ಅಬ್ಬಾ...ದ್ವಿಶತಕದ ಗಡಿಬಿಟ್ಟು ಕೆಳಗಿಳಿದ ಬೇಳೆ ಕಾಳು
ನವದೆಹಲಿ, ಅಕ್ಟೋಬರ್, 31: ದ್ವಿಶತಕ ದಾಖಲೆ ಮಾಡಿ ಮುಂದೆ ನುಗ್ಗುತ್ತಿದ್ದ ಬೇಳೆ ಕಾಳುಗಳ ದರದಲ್ಲಿ ಇಳಿಕೆ ಕಂಡುಬಂದಿದ್ದು ಗ್ರಾಹಕ ನಿಟ್ಟುಸಿರು ಬಿಡುವಂತಾಗಿದೆ. ಸರ್ಕಾರದ ಕಠಿಣ ಕ್ರಮಗಳು ಮತ್ತು ಅಕ್ರಮ ದಾಸ್ತಾನುಗಳ ಮೇಲೆ ನಡೆಸಿದ ನಿರಂತರ ದಾಳಿ ದರ ಇಳಿಯಲು ಪ್ರಮುಖ ಕಾರಣವಾಗಿದೆ.
ಒಂದೇ ದಿನ ಬೇಳೆ ಕಾಳುಗಳ ದರದಲ್ಲಿ ಕೆಜಿಗೆ 10 ರಿಂದ 15 ರು. ಕಡಿಮೆಯಾಗಿದೆ. ಬೆಂಗಳೂರಲ್ಲಿ ತೊಗರಿ ಬೇಳೆ 180 ರು. ಗೆ ಇಳಿದಿದೆ. ಉಳಿದಂತೆ ದೆಹಲಿ ಹಾಗೂ ಚೆನ್ನೈನಲ್ಲಿ 170 ರಿಂದ 175 ರುಪಾಯಿಗೆ ಇಳಿದಿದ್ದರೆ ಕೋಲ್ಕತ್ತಾದಲ್ಲಿ 168 ರುಪಾಯಿ ಆಸುಪಾಸಿನಲ್ಲಿದೆ. ಡಿಸೆಂಬರ್ ಒಳಗೆ ಪ್ರತಿ ಕೆಜಿಗೆ ಬೇಳೆ ದರ 120 ರಿಂದ 130 ರೂ. ಆಸುಪಾಸಿಗೆ ಬರುವ ನಿರೀಕ್ಷಯಿದೆ.[ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]
ಇದುವರೆಗೂ ದೇಶದಲ್ಲಿ 10,903 ಅಕ್ರಮ ಬೇಳೆ ದಾಸ್ತಾನುಗಳ ಮೇಲೆ ದಾಳಿ ನಡೆಸಿದ್ದು, 1.20 ಲಕ್ಷ ಟನ್ನಷ್ಟು ಬೇಳೆಯನ್ನು ವಶಕ್ಕೆ ಪಡೆಯಲಾಗಿದೆ. ಕರ್ನಾಟಕದ ಕಲಬುರಗಿ, ಧಾರವಾಡ, ಬಿಜಾಪುರ ಮತ್ತು ಬೆಂಗಳೂರಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಬೇಳೆ ಕಾಳು ದಾಸ್ತಾನು ವಶಪಡಿಸಿಕೊಂಡಿದ್ದರು.
ಸಗಟು ಮಾರುಕಟ್ಟೆಯಲ್ಲಿ ಏಕಾಏಕಿ ಏರಿಕೆ ಸಾಧಿಸಿದ್ದ ತೊಗರಿ ಮತ್ತು ಉದ್ದು ದ್ವಿಶತಕ ಗಡಿ ದಾಟಿದ್ದವು. ಬೆಂಗಳೂರಲ್ಲಿ ಕೆಜಿ ತೊಗರಿ ಬೆಳೆ 210 ರು . ಗೆ ತಲುಪಿತ್ತು. ಉದ್ದು ಸಹ 200 ರು. ದಾಖಲಿಸಿತ್ತು. ಇದೀಗ ದರ ಇಳಿಕೆಯ ಹಾದಿ ಹಿಡಿದಿದ್ದು ಗ್ರಾಹಕರು ನಿಟ್ಟುಸಿರು ಬಿಡುವಂತೆ ಆಗಿದೆ.