ಮೋದಿಗೆ ಪತ್ರ ಬರೆದು ನೋವು ತೋಡಿಕೊಂಡ ಮಲ್ಯ
ಬೆಂಗಳೂರು, ಜೂನ್ 26: ಉದ್ಯಮಿ ವಿಜಯ್ ಮಲ್ಯ ಅವರು ಭಾರತದ ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಸಾಲ ಮಾಡಿಕೊಂಡು, ಯುಕೆಗೆ ಪರಾರಿಯಾಗಿದ್ದಾರೆ ಎಂಬ ಸುದ್ದಿಗೆ ಗುದ್ದು ನೀಡಲು ಮಲ್ಯ ಅವರು ಹಳೆ ಪತ್ರವನ್ನು ಬಹಿರಂಗಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದು ನನ್ನ ಪರಿಸ್ಥಿತಿ ಬಗ್ಗೆ ಅಳಲು ತೋಡಿಕೊಂಡಿದ್ದೆ ಎಂದು ಸದ್ಯ ಲಂಡನ್ನಿನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರುಗಳಿಗೂ ಅಧಿಕ ಸಾಲ ಮಾಡಿಕೊಂಡು 2016ರ ಮಾರ್ಚ್ ತಿಂಗಳಿನಲ್ಲಿ ಯುಕೆಗೆ ಹಾರಿದ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಜಾರಿ ನಿರ್ದೇಶನಾಲಯ ಸತತ ಪ್ರಯತ್ನ ನಡೆಸಿದೆ.
ಮನಿಲಾಂಡ್ರಿಂಗ್ ಪ್ರಕರಣದಲ್ಲಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್ ಪಡೆದಿರುವ ಮಲ್ಯ ಅವರು ತಾವು ಮೋದಿ ಅವರಿಗೆ ಏಪ್ರಿಲ್ 2016ರಲ್ಲಿ ಬರೆದಿದ್ದ ಪತ್ರವನ್ನು ಇಂದು ಬಹಿರಂಗಪಡಿಸಿದ್ದಾರೆ.

ಮೊದಲ ಪುಟದಲ್ಲೇ ನೋವು ತೋಡಿಕೊಂಡ ಮಲ್ಯ
28ವರ್ಷ ವಯಸ್ಸಿಗೆ ನಾನು ಯುಬಿ ಸಮೂಹದ ಚೇರ್ಮನ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಅನೇಕ ರೀತಿ ಅಧಿಕಾರ ವರ್ಗಗಳನ್ನು ಕಂಡಿದ್ದೇನೆ. 1983ರಲ್ಲಿ ನನ್ನ ತಂದೆಯ ಅಗಲಿಕೆಯ ನಂತರ ನಾನು, ಕೇಂದ್ರದಲ್ಲಿ ಸಮರ್ಥ ಅಧಿಕಾರವನ್ನು ಕಂಡಿದ್ದು ನಿಮ್ಮ ಅಧಿಕಾರ ಅವಧಿಯಲ್ಲಿ ಮಾತ್ರ.
ಕಳೆದ ಮೂರು ದಶಕಗಳಲ್ಲಿ ವಿಶ್ವದ ಅತಿದೊಡ್ಡ ಸ್ಪಿರೀಟ್ ಕಂಪನಿ (ಯುನೈಟೆಡ್ ಸ್ಪೀರೀಟ್ ಲಿಮಿಟೆಡ್) ಹಾಗೂ ಭಾರತದ ಅತಿ ದೊಡ್ಡ ಬ್ರೂಯಿಂಗ್ ಕಂಪನಿ(ಯುನೈಟೆಡ್ ಬ್ರೂವರೀಸ್ ಲಿಮಿಟೆಡ್) ಮೂಲಕ ಲಕ್ಷಾಂತರ ಕೋಟಿ ತೆರಿಗೆ ಪಾವತಿಸಿದ್ದೇವೆ. ಸಮೂಹ ಸಂಸ್ಥೆಗೆ ಸೇರಿದ ನೂರಾರು ಕಂಪನಿಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದೇವೆ.
ರೋಗಗ್ರಸ್ತ ಸಂಸ್ಥೆಗಳಾದ ಹಿಂದೂಸ್ತಾನ್ ಪಾಲಿಮರ್ಸ್ ಲಿಮಿಟೆಡ್ ಹಾಗೂ ಮಂಗಳೂರು ಕೆಮಿಕಲ್ ಹಾಗೂ ಫರ್ಟಿ ಲೈಜರ್ ಲಿಮಿಟೆಡ್ ಗಳನ್ನು ವಹಿಸಿಕೊಂಡು ಸುಸ್ಥಿತಿಗೆ ತಂದಿದ್ದೇವೆ.
ಬಿಯರ್ ಹಾಗೂ ಸ್ಪಿರೀಟ್ ಕ್ಷೇತ್ರದ ನಮ್ಮ ಸಂಸ್ಥೆ ಇಲ್ಲಿ ತನಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಜತೆ ಉತ್ತಮ ಬಾಂಧವ್ಯ ಹೊಂದಿದೆ.

1988ರಿಂದ ನಾನು ಎನ್ನಾರೈ ಎಂದ ಮಲ್ಯ
ನಾನು 1988ರಿಂದ ನಾನು ಅನಿವಾಸಿ ಭಾರತೀಯನಾಗಿದ್ದೇನೆ. ನಾನು ಜಾಗತಿಕವಾಗಿ ಆಲ್ಕೋಹಾಲ್ ಪಾನೀಯ ಉದ್ಯಮವನ್ನು ಬೆಳೆಸಲು ಸಾಕಷ್ಟು ಶ್ರಮಿಸಿದ್ದೇನೆ. ನಾನು ಪಲಾಯಾನವಾದಿಯಲ್ಲ.
ನನ್ನ ದುರಾದೃಷ್ಟಕ್ಕೆ ಮಾಧ್ಯಮಗಳು, ನನ್ನ ಉದ್ಯಮವನ್ನು ಅರಿಯಲಿಲ್ಲ, ಪ್ರೋತ್ಸಾಹಿಸಲಿಲ್ಲ. ನಾನು ನ್ಯಾಯಯುತವಾಗಿ ನನ್ನ ವಾದ ಮಂಡಿಸಿ, ಗೌರವಯುತವಾಗಿ ನನ್ನನ್ನು ನೀವು ನಡೆಸಿಕೊಳ್ಳುತ್ತೀರಿ ಎಂಬ ಭರವಸೆ ಹೊಂದಿದ್ದೇನೆ.

ಸುಸ್ತಿದಾರರ ಪೈಕಿ ಪೋಸ್ಟರ್ ಬಾಯ್
ನನ್ನನ್ನು ಬ್ಯಾಂಕ್ ಸಾಲ ಹೊಂದಿರುವವರು, ಉದ್ದೇಶಪೂರ್ವಕ ಸುಸ್ತಿದಾರರ ಪೈಕಿ ಪೋಸ್ಟರ್ ಬಾಯ್ ಎಂಬಂತೆ ಬಿಂಬಿಸಲಾಗುತ್ತಿದೆ. ಸಾರ್ವಜನಿಕರ ಹಣವನ್ನು ಲೂಟಿ ಮಾಡಿ, ದೇಶದಿಂದ ಪರಾರಿಯಾಗಿದ್ದೇನೆ ಎಂದು ಭಾವಿಸಲಾಗಿದೆ.
ನಾನು ನಿಜವಾಗಿಯೂ ರಾಜಕೀಯದಾಳವಾಗಿದ್ದೇನೆ. ಹಲವಾರು ರಾಜಕೀಯ ಮುಖಂಡರು, ಇತರೆ ಸಂಸ್ಥೆಗಳು ನನ್ನ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ವಿಷಾದನೀಯ.
ಸಿಬಿಐ, ಎಸ್ ಫ್ ಐಒ, ಜಾರಿ ನಿರ್ದೇಶನಾಲಯವು ನನ್ನ ವಿರುದ್ಧ ತನಿಖೆ ಆರಂಭಿಸಿವೆ. ನನ್ನ ರಾಯಭಾರ ಪಾಸ್ ಪೋರ್ಟ್ ನಾಲ್ಕು ವಾರಗಳ ಕಾಲ ಅಮಾನತುಗೊಂಡಿದೆ ಎಂದು ಗೃಹ ಸಚಿವಾಲಯದಿಂದ ಪತ್ರ ಬಂದಿದೆ. ಪಾಸ್ ಪೋರ್ಟ್ ಉಳಿಸಿಕೊಳ್ಳಲು ಒಂದು ವಾರದ ಶೋಕಾಸ್ ನೋಟಿಸ್ ಕೊಡಲಾಗಿದೆ.
ಬ್ಯಾಂಕಿನಿಂದ ಪಡೆದ ಸಾಲದ ಮೊತ್ತ ವಾಪಸ್ ಮಾಡಲು ನಾನು ನಡೆಸಿದ ಪ್ರಯತ್ನಕ್ಕೆ ಇವೆಲ್ಲವೂ ಅಡ್ಡಿಯಾಗಿವೆ.

ಸೆಟ್ಲ್ ಮೆಂಟ್ ಗೆ ಎಸ್ ಬಿಐ ಒಪ್ಪಲಿಲ್ಲ
ನಾನು ಹಲವು ಬಾರಿ ಮನವಿ ಮಾಡಿದರೂ ಸರ್ಕಾರಿ ಸ್ವಾಮ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಲಿಲ್ಲ. 4400 ಕೋಟಿ ರು ನೀಡಿ ಒಂದೇ ಸಲಕ್ಕೆ ಸೆಟ್ಲ್ ಮೆಂಟ್ ಮಾಡಿಕೊಳ್ಳುವ ಇರಾದೆ ಇತ್ತು. ಆದರೆ, ನಮ್ಮ ಆಫರ್ ಗೆ ಬೆಲೆ ನೀಡಬೇಕಿತ್ತು. ಈ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದರೆ ನಮಗೆ 8400 ಕೋಟಿ ರು ನಷ್ಟವಾಗುತ್ತಿತ್ತು. ಆದರೆ, ಸಾಲ ತೀರುತ್ತಿತ್ತು. ಆಗ ಇದ್ದ ಯುಪಿಎ ಸರ್ಕಾರ ಇದಕ್ಕೆ ಆಸ್ಪದ ನೀಡಲಿಲ್ಲ. ಈಗ ನಿಮ್ಮ ಸರ್ಕಾರದಿಂದ ನನಗೆ ಅವಕಾಶ ನೀಡಿದರೆ, ನಾನು ಸೆಟ್ಲ್ ಮೆಂಟ್ ಗೆ ಸಿದ್ಧ












Click it and Unblock the Notifications