ಎನ್ಎಸ್ಇ ಹಗರಣ: ಮಾಜಿ ಸಿಇಒ ಮಾಹಿತಿ ಹಂಚಿಕೊಂಡಿದ್ದ 'ಯೋಗಿ' ಬಂಧನ?
ಚೆನ್ನೈ, ಫೆಬ್ರವರಿ 25: ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಹಗರಣದಲ್ಲಿ ಚೆನ್ನೈನಿಂದ ಎನ್ಎಸ್ಇ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಸುಬ್ರಮಣಿಯನ್ ಅವರನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಬಂಧಿಸಿದೆ. ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಎನ್ಎಸ್ಇಯ ಮಾಜಿ ಮುಖ್ಯಸ್ಥರು ಚಿತ್ರಾ ರಾಮಕೃಷ್ಣ ಹಿಮಾಲಯದ ಓರ್ವ ಯೋಗಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಈ ಹಿಂದೆ ವರದಿ ಆಗಿತ್ತು. ಈ ಯೋಗಿಯೇ ಆನಂದ್ ಸುಬ್ರಮಣಿಯನ್ ಎಂದು ಹೇಳಲಾಗಿದೆ.
ಆನಂದ್ ಸುಬ್ರಮಣಿಯನ್ ಏಪ್ರಿಲ್ 1, 2013 ರಿಂದ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿದ್ದರು. ಅವರು ಏಪ್ರಿಲ್ 01, 2015 ರಿಂದ ಅಕ್ಟೋಬರ್ 21, 2016 ರವರೆಗೆ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾಗ ಚಿತ್ರಾ ರಾಮಕೃಷ್ಣ ಅವರಿಗೆ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಸಲಹೆಗಾರರಾಗಿ ಮರು ನೇಮಕಗೊಂಡರು.
ಪರಿಚಯವೇ ಇಲ್ಲದ ಯೋಗಿ ಮಾತಿನಂತೆ ನಿರ್ಧಾರ ಕೈಗೊಂಡಿದ್ದ ಎನ್ಎಸ್ಇ ಮಾಜಿ ಸಿಇಒ!
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಅವರ ಮಾಜಿ ಸಿಇಒ ಚಿತ್ರಾ ಸುಬ್ರಮಣ್ಯಂ ಅವರ ನಿಕಟವರ್ತಿ ಆನಂದ್ ಸುಬ್ರಮಣಿಯನ್ ಅವರ ವಿಚಾರಣೆಯ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳು ಮತ್ತು ವಸ್ತುಗಳನ್ನು ಸಿಬಿಐ ಪರಿಶೀಲಿಸುತ್ತಿದೆ.
ಮಂಗಳವಾರ ಚೆನ್ನೈನಲ್ಲಿ ನಡೆದ ವಿಚಾರಣೆಯ ವೇಳೆ, ಸಿಬಿಐ ಅಧಿಕಾರಿಗಳು ಆನಂದ್ ಸುಬ್ರಮಣಿಯನ್ ಅವರ ನಿವಾಸದಿಂದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಆಗಿನ ಎನ್ಎಸ್ಇ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಮೇಲೆ ಪ್ರಭಾವ ಬೀರಲು 'ಯೋಗಿ'ಯಂತೆ ನಟಿಸಿದ್ದಾರೆ ಎಂದು ಶಂಕಿಸಲಾಗಿದೆ.
ಏನಿದು ಎನ್ಎಸ್ಇ ಹಗರಣ ಪ್ರಕರಣ?
ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಎನ್ಎಸ್ಇಯ ಮಾಜಿ ಮುಖ್ಯಸ್ಥರು ಚಿತ್ರಾ ರಾಮಕೃಷ್ಣ ಹಿಮಾಲಯದ ಓರ್ವ ಯೋಗಿಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಯೋಗಿಯ ಸಲಹೆಯನ್ನು ಪಡೆದು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ ಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತಿಳಿಸಿದೆ ಎಂದು reuters ವರದಿ ಮಾಡಿದೆ.
ಎನ್ಎಸ್ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಮನೆ ಮೇಲೆ ಐಟಿ ದಾಳಿ
4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯದ ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರ ಎನ್ಎಸ್ಇ (NSE)ಗೆ ಮಾಜಿ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಚಿತ್ರಾ ರಾಮಕೃಷ್ಣ ತಾನು ನೋಡದ, ತನಗೆ ಪರಿಚಯವೇ ಇಲ್ಲದ ಹಿಮಾಲಯದ ಯೋಗಿಯೋರ್ವರ ಸಲಹೆಯನ್ನು ಪಡೆದುಕೊಂಡೇ ನಿರ್ಧಾರವನ್ನು ಕೈಗೊಳ್ಳುತ್ತಿದ್ದರು. NSEಯ ಪ್ರಮುಖ ವ್ಯವಹಾರ ಯೋಜನೆಗಳು ಮತ್ತು ಅಜೆಂಡಾ ಸೇರಿದಂತೆ ಹಲವಾರು ವಿಚಾರಗಳನ್ನು ಆ ಅಪರಿಚಿತ ಯೋಗಿಯೊಂದಿಗೆ ಹಂಚಿಕೊಂಡಿದ್ದಾರೆ ಎಂಬ ವಿಚಾರವನ್ನು ಸೆಬಿ ಬಹಿರಂಗಪಡಿಸಿದೆ.
"ಎನ್ಎಸ್ಇಯ ಹಣಕಾಸು ಮತ್ತು ವ್ಯವಹಾರ ಯೋಜನೆಗಳ ಮಾಹಿತಿ ಹಂಚಿಕೆಯು, ಊಹೆಗೂ ನಿಲುಕದ, ಸ್ಟಾಕ್ ಎಕ್ಸ್ಚೇಂಜ್ನ ತಳಹದಿಯನ್ನೇ ಅಲುಗಾಡಿಸಬಲ್ಲ ಕಾರ್ಯವಾಗಿದೆ," ಸೆಬಿ ತನ್ನ ಆದೇಶದಲ್ಲಿ ಉಲ್ಲೇಖ ಮಾಡಿದ್ದು, ಚಿತ್ರಾ ರಾಮಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳಿಗೆ ಈ ಸಂಬಂಧವನ್ನು ದಂಡವನ್ನು ವಿಧಿಸಿದೆ.
ಈ ಯೋಗಿಗಳೇ ಆನಂದ್ ಸುಬ್ರಮಣಿಯನ್ ಅವರ ನೇಮಕಕ್ಕೆ ಚಿತ್ರಾಗೆ ಮಾರ್ಗದರ್ಶನ ನೀಡಿದ್ದರು ಎಂದು ಕೂಡಾ ವರದಿಯು ಹೇಳಿದೆ. ಈ ಯೋಗಿಗಳು ಎಲ್ಲಾ ವಿಷಯದಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದರು, ರಾಮಕೃಷ್ಣ ಅವರು "ಕೇವಲ ಅವರ ಕೈಯಲ್ಲಿ ಬೊಂಬೆ" ಎಂದು ಸೆಬಿಯು ಹೇಳಿದೆ. ಈ ಯೋಗಿಗಳಿಗೆ ಸೇರಿದ್ದು ಎಂದು ಹೇಳಲಾದ ಇಮೇಲ್ ವಿಳಾಸಕ್ಕೆ ಸೆಬಿಯು ಕಳುಹಿಸಿದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎನ್ಎಸ್ಇ ಮತ್ತು ಅದರ ಮಂಡಳಿಯು ಗೌಪ್ಯ ಮಾಹಿತಿಯ ವಿನಿಮಯದ ಬಗ್ಗೆ ತಿಳಿದಿತ್ತು. ಆದರೆ ಈ ವಿಚಾರವನ್ನು ಮುಚ್ಚಿಟ್ಟಿತ್ತು ಎಂದು ಕೂಡಾ ಸೆಬಿ ಹೇಳಿದೆ. (ಒನ್ಇಂಡಿಯಾ ಸುದ್ದಿ)