ನಿಮ್ಮೂರ ತಿಂಡಿತಿನಿಸು ಬಾಗಿಲಿಗೇ ತರುವ ಬೈಂಡ್ ಬೈಂಡ್
ಬೆಂಗಳೂರು, ಅಕ್ಟೋಬರ್ 08 : 'ಗೋ ನೇಟಿವ್' ಉದ್ದೇಶದ ದೇಸೀ ಉತ್ಪನ್ನಗಳಿಗಾಗಿಯೇ ರೂಪಿಸಿದ ಇ-ಕಾಮರ್ಸ್ ಪೋರ್ಟಲ್ ಬೈಂಡ್ಬೈಂಡ್.ಕಾಂ (www.bindbind.com) ಆರಂಭಗೊಂಡಿದೆ. ಬೆಂಗಳೂರಿನ ಯುವ ಸಾಫ್ಟ್ ವೇರ್ ಉದ್ಯೋಗಿಗಳು ಆರಂಭಿಸಿರುವ ಅಂತರ್ಜಾಲ ತಾಣಕ್ಕೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಗುರುವಾರ ಚಾಲನೆ ನೀಡಿದರು.
ಕೃಷಿಕರ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ವಿನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು. ಲ್ಯಾಪ್ ಟಾಪಿನಿಂದ ಹಿಡಿದುಕೊಂಡು, ತರಕಾರಿ, ಹಣ್ಣುಹಂಪಲುಗಳು ಸೇರಿದಂತೆ ತರಹೇವಾರಿ ವಸ್ತುಗಳನ್ನು, ದಿನನಿತ್ಯ ನಾವು ನೋಡುವ ತಳ್ಳುಗಾಡಿಯಲ್ಲಿ ಇಟ್ಟು ವಿನೂತನವಾಗಿ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು. [ಮಿಂಟ್ರಾ ಕೈವಶವಾದ ಬೆಂಗಳೂರಿನ ಪುಟ್ಟ ಕಂಪನಿ]

ಬೈಂಡ್ ಬೈಂಡ್ ಇ ಕಾಮರ್ಸ್ ಸಂಸ್ಥೆ ದಿನಸಿ ಸಾಮಗ್ರಿಗಳು, ಸಿಹಿತಿನಿಸುಗಳು, ಬೊಂಬೆಗಳು, ಗಿಡಮೂಲಿಕೆ ಉತ್ಪನ್ನಗಳು ಮತ್ತು ಇತರ ಎಲ್ಲ ವಸ್ತುಗಳ ಆನ್ಲೈನ್ ಶಾಪಿಂಗ್ ಮತ್ತು ಮನೆ ಮನೆಗೆ ಪೂರೈಸಲು ಹೊಸದಾಗಿ ಸ್ಥಾಪನೆಗೊಂಡ ಸಂಸ್ಥೆಯಾಗಿದ್ದು, ದೂರದ ಊರಲ್ಲಿ ಇದ್ದರೂ ಹುಟ್ಟೂರಿನ ಖಾದ್ಯ, ವಸ್ತುವನ್ನು ತರಿಸಿಕೊಳ್ಳಲು ದೊರೆತಂತಹ ಆನ್ಲೈನ್ ಮಾರುಕಟ್ಟೆ ಸೇವಾ ಸಂಸ್ಥೆ.
ನಮ್ಮ ಹುಟ್ಟೂರಲ್ಲಿ, ನಾವು ಓಡಾಡಿದ ಊರಲ್ಲಿ ಬೆಳೆಯುವಂತಹ, ಸಿದ್ಧಪಡಿಸಿದಂತಹ ವಸ್ತುಗಳು ನಾವು ಎಲ್ಲಿದ್ದರೂ ಇಷ್ಟ. ಆಗಾಗ ಅವುಗಳನ್ನು ತರಿಸಿಕೊಂಡು ಹುಟ್ಟೂರಿನ ಸಂಬಂಧವನ್ನು ಭಾವನಾತ್ಮಕವಾಗಿ ಉಳಿಸಿಕೊಳ್ಳುವ ಬಯಕೆ ಎಲ್ಲರಿಗೂ ಇರುತ್ತದೆ. ಅಂತಹ ಅವಕಾಶವನ್ನು ಬೈಂಡ್ಬೈಂಡ್ ಡಾಟ್ ಕಾಂ ಒದಗಿಸಿಕೊಡುತ್ತಿದೆ.

ಧಾರವಾಡದ ಪೇಡ, ಅಮೀನಗಡದ ಕರದಂಟು, ಬೆಳಗಾವಿಯ ಕುಂದ, ಶಿರಸಿಯ ಅಪ್ಪೆಮಿಡಿ ಉಪ್ಪಿನಕಾಯಿ, ಕರಾವಳಿಯ ಹಲಸಿನ ಹಣ್ಣಿನ ಖಾದ್ಯ, ಹಲಸಿನ ತೊಳೆ ಚಿಪ್ಸ್, ಚನ್ನಪಟ್ಟಣದ ಬೊಂಬೆ, ಮನೆಯಲ್ಲೇ ತಯಾರಿಸಿದಂತಹ ಹಾಗೂ ಈಗಾಗಲೇ ಬ್ರಾಂಡ್ ಆದಂತಹ ಚಾಕೊಲೇಟ್ಗಳು, ಚಕ್ಕುಲಿ, ಮುರುಕು, ಗ್ರೀನ್ಟೀ, ವಿವಿಧ ಬಗೆಯ ಧಾನ್ಯಗಳು ಎಲ್ಲವೂ ಈ ಆನ್ಲೈನ್ ಶಾಪಿಂಗ್ ಸಂಸ್ಥೆ ಮೂಲಕ ತರಿಸಿಕೊಳ್ಳುವುದು ಸಾಧ್ಯವಿದೆ.
ಬೆಂಗಳೂರಿನಲ್ಲಿಯೇ ಇರಲಿ, ರಾಜ್ಯದ ಯಾವುದೇ ಮೂಲೆಯಲ್ಲಿರಲಿ, ದೇಶದ ಇತರ ಯಾವುದೇ ಭಾಗದಲ್ಲಿರಲಿ, ಬೈಂಡ್ಬೈಂಡ್ ಡಾಟ್ ಕಾಂ ಮೂಲಕ ಬೇಕಾದ ವಸ್ತುಗಳನ್ನು ತರಿಸಿಕೊಳ್ಳಬಹುದಾಗಿದೆ. ವಿವರಗಳಿಗೆ 98949 43504 ಅನ್ನು ಸಂಪರ್ಕಿಸಬಹುದಾಗಿದೆ. ಈ ಕನಸಿಗೆ ಹುಟ್ಟು ನೀಡಿದ ಟೆಕ್ಕಿಗಳು ಭರತ್, ರವಿಶಂಕರ್, ರಾಜಾಮಣಿ ಮತ್ತು ಆನಂದರಾಜಾ.












Click it and Unblock the Notifications