ಕ್ರೆಡಾಯ್ ಸದಸ್ಯರಿಗೆ ರಾಮಲಿಂಗಾ ರೆಡ್ಡಿ ಹಿತವಚನ
ಬೆಂಗಳೂರು, ಫೆ.4: ಕ್ರೆಡಾಯ್ ಸದಸ್ಯರು ನಗರದಾದ್ಯಂತ ಕೆರೆಗಳು, ಕೊಳಗಳು, ರಸ್ತೆಗಳು ಮತ್ತು ಚರಂಡಿಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಕ್ರೆಡಾಯ್ ಕರ್ನಾಟಕದ ವಾರ್ಷಿಕ ಸ್ಟೇಟ್ ಕಾನ್ 2015ರಲ್ಲಿ ತಿಳಿಸಿದರು.
ಕ್ರೆಡಾಯ್ ಕರ್ನಾಟಕದ ವಾರ್ಷಿಕ ಸ್ಟೇಟ್ ಕಾನ್ 2015 ಇತ್ತೀಚೆಗಷ್ಟೇ ನಡೆಯಿತು. ಈ ಕಾರ್ಯಕ್ರಮದಲ್ಲಿ, 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕ್ರೆಡಾಯ್ ಬೆಂಗಳೂರು, ಬೆಳಗಾವಿ, ವಿಜಯಪುರ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಕಾರವಾರ, ಮಂಗಳೂರು, ಮೈಸೂರು ಹಾಗೂ ಉಡುಪಿ ವಿಭಾಗಗಳ ರಿಯಲ್ ಎಸ್ಟೇಟ್ ಜಗತ್ತಿನ ಮಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುಖ್ಯ ಅತಿಥಿ, ಗೌರವಾನ್ವಿತ ಸಾರಿಗೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ಸಚಿವರಾದ ರಾಮಲಿಂಗಾ ರೆಡ್ಡಿ ಅವರು "ಈ ನಗರವು ಹಂತಹಂತವಾಗಿ ವಿಸ್ತಾರಗೊಳ್ಳುತ್ತಿದೆ ಮತ್ತು ರಿಯಲ್ ಎಸ್ಟೇಟ್ ಗೆ ಬೇಡಿಕೆಯು ಸತತವಾಗಿ ಬೆಳೆಯಲಿದೆ. ಕೈಗೆಟಕುವ ಬೆಲೆಯಲ್ಲಿ ಮನೆಗಳ ಅವಕಾಶಗಳನ್ನು ಒದಗಿಸಬೇಕಾಗಿದೆ. ನಗರದ ಜನರಿಗೆ ಅದು ಅಗತ್ಯವಾಗಿದೆ ಎಂಬ ನಂಬಿಕೆ ನನ್ನದು. ಬೆಂಗಳೂರು ಅಭಿವೃದ್ಧಿ ಸಂಬಂಧ ಮುಖ್ಯಮಂತ್ರಿಗಳು ಅದ್ಭುತ ಚಿಂತನೆ ಹೊಂದಿದ್ದಾರೆ ಮತ್ತು ಈ ಕನಸು ಸಾಕಾರಗೊಳಿಸಲು ನಾವು ಕ್ರೆಡಾಯ್ ನೆರವು ಬಯಸುತ್ತೇವೆ'' ಎಂದು ಅವರು ಹೇಳಿದರು.

ಸಿ.ಎನ್.ಗೋವಿಂದರಾಜು, ಅಧ್ಯಕ್ಷರು, ಕ್ರೆಡಾಯ್ ಬೆಂಗಳೂರು ಅವರು, ನೆರೆದ ಅಭ್ಯಾಗತರನ್ನು ಸ್ವಾಗತಿಸಿ, ಸ್ಟೇಟ್ಕಾನ್ 2015 ರ ಆತಿಥ್ಯ ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. "ರಾಜ್ಯ ಹಾಗೂ ನಗರದ ರಿಯಲ್ ಎಸ್ಟೇಟ್ ಕುರಿತ ಪ್ರಮುಖ ವಿಷಯಗಳನ್ನು ಚರ್ಚಿಸಲು ಈ ವೇದಿಕೆಯಿದೆ. ಸ್ನೇಹಪರ ನೀತಿ ವಿಧಾನದ ಮೂಲಕ ಪ್ರಗತಿ ಸಾಧ್ಯ ಎಂಬುದಾಗಿ ನಾನು ನಂಬಿದ್ದೇನೆ'' ಎಂದು ಅವರು ಹೇಳಿದರು. ಎಲ್ಲಾ ಭಾಗಿಗಳಿಗೂ ಈ ಸಮ್ಮೇಳನ ಯಶಸ್ಸು ತರಲಿದೆ ಎಂದು ಅವರು ಆಶಿಸಿದರು.
ಆರ್.ನಾಗರಾಜ್, ಅಧ್ಯಕ್ಷರು ಕ್ರೆಡಾಯ್ ಕರ್ನಾಟಕ, ಅವರು ತಮ್ಮ ಸಂದೇಶದಲ್ಲಿ, ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರದ ಕುರಿತು ಮಾತನಾಡಿದರು. "ಕರ್ನಾಟಕ ಸರ್ಕಾರದಿಂದ ಕ್ರೆಡಾಯ್ ಗೆ ಜೀವ ಸಿಕ್ಕಿದೆ ಮತ್ತು ನಾವು ಮರಳಿ ನೀಡಲಷ್ಟೇ ಬಯಸುತ್ತೇವೆ. ರಿಯಾಲ್ಟಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸೀಮೆಗಳನ್ನೇ ಬದಲಾಯಿಸುವಲ್ಲಿ ನಾವು ನಂಬಿಕೆ ಹೊಂದಿದ್ದೇವೆ ಹಾಗೂ ಆಗ ಮಾತ್ರ ನಾವು ಪ್ರಗತಿ ಕಾಣಲು ಸಾಧ್ಯ'' ಎಂದು ಅವರು ಹೇಳಿದರು.
ಸುರೇಶ್ ಹರಿ, ಕಾರ್ಯದರ್ಶಿಗಳು, ಕ್ರೆಡಾಯ್ ಬೆಂಗಳೂರು ಅವರ ಲವಲವಿಕೆಯ ನಿರೂಪಣೆ ಹಾಗೂ ಸಾಂಪ್ರದಾಯಿಕ ಪ್ರಾರ್ಥನೆಯೊಂದಿಗೆ ದಿನ ಆರಂಭಗೊಂಡಿತು. ಈ ಸೆಶನ್ ನಲ್ಲಿ ಮಾರ್ಕೆಟಿಂಗ್, ವಾಣಿಜ್ಯ, ತಂತ್ರಜ್ಞಾನ ಹೀಗೆ ವಿವಿಧ ವಿಷಯಗಳ ಬಗ್ಗೆ ಮಾತನಾಡಲಾಯಿತು.
ಇನ್ನು ಕ್ರೆಡಾಯ್ ಕರ್ನಾಟಕದ ಮಾಜಿ ಅಧ್ಯಕ್ಷ ಬಾಲಕೃಷ್ಣ ಹೆಗಡೆ ರಿಯಲ್ ಎಸ್ಟೇಟ್ ಎದುರಿಸುತ್ತಿರುವ ಹಲವು ತೊಂದರೆಗಳ ಬಗ್ಗೆ ವಿವರಣೆ ನೀಡಿದರು. ಕೆಲವು ಸಮಸ್ಯೆಗಳಿಗೆ ಪರಿಹಾರವನ್ನೂ ತಿಳಿಸಿದರು. (ಒನ್ಇಂಡಿಯಾ ಬಿಜಿನೆಸ್)












Click it and Unblock the Notifications