾಕಬೇಕು ಅನ್ನೋದು ತಿಂಗಳಾನುಗಟ್ಟಲೆ ಮುಂಚಿನಿಂದ ಯೋಜನೆ ಮಾಡಿರುವುದಲ್ಲ. ಒಂದೆರಡು ದಿನದ ಮುಂಚೆಯಷ್ಟೇ ಪಟ್ಟಿ ಸಿದ್ಧವಾಗುತ್ತದೆ. ಅದರಲ್ಲೂ ಬಹಳ ಮಾನದಂಡಗಳನ್ನು ಗಮನಿಸಿ, ಯಾರನ್ನು ಕೆಲಸದಿಂದ ತೆಗೆಯಬೇಕು ಎಂಬಾ ತೀರ್ಮಾನ ಮಾಡಲಾಗುತ್ತದೆ.
ವಯಸ್ಸು, ಅನುಭವ, ವೇತನ, ಧೋರಣೆ ಹೀಗೆ ಹಲವು ಅಂಶಗಳನ್ನು ಗಮನಿಸಲಾಗುತ್ತದೆ. ಈ ವಲಯದಲ್ಲಿ ನಲವತ್ತರ ವಯಸ್ಸಿನ ನಂತರ ಉಳಿದುಕೊಳ್ಳುವುದು ಯಾರಿಗೂ ಸಲೀಸಲ್ಲ. ಇದು ಬರೀ ಐಟಿ ವಲಯ ಅಂತಲ್ಲ, ಎಲ್ಲ ಕಡೆಗೂ ಹೀಗೇ ಇದೆ.












Click it and Unblock the Notifications