ಮೂಲಸೌಲಭ್ಯ ಅಭಿವೃದ್ಧಿಗೆ ನೂತನ ಪಿಪಿಪಿ ನೀತಿ : ದೇಶಪಾಂಡೆ
ಬೆಂಗಳೂರು, ಮಾರ್ಚ್ 24 : ರಾಜ್ಯದೆಲ್ಲೆಡೆ ಉತ್ತಮ ಗುಣಮಟ್ಟದೊಂದಿಗೆ ಮೂಲಸೌಲಭ್ಯ ಅಭಿವೃದ್ಧಿಗಾಗಿ ಮತ್ತು ಈ ಮೂಲಕ ಕ್ಷಿಪ್ರ ಗತಿಯಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸುವ ಗುರಿಯೊಂದಿಗೆ ರಾಜ್ಯ ಸರಕಾರವು ಮೂಲಸೌಲಭ್ಯ ಯೋಜನೆಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ನೀತಿ-2018ನ್ನು ಸಿದ್ಧಪಡಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಬಗ್ಗೆ ವಿವರಿಸಿರುವ ಸಚಿವರು, ಪಿಪಿಪಿ ಯೋಜನೆಗಳ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಅನುಮೋದನೆ ಮಿತಿಯನ್ನು ಈಗಿರುವ 50 ಕೋಟಿ ರೂಪಾಯಿಗಳಿಂದ 500 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗುವುದು. ಜೊತೆಗೆ, ಕರ್ನಾಟಕ ಮೂಲಸೌಲಭ್ಯ ಯೋಜನೆಗಳ ಅಭಿವೃದ್ಧಿ ನಿಧಿ, ಕರ್ನಾಟಕ ವೈಯಬಿಲಿಟಿ ಗ್ಯಾಪ್ ಫಂಡ್, ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಲಭ್ಯ ನಿಧಿ (ನ್ಯಾಷನಲ್ ಇನ್ವೆಸ್ಟ್ಮೆಂಟ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಫಂಡ್-ಎನ್ಐಐಎಫ್) ಮೂಲಕ ಹೊಸ ನಿಧಿ ಸಂಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದರು.
ಈ ಹೊಸ ನೀತಿಯು ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಪಿಪಿಪಿ ಮಾದರಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ವಿಶೇಷ ಒತ್ತನ್ನು ನೀಡಿದೆ. ಇದರೊಂದಿದೆ ಈ ಮಾದರಿಯ ಯೋಜನೆಗಳಿಗೆ ಸಂಬಂಧಿಸಿದ ನೀತಿ-ನಿಯಮಗಳು, ತಾಂತ್ರಿಕ, ಕಾನೂನು ಮತ್ತು ಇನ್ನಿತರ ಆಯಾಮಗಳಿಗೆ ಸಂಬಂಧಿಸಿದ ಚಟುವಟಿಕೆಗಳ ನಿರ್ವಹಣೆಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಲ್ಲಿ ಪಾಲಿಸಿ ವಿಂಗ್ ಅನ್ನು ಸ್ಥಾಪಿಸಲಾಗುವುದು. ಅಲ್ಲದೆ, ನೀತಿಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ದೇಶಪಾಂಡೆ ವಿವರಿಸಿದರು.

ಪಿಪಿಪಿ ಯೋಜನೆಗಳಿಗೆ ಕ್ಷಿಪ್ರ ಅನುಮೋದನೆ ನೀಡಲು ಮತ್ತು ಅವು ತ್ವರಿತ ಗತಿಯಲ್ಲಿ ಜಾರಿಗೊಳ್ಳುವಂತೆ ಮಾಡಲು ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ, ನಗರಾಭಿವೃದ್ಧಿ ಮತ್ತು ತಾಂತ್ರಿಕ ವಿಷಯಗಳನ್ನು ಆಳವಾಗಿ ಬಲ್ಲ ಪರಿಣತರೊಬ್ಬರನ್ನು ನೇಮಿಸಿಕೊಳ್ಳಲಾಗುವುದು. ಒಟ್ಟಾರೆಯಾಗಿ, ಪಿಪಿಪಿ ನೀತಿ ಮತ್ತು ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಮೂಲಸೌಲಭ್ಯ ಇಲಾಖೆಯು ಸರಕಾರದ ನಾನಾ ಇಲಾಖೆಗಳ ನಡುವೆ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತದೆ ಎಂದು ಸಚಿವರು ನುಡಿದರು.
ಇದರೊಟ್ಟಿಗೆ, ಪಿಪಿಪಿ ಮಾದರಿಯ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳ ಮೂಲಕ ಆಯ್ದ ಸಲಹೆಗಾರರ ಸೇವೆಯನ್ನು ಪಡೆಯಲಾಗುವುದು ಮತ್ತು ಈ ಬಗೆಯ ಯೋಜನೆಗಳ ಸುಗಮ ಜಾರಿಗಾಗಿ ಈಗ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಡಿಯಲ್ಲಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ತರಲಾಗುವುದು ಎಂದು ದೇಶಪಾಂಡೆ ತಿಳಿಸಿದರು.
ಅಪ್ರೈಸಲ್ ಕೋಶ ರಚನೆ : ಕೆಲವು ಪಿಪಿಪಿ ಯೋಜನೆಗಳಿಗೆ ಕೇಂದ್ರ ಸರಕಾರದ ಮಧ್ಯಸ್ಥಿಕೆ ಅಥವಾ ಪರವಾನಗಿ ಅಗತ್ಯವಿರುತ್ತದೆ. ಇದರತ್ತ ಗಮನ ಹರಿಸಲು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಲ್ಲಿ ಅಪ್ರೈಸಲ್ ಕೋಶವನ್ನು ರಚಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ದೇಶೀಯ ಹೂಡಿಕೆ ಪರಿಸರವನ್ನು ಸುಧಾರಿಸುವ ಮೂಲಕ ಮೂಲಸೌಲಭ್ಯ ವಲಯದಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸುವುದು, ಮೂಲಸೌಲಭ್ಯದ ಗುಣಮಟ್ಟ ಹಾಗೂ ಪ್ರಮಾಣದ ಹೆಚ್ಚಳ, ಪಿಪಿಪಿ ಮಾದರಿಯ ಪ್ರೋತ್ಸಾಹಕ್ಕೆ ಪಾರದರ್ಶಕ ನೀತಿಯ ಬಲವನ್ನು ತುಂಬುವುದು ಸರಕಾರವು ಸಿದ್ಧಪಡಿಸಿರುವ ನೂತನ ಮೂಲಸೌಲಭ್ಯ ಯೋಜನೆಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ನೀತಿ-2018ರ ಉದ್ದೇಶಗಳಲ್ಲಿ ಪ್ರಮುಖವಾಗಿವೆ ಎಂದು ಸಚಿವರು ವಿವರಿಸಿದರು.












Click it and Unblock the Notifications