ಎಚ್ ಡಿಕೆ ಕ್ಯಾಬ್ಸ್ ಯಾವಾಗ ಆರಂಭ, ಎಷ್ಟು ಕಮಿಷನ್?
ಬೆಂಗಳೂರು, ಜುಲೈ 12: ಅಂತೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಬಲದಲ್ಲಿ ಎಚ್ ಡಿಕೆ ಕ್ಯಾಬ್ಸ್ ರಸ್ತೆಗಿಳಿಯುವುದು ಪಕ್ಕಾ ಆಗಿದೆ. ಆಗಸ್ಟ್ ತಿಂಗಳ ಮಧ್ಯದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಎಚ್ ಡಿಕೆ ಕ್ಯಾಬ್ಸ್ ಸಂಚಾರ ಆರಂಭಿಸಲಿದೆ. ಈಗಾಗಲೇ ಬೆಂಗಳೂರಿನ ಇಪ್ಪತ್ತು ಸಾವಿರ ಚಾಲಕರು ಇದಕ್ಕೆ ಸೇರಿದ್ದಾರೆ ಎಂದು ಕಂಪೆನಿ ಹೇಳಿಕೊಂಡಿದೆ.
ಹುಲಿ ಟೆಕ್ನಾಲಜೀಸ್ ಹೆಸರಲ್ಲಿ ನೋಂದಣಿ ಪ್ರಕ್ರಿಯೆಗೆ ಮುಂದಾಗಿದ್ದು, ಬೆಂಗಳೂರಿನಲ್ಲಿ ಸೇವೆ ಆರಂಭಿಸಿದ ನಂತರ ಮೈಸೂರು, ಮಂಗಳೂರು ಮತ್ತು ಬೆಳಗಾವಿಯಲ್ಲಿ ಸೇವೆ ವಿಸ್ತರಣೆ ಆಗಲಿದೆ. ಕುಮಾರಸ್ವಾಮಿ ಐವತ್ತು ಕೋಟಿ ರುಪಾಯಿ ಹೂಡಿಕೆ ಮಾಡುವ ಗುರಿ ಹೊಂದಿದ್ದಾರೆ. ಕಂಪೆನಿಯು ಚಾಲಕರ ಅನುಕೂಲಗಳ ಬಗ್ಗೆ ಕೂಡ ಗಮನ ಕೇಂದ್ರೀಕರಿಸಲಿದೆ. ಚಾಲಕರಿಗೆ ಶೇ ಐದರಷ್ಟು ಕಮಿಷನ್ ದೊರೆಯಲಿದೆ.
ಅದರ ಜತೆಗೆ ಇನ್ಷೂರೆನ್ಸ್ ಮತ್ತು ಕುಟುಂಬದವರಿಗೆ ಕೆಲ ಅನುಕೂಲಗಳ ಜತೆಗೆ ಇನ್ಸೆಂಟಿವ್ ಕೂಡ ಸಿಗಲಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕುಮಾರಸ್ವಾಮಿಯವರು ಫೋನ್, ಮೇಲ್ ಗೆ ಸಿಕ್ಕಿಲ್ಲ.
ಚಾಲಕರ ಅನುಕೂಲಗಳಿಗೆ ಹೆಚ್ಚಿನ ಗಮನ ವಹಿಸಲಾಗುವುದು ಎನ್ನುತ್ತಾರೆ ಓಲಾ, ಟ್ಯಾಕ್ಸಿ ಫಾರ್ ಷ್ಯೂರ್ ಮತ್ತು ಉಬಲ್ ಚಾಲಕರ ಒಕ್ಕೂಟಗಳ ಮಾಜಿ ಅಧ್ಯಕ್ಷ ತನ್ವೀರ್ ಪಾಷಾ. ಸದ್ಯಕ್ಕೆ ಅವರು ಎಚ್ ಡಿಕೆ ಕ್ಯಾಬ್ಸ್ ತಂಡದ ಪ್ರಮುಖ ಸದಸ್ಯರು.

ಚಾಲಕರ ಸುರಕ್ಷೆಯ ಆದ್ಯತೆ
"ಹತ್ತು ಲಕ್ಷ ಮೌಲ್ಯದ ಜೀವ ವಿಮೆ, ಐದು ಲಕ್ಷದ ಅಪಘಾತ ವಿಮೆ ಮತ್ತು ಎರಡು ಲಕ್ಷದ ವೈದ್ಯಕೀಯ ವಿಮೆಯನ್ನು ವೈದ್ಯರಿಗೆ ವಾರ್ಷಿಕವಾಗಿ ಒದಗಿಸುವ ಉದ್ದೇಶ ಹೊಂದಿದ್ದೇವೆ. ಇನ್ನು ವಾಹನಗಳ ಉಚಿತ ಸರ್ವೀಸಿಂಗ್, ಕುಟುಂಬದವರ ಅನುಕೂಲ, ಜತೆಗೆ ಚಾಲಕರಿಗೆ ಆರ್ಥಿಕ ತಜ್ಞರ ಮಾರ್ಗದರ್ಶನ ಮತ್ತಿತರ ಅನುಕೂಲದ ಬಗ್ಗೆ ಯೋಚನೆ ಮಾಡಿದ್ದೇವೆ" ಎನ್ನುತ್ತಾರೆ.

ಪ್ರಯಾಣ ದರಗಳು ಇಂತಿವೆ
ಎಚ್ ಡಿಕೆ ಕ್ಯಾಬ್ ಅಪ್ಲಿಕೇಷನ್ ನಲ್ಲಿ ಮೂರ್ನಾಲ್ಕು ಬಗೆಯ ಕ್ಯಾಟಗರಿ ಇರುತ್ತವೆ. ಆದರೆ ಈ ಹೆಸರು ಬದಲಾವಣೆ ಕೂಡ ಆಗಬಹುದು. ಮಿನಿ ಮತ್ತು ಹ್ಯಾಚ್ ಬ್ಯಾಕ್ ಗೆ ಪ್ರತಿ ಕಿಲೋಮಿಟರ್ ಗೆ 12.50, ಸ್ಪೋರ್ಟ್ಸ್ ಸೆಡಾನ್ ಮಾದರಿಗೆ 14.50 ಮತ್ತು ಎಸ್ ಯುವಿ ಹಾಗೂ ಹೊರವಲಯದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 18.50 ನಿಗದಿ ಮಾಡಲಿದ್ದಾರೆ.

ತುರ್ತು ಸಂದರ್ಭಕ್ಕೆ ಎಮರ್ಜೆನ್ಸಿ ಬಟನ್
ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅಪ್ಲಿಕೇಷನ್ ನಲ್ಲಿ ಅವಕಾಶ ಇರಲಿದೆ. ಇಂಥದ್ದು ಓಲಾ, ಉಬರ್ ನಲ್ಲಿ ಇಲ್ಲ ಎನ್ನುತ್ತಾರೆ ಎಚ್ ಡಿಕೆ ಕ್ಯಾಬ್ಸ್ ನ ತಾಂತ್ರಿಕ ತಂಡದ ಸುಮಿತ್ ಕುಮಾರ್. ಜುಲಿ ಹತ್ತೊಂಬತ್ತರ ಒಳಗೆ ಆಂಡ್ರಾಯಿಡ್ ಅಪ್ಲಿಕೇಷನ್ ಸಿದ್ಧಗೊಳುತ್ತದೆ. ಆ ನಂತರ ಐಒಎಸ್ ಅಪ್ಲಿಕೇಷನ್ ಕಡೆಗೆ ಗಮನ ಹರಿಸಲಾಗುವುದು. ಆಗಸ್ಟ್ ಮಧ್ಯಭಾಗದೊಳಗೆ ಎಲ್ಲವೂ ಸಂಪೂರ್ಣ ಆಗಿರುತ್ತದೆ ಎಂದಿದ್ದಾರೆ.

ಆಫ್ ಲೈನ್ ಮೂಲಕವೂ ಟ್ಯಾಕ್ಸಿ ಸರ್ವೀಸ್
ಆಫ್ ಲೈನ್ ಮೂಲಕ ಕೂಡ ಟ್ಯಾಕ್ಸಿ ಸೇವೆ ಪಡೆಯಬಹುದು. ಒಂದು ವೇಳೆ ಮೊಬೈಲ್ ಬ್ಯಾಟರಿ ಮುಗಿದು ಹೋಗಿದ್ದರೆ, ಹೊಸ ಗ್ರಾಹಕರಾಗಿದ್ದರೆ ಅವರ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ನೀಡುವ ಮೂಲಕ ಎಷ್ಟು ದರ ಆಗಿದೆ ಎಂಬ ಮಾಹಿತಿಯನ್ನು ಇಮೇಲ್ ನಲ್ಲೂ ಪಡೆಯಬಹುದು ಎನ್ನುತ್ತಾರೆ ಪಾಷಾ.

ಪಹರೆ ವಾಹನ ನಿಯೋಜನೆ
ಇನ್ನು ಬೆಂಗಳೂರಿನಲ್ಲಿ ಚಾಲಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಪಹರೆ ವಾಹನ ನಿಯೋಜಿಸುವ ಯೋಜನೆ ಕೂಡ ಕಂಪೆನಿಗಿದೆ. ಆ ಮೂಲಕ ಚಾಲಕರಾಗಲಿ, ಗ್ರಾಹಕರಿಗಾಗಲೀ ತುರ್ತು ಸಂದರ್ಭದಲ್ಲಿ ಆ ಪಹರೆ ವಾಹನಗಳು ನೆರವಿಗೆ ಧಾವಿಸುತ್ತವೆ. ಚಾಲಕರ ಹಿತಾಸಕ್ತಿಯನ್ನು ಈಗಿರುವ ಟ್ಯಾಕ್ಸಿ ಕಂಪೆನಿಗಳು ಗಮನಕ್ಕೆ ತೆಗೆದುಕೊಂಡಿಲ್ಲ. ಆದರೆ ಚಾಲಕರಿಗೆ ನೆರವಾಗಲು ಇದು ಒಳ್ಳೆ ಕ್ರಮ ಎನ್ನುತ್ತಾರೆ ಓಲಾ ಹಾಗೂ ಉಬರ್ ಗಳಲ್ಲಿ ಕೆಲಸ ಮಾಡಿದ್ದ ಚಾಲಕ ರಾಮ್ ಕುಮಾರ್.

ಚಾಲಕರಿಗಾಗಿ ತರಬೇತಿ
ಚಾಲಕರು ಸೇವೆ ನೀಡಲು ಆರಂಭಿಸುವ ಮುಂಚೆ ಅವರಿಗಾಗಿ ತರಬೇತಿ ಆಯೋಜಿಸಲಾಗುತ್ತದೆ. ಪ್ರಯಾಣಿಕರ ಜತೆಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ವಾಹನಗಳ ಸರ್ವೀಸಿಂಗ್, ತೆರಿಗೆ ಪಾವತಿ, ರಿಯಾಯ್ತಿ ದರದಲ್ಲಿ ವಾಹನದ ಬಿಡಿಭಾಗಗಳನ್ನು ಕೂಡ ಒದಗಿಸಲಾಗುತ್ತದೆ. ಅದರ ಜತೆಗೆ ಅಗತ್ಯ ಸಂದರ್ಭದಲ್ಲಿ ಕಾನೂನಿನ ನೆರವು ನೀಡಲಾಗುವುದು ಎಂದು ಪಾಷಾ ಹೇಳಿದ್ದಾರೆ.

ವಿವಿಧ ಕಾರು ಕಂಪೆನಿಗಳ ಜತೆ ಮಾತುಕತೆ
ಓಲಾ ಹಾಗೂ ಉಬರ್ ಕಂಪೆನಿಗಳಿಗಾಗಿ ಕೆಲಸ ಮಾಡಿದ್ದ ಚಾಲಕರು ಎಚ್ ಡಿಕೆ ಕ್ಯಾಬ್ಸ್ ಗೆ ವಾಲಬಹುದು. ಜತೆಗೆ ಹೊಸದಾಗಿ ವಾಹನ ಖರೀದಿಸಬೇಕು ಎಂಬುವರಿಗೆ ನೆರವಾಘಲು ಈಗಾಗಲೇ ಮಾರುತಿ ಸುಜುಕಿ ಮತ್ತಿತರ ವಾಹನ ಕಂಪೆನಿಗಳ ಜತೆ ಮಾತುಕತೆ ನಡೆಸಲಾಗಿದೆ.

ತಾತ್ಕಾಲಿಕ ಕಚೇರಿ ಆರ್ ಟಿ ನಗರದಲ್ಲಿ
ಸದ್ಯಕ್ಕೆ ತಾತ್ಕಾಲಿಕವಾಗಿ ಆರ್ ಟಿ ನಗರದಲ್ಲಿ ಕಂಪೆನಿಯ ಕಚೇರಿ ಇದೆ. ಆಗಸ್ಟ್ ನಲ್ಲಿ ಅಧಿಕೃತವಾಗಿ ಟ್ಯಾಕ್ಸಿ ಸೇವೆ ಆರಂಭಿಸುವ ಮೊದಲು ಹೆಬ್ಬಾಳದ ಹೊರವರ್ತುಲ ರಸ್ತೆ ಮತ್ತು ಹೆಣ್ಣೂರು ಮುಖ್ಯರಸ್ತೆಯಲ್ಲಿ ಹೊಸ ಕಚೇರಿ ತೆರೆಯುವ ಉದ್ದೇಶ ಇದೆ.












Click it and Unblock the Notifications