ಸ್ವಸಹಾಯ ಗುಂಪುಗಳ ಸಬಲೀಕರಣಕ್ಕಾಗಿ ಸರ್ಕಾರ- ಮೀಶೋ ಒಪ್ಪಂದ
ಬೆಂಗಳೂರು, ಜುಲೈ 28: ರಾಜ್ಯದ ಸ್ತ್ರೀಯರ ಸಾಮರ್ಥ್ಯ ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ನೆರವಾಗುವ ಸ್ವ ಸಹಾಯ ಗುಂಪುಗಳ ಸಬಲೀಕರಣ್ಕಾಗಿ ರಾಜ್ಯ ಸರ್ಕಾರ ಸಂಜೀವಿನಿ-ಕೆಎಸ್ಆರ್ಎಲ್ಪಿಎಸ್ ಮತ್ತು ಇ-ಕಾಮರ್ಸ್ ಸಂಸ್ಥೆ ಮೀಶೋ ನಡುವೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2,500 ಸ್ವಸಹಾಯ ಗುಂಪುಗಳ ಸಬಲೀಕರಣ ಉದ್ದೇಶದಿಂದ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಮೂಲಕ ಸ್ತ್ರೀ ಸಾಮರ್ಥ್ಯ ಕರ್ನಾಟಕದಿಂದ ಜಗತ್ತಿಗೆ ತಿಳಿಯಲಿದೆ ಎಂದರು.
"ಸ್ತ್ರೀ ಸಾಮರ್ಥ್ಯ ಯೋಜನೆ' ಜಾರಿ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ರಾಜ್ಯದ ಮಹಿಳೆಯರಿಗೆ ಕೊಡುಗೆ ಕೊಟ್ಟಿದ್ದಾರೆ ಎನ್ನಬಹುದು.
ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯನ್ನು ಎಂಡ್-ಟು -ಎಂಡ್ ಮಾರ್ಗದಲ್ಲಿ ಕೈಗೊಳ್ಳಲಾಗುವುದು. ಗ್ರಾಮೀಣ ಮಹಿಳೆಯರ ಸಬಲೀಕರಣದ ಸರ್ಕಾರದ ಈ ಪ್ರಯತ್ನದಲ್ಲಿ ಕೆನರಾ ಬ್ಯಾಂಕ್ ಹಾಗೂ ಮೀಶೋ ಸಂಸ್ಥೆಗಳು ಕೈಜೋಡಿಸಿರುವುದು ಸ್ವಾಗತಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಭಾರತ ಸರ್ಕಾರದ ಜೀವನೋಪಾಯ ಕಾರ್ಯಕ್ರಮಗಳ ನೆರವಿನೊಂದಿಗೆ ಹಾಗೂ ಎಲಿವೇಟ್ ಯೋಜನೆ ಅಡಿಯಲ್ಲಿಯೂ ಸ್ತ್ರೀ ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ಒದಗಿಸುತ್ತಿದೆ. ಈ ಕಾರ್ಯಕ್ರಮಗಳನ್ನು ವೃದ್ಧಿಸಿ ಸೂಕ್ಷ್ಮ ಮಟ್ಟದಲ್ಲಿ ನಿರ್ವಹಣೆ ಮಾಡುವ ಅಗತ್ಯವಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ಮಹಿಳೆಯರಿಗಾಗಿ 'ಸಾಮರ್ಥ್ಯ' ಯೋಜನೆ
ರಾಜ್ಯದ ಸ್ವಸಹಾಯ ಗುಂಪುಗಳನ್ನು ಕೆನರಾ ಬ್ಯಾಂಕ್ ಯೋಜನೆಗೆ ಆಯ್ದುಕೊಂಡಿರುವುದು ಶ್ಲಾಘನೀಯ. ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಆರ್ಥಿಕತೆ ಎಂದರೆ ಹಣವಲ್ಲ. ಬದಲಾಗಿ ಅದು ಜನರ ಆರ್ಥಿಕ ಚಟುವಟಿಕೆಗಳು. ಮಹಿಳೆಯರಲ್ಲಿ ಅಪಾರ ಶಕ್ತಿ ಇದ್ದು, ಸದಾ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಮಹಿಳಾ ಶಕ್ತಿಯಲ್ಲಿ ನನಗೆ ನಂಬಿಕೆ ಇದ್ದು, ಅದಕ್ಕಾಗಿಯೇ 'ಸಾಮರ್ಥ್ಯ' ಎಂಬ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದೇವೆ ಎಂದರು.

ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಬೇಕು
ನಾಡಿನಲ್ಲಿರುವ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಆರ್ಥಿಕ ಚಟುಚವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಕೈಗಾರಿಕೆಯಂತಹ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ಮೀಶೋದಂತಹ ಆನ್ಲೈನ್ ವಾಣಿಜ್ಯ ಸಂಸ್ಥೆಗಳ ಸಹಯೋಗದಲ್ಲಿ ಬ್ರಾಂಡಿಂಗ್, ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲಿದೆ. ಈ ಮೂಲಕ ಜಾಗತಿಕ ಮರುಕಟ್ಟೆಗೆ ಮಹಿಳೆಯರನ್ನು ಪರಿಚಯಿಸುವ ಕೆಲಸ ಆಗಲಿದೆ ಎಂದು ಸಲಹೆ ನೀಡಿದರು.

ಗ್ರಾ.ಪಂ:ಮಹಿಳಾ ಸ್ವಯಂ ಉದ್ಯೋಗಕ್ಕೆ ಯೋಜನೆ ಗುರುತಿಸಿ
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರ ಸ್ವಯಂ ಉದ್ಯೋಗಕ್ಕಾಗಿ ನಿರ್ದಿಷ್ಟ ಯೋಜನೆಗಳನ್ನು ಗುರುತಿಸಿ ಡಿಪಿಆರ್ (ಸಮಗ್ರ ಯೋಜನಾ ವರದಿ) ಸಿದ್ಧಪಡಿಸಿಕೊಳ್ಳಬೇಕು. ಇದು ಸಾವಿರಾರು ಮಹಿಳೆಯರ ಬದುಕಿನಲ್ಲಿ ಬಹು ದೊಡ್ಡ ಬದಲಾವಣೆ ತರಲು ನೆರವಾಗುತ್ತದೆ. ಸ್ವಾಭಿಮಾನಿ ಮತ್ತು ಸ್ವಾವಲಂಬನೆ ಬದುಕು ಬದುಕಲು ಮಹಿಳೆಯರಿಗೆ ಸಹಕರಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯವಿರುವ ನೆರವು ಹಾಗೂ ಸಹಾಯ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕಾರ್ಯಕ್ರಮದಲ್ಲಿ ಐಟಿಬಿಟಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್, ಸಚಿವರಾದ ಆರಗ ಜ್ಞಾನೇಂದ್ರ, ಬಿ.ಎ.ಬಸವರಾಜ, ಬಿ.ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಮೀಶೋ ಸಂಸ್ಥಾಪಕ ಹಾಗೂ ವಿದಿತ್ ಆತ್ರೇಯ, ಕೆನರಾ ಬ್ಯಾಂಕ್ ನ ದೇಬೇಂದರ್ ಸಾಹು ಮತ್ತಿತರರು ಉಪಸ್ಥಿತರಿದ್ದರು












Click it and Unblock the Notifications