ಕೇಂದ್ರ ಬಜೆಟ್ 2021- ರಿಯಲ್ ಎಸ್ಟೇಟ್ ಉದ್ಯಮ ನಿರೀಕ್ಷೆಗಳು ಈಡೇರಲಿವೆಯೇ ?
ಬೆಂಗಳೂರು, ಜನವರಿ 23: ನೋಟು ಅಮಾನ್ಯೀಕರಣದಿಂದ ಭಾರೀ ಪೆಟ್ಟು ತಿಂದದ್ದ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳಲು ಅಂಬೆಗಾಲಿಡುತ್ತಿದ್ದಂತೆ ಕರೋನಾ ಎಂಬ ಮಹಾ ಮಾರಿ ಅಪ್ಪಳಿಸಿತ್ತು. ದೇಶದ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ರಿಯಲ್ ಎಸ್ಟೇಟ್ ಉದ್ಯಮವಂತೂ ಮಕ್ಕಾಡೆ ಮಲಗಿಬಿಟ್ಟಿದೆ. ಕರೋನಾಗೆ ಮುಲಾಮು ಸಿಕ್ಕಿದೆ. ಆದರೆ ಸಂಕಷ್ಟಕ್ಕೆ ಸಿಲುಕಿರುವ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ 2021-22 ನೇ ಸಾಲಿನ ಬಜೆಟ್ ಮುಲಾಮು ನೀಡಲಿದೆಯಾ ? ಪ್ರಸಕ್ತ ರಿಯಲ್ ಎಸ್ಟೇಟ್ ಉದ್ಯಮದ ನಿರೀಕ್ಷೇಗಳೇನು ? ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಚೇತರಿಸಿಕೊಳ್ಳುವ ಯೋಜನೆಗಳನ್ನು ಕೇಂದ್ರ ಘೋಷಣೆ ಮಾಡಲಿದೆಯಾ ? ಈರಿತ ಸಮಗ್ರ ವಿವರ ಇಲ್ಲಿದೆ ನೋಡಿ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆಗುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿ ರೇರಾ ಅಸ್ತಿತ್ವಕ್ಕೆ ಬಂದಿದ್ದೇ ರಿಯಲ್ ಎಸ್ಟೇಟ್ ಹೆಸರಿನ ಆರ್ಥಿಕ ಅಪರಾಧಗಳಿಗೆ ಕಡಿವಾಣ ಬಿದ್ದಿತ್ತು. ಮನೆ ನಿರ್ಮಾಣ, ಮಾರಾಟ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿ ಕಂಡಿತ್ತು. ಬೆಂಗಳೂರು, ಚೆನ್ನೈ, ಮುಂಬಯಿನಂತಹ ಮಹಾ ನಗರಗಳಲ್ಲಿ ರಿಯಲ್ ಎಷ್ಟೇಟ್ ಉದ್ಯಮ ದೊಡ್ಡ ಮಟ್ಟದಲ್ಲಿ ಪ್ರಗತಿಗೆ ನಾಂದಿ ಹಾಡಿತ್ತು. ದೇಶದಲ್ಲಿ ಎರಡನೇ ಅತಿ ಹೆಚ್ಚು ಉದ್ಯೋಗ ನೀಡುವ ಉದ್ಯಮದ ಹೆಗ್ಗಳಕೆಗೆ ಪಾತ್ರವಾಯಿತು. ದೇಶದ ಆರ್ಥಿಕ ಪ್ರಗತಿಗೆ ಶೇ. 8 ರಷ್ಟು ಪಾಲು ಈ ಉದ್ಯಮ ನೀಡತೊಡಗಿತ್ತು. ಇದ್ದಕ್ಕಿದ್ದಂತೆ ಈ ಉದ್ಯಮಕ್ಕೆ ಮರ್ಮಾಘಾತ ನೀಡಿತ್ತು ನೋಟು ಅಮಾನ್ಯೀಕರಣ.
ಬಜೆಟ್ 2021: ಜನವರಿ 30ಕ್ಕೆ ಮೋದಿ ಸರ್ವಪಕ್ಷ ಸಭೆ
ನೋಟು ಅಮಾನ್ಯೀಕರಣ:
ದೇಶದಲ್ಲಿ ಕಪ್ಪು ಹಣ ಬಯಲಿಗೆ ಎಳೆಯುವ ಹಾಗೂ ನಕಲಿ ಕರೆನ್ಸಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಸಾವಿರ ಮುಖಬೆಲೆಯ ನೋಟು ಹಾಗೂ ಐದು ನೂರು ರುಪಾಯಿ ನೋಟುಗಳನ್ನು ಅಮಾನ್ಯೀಕರಣಗೊಳಿಸಿದರು. ದೇಶದಲ್ಲಿ ನೋಟುಗಳನ್ನು ಬ್ಯಾಂಕ್ ಗಳಿಗೆ ಸಲ್ಲಿಸಿ ಬದಲಿ ನೋಟು ಪಡೆಯುವ ಪರ್ವ ಶುರುವಾಗಿತ್ತು. ನೋಟು ಅಮಾನ್ಯೀಕರಣಗೊಂಡಿದ್ದೇ ನಗದು ಚಲಾವಣೆಗೆ ಬಾರೀ ಪೆಟ್ಟು ಬಿದ್ದಿತ್ತು. ಒಂದು ಸಾವಿರ ಹಾಗೂ ಐದು ನೂರು ಮುಖ ಬೆಲೆಯ ನೋಟುಗಳನ್ನು ಬದಲಾವಣೆ ಮಾಡಿದ ದೊಡ್ಡ ದೊಡ್ಡ ಮಂದಿ ಭವಿಷ್ಯದ ಬಗ್ಗೆ ಆಲೋಚಿಸಿ ತಮ್ಮ ಹಣ ಭದ್ರತ ಪಡಿಸಿಕೊಂಡರು. ಜನ ಸಾಮಾನ್ಯರಿಗೆ ನಗದು ಹಣ ಲಭ್ಯವಾಗದೇ ಹೋಯಿತು. ಇದು ರಿಯಲ್ ಎಸ್ಟೇಟ್ ಉದ್ಯಮದ ಮೇಲೂ ಭಾರೀ ನಕಾರಾತ್ಮಕ ಪರಿಣಾಮ ಬೀರಿತು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಲಿಕ್ವಿಡಿಟಿ ಇಲ್ಲದಂತಾಯಿತು. ರಿಯಲ್ ಎಸ್ಟೇಟ್ ಯೋಜನೆಗಳು ಸ್ಥಗಿತಗೊಂಡವು. ಮನೆ ಮಾರಾಟ ಕ್ಷೇತ್ರದಲ್ಲಿ ಗಣನೀಯವಾಗಿ ಕಡಿಮೆ ಆಯಿತು. ಹೀಗಾಗಿ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳು ನಿರೀಕ್ಷಿತ ಯೋಜನೆಗಳನ್ನು ಪೂರ್ಣಗೊಳಿಸಲು ಹೂಡಿಕೆ ಇಲ್ಲದೇ ಪರದಾಡುವ ಸ್ಥಿತಿಗೆ ಬಂದು ನಿಂತಿದ್ದವು. 2016 ರಲ್ಲಿ ನೋಟ್ ಬಾನ್ ಆದ ಬಳಿಕ ಭಾರತದ ಎಂಟು ಪ್ರಮುಖ ನಗರಗಳಲ್ಲಿ ವಸತಿ ಮಾರಾಟದಲ್ಲಿ ಶೇ. 40 ರಷ್ಟು ಕಡಿಮೆಯಾಗಿತ್ತು. ಇದು ನೋಟ್ ಆದ ಕೇವಲ ಮೂರು ತಿಂಗಳಲ್ಲಿ ! ಇನ್ನು ಇದೇ ಅವಧಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಿಯಂತ್ರಣ ಕಾಯ್ದೆ ಅನುಷ್ಠಾನಕ್ಕೆ ಬಂದಿತ್ತು. ನೋಟು ಅಮಾನ್ಯೀಕರಣದಿಂದ ಶೇ. 30 ರಷ್ಟು ಭೂಮಿ ಪರಭಾರೆ ಸ್ಥಗಿತಗೊಂಡಿತು. ನೋಟು ಅಮಾನ್ಯೀಕರಣದಿಂದ ಆರ್ಥಿಕ ಸಂಕಷ್ಟಕ್ಕೀಡಾದ ಜನ ಸಾಮಾನ್ಯರು ಕಾದು ನೋಡುವ ತಂತ್ರದ ಮೊರೆ ಹೋದರು. ಅಂತೂ ನೋಟು ಅಮಾನ್ಯೀಕರಣದಿಂದ ಸತತ ಎರಡು ವರ್ಷಗಳ ಕಾಲ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರೀ ಪೆಟ್ಟು ನೀಡಿತ್ತು ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿ, ಮಾಯಾನ್ ಬಿಲ್ಡರ್ಸ್ ಸೆಬಾಸ್ಟಿನ್.
ಹೊಸ ಬಜೆಟ್ ನಿರೀಕ್ಷೆಗಳು:
ದೇಶದ ಸಮಗ್ರ ಅಭಿವೃದ್ಧಿಗೆ ಶೇ. 8 ರಷ್ಟು ಪಾಲು ಕೊಡುತ್ತಿರುವ ರಿಯಲ್ ಎಸ್ಟೇಟ್ ಉದ್ಯಮದ ಈ ಬಾರಿಯ ಬಜೆಟ್ ನಿರೀಕ್ಷೆಗಳು ಭಾರಿ ದೊಡ್ಡ ಮಟ್ಟದಲ್ಲಿವೆ. ಕರೋನಾ ದಿಂದ ತತ್ತರಿಸಿರುವ ರಿಯಲ್ ಎಸ್ಟೇಟ್ ಉದ್ಯಮ ಪುನಶ್ಚೇತನ ನೀಡಲು ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಯಾವ ರೀತಿಯ ಕೊಡುಗೆ ನೀಡಲಿದೆ ಎಂದು ಉದ್ಯಮ ಕಾದು ಕುಳಿತಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಆದ್ಯತೆ ನೀಡಿದಲ್ಲಿ, ಪರ್ಯಾಯ ಉದ್ಯಮಗಳಾದ, ಡಿಸೈನಿಂಗ್, ಹೌಸಿಂಗ್ ಉಪಕರಣ, ಕಬ್ಬಿಣ, ಪೀಟೋಪಕರಣ ಉದ್ಯಮ ಕೂಡ ಪರೋಕ್ಷವಾಗಿ ಚೇತರಿಕೆ ಕಾಣಲಿವೆ. ಹೀಗಾಗಿ ಪ್ರಸಕ್ತ ಸಾಲಿನ 2021- 22 ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ರಿಯಲ್ ಎಸ್ಟೇಟ್ ಉದ್ಯಮಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರಿಯಲ್ ಎಸ್ಟೇಟ್ ಮತ್ತೆ ಪುಟಿದೇಳಬೇಕಾದರೆ, ಲೋನ್ ಮಾರ್ಟೋರಮ್ ನಂತಹ ನೀತಿಗಳು ತಾತ್ಕಾಲಿಕ ಪರಿಹಾರವಷ್ಟೇ. ಉದ್ಯಮಕ್ಕೆ ಶಾಶ್ವತವಾಗಿ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸರ್ಕಾರ ಆಲೋಚಿಸಬೇಕಿದೆ. ಕರೋನಾ ದಿಂದ ದೇಶವೇ ಆರ್ಥಿಕ ಸಂಷ್ಟಕ್ಕೆ ಸಿಲುಕಿದೆ. ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕಿ ಸಿಂಗಲ್ ವಿಂಡೋ ವ್ಯವಸ್ಥೆ ಕಲ್ಪಿಸುವ ಮೂಲಕ ಪಾರದರ್ಶಕ ಪ್ರಗತಿಶೀಲ ಯೋಜನೆಗಳನ್ನು ಕೇಂದ್ರ ಘೋಷಣೆ ಮಾಡಬೇಕು. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದಂತೆ ಏಕ ಗವಾಕ್ಷಿ ವ್ಯವಸ್ಥೆ ಕಲ್ಪಿಸುವುದು ಬಹುದಿನಗಳ ಬೇಡಿಕೆಯಾಗಿದ್ದು, ಇದನ್ನು ಈ ಸಲ ಈಡೇರಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಅನೂಜ್ ಪೂರಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿ ತನ್ನ ಅಭಿಪ್ರಾಯವನ್ನು ಮಾಧ್ಯಮವೊಂದಕ್ಕೆ ಹಂಚಿಕೊಂಡಿದ್ದಾರೆ.
ಈ ಬಾರಿ ಬಜೆಟ್ ಕೊರತೆ ಇರಲಿದೆ ಎಂದ ಸಿಎಂ ಯಡಿಯೂರಪ್ಪ
ತೆರಿಗೆ ವಿನಾಯಿತಿ ಅಗತ್ಯ :
ಸತತ ಪೆಟ್ಟುಗಳಿಂದ ಸೊರಗಿರುವ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಈಗಾಗಲೇ ನಿರ್ಮಾಣವಾಗಿರುವ ವಸತಿ ಸಮುಚ್ಛಯಗಳೇ ಮಾರಾಟವಾಗದೇ ಖಾಲಿ ಬಿದ್ದವೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ವಾಸಿಸಲು ವಸತಿ ಖರೀದಿಸುವ ಜನರಿಗೆ ಜನರಿಗೆ ತೆರಿಗೆ ವಿನಾಯಿತಿ ನೀಡಿದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರ ಭಾರೀ ಪ್ರಗತಿ ಕಾಣಲಿದೆ. ಮಧ್ಯಮ ವರ್ಗದ ಜನರು ಕನಸಿನ ಸೂರು ಪಡೆದಲ್ಲಿ ಅಂತಹವರಿಗೆ ಆದಾಯ ತೆರಿಗೆ ವಿನಾಯಿತಿ ನೀಡಿದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಲೆದೋರಿರುವ ಲಿಕ್ವಿಡಿಟಿ ಸಮಸ್ಯೆಗೆ ಪರಿಹಾರ ಸಿಗಲಿದೆ. ಮಾತ್ರವಲ್ಲ ಕಡಿಮೆ ವೆಚ್ಚದದಲ್ಲಿ ಮನೆಗಳನ್ನು ನಿರ್ಮಿಸಿ ಮಾರಾಟ ಮಾಡುವ ಬಗ್ಗೆ ರಿಯಲ್ ಎಸ್ಟೇಟ್ ಉದ್ಯಮಿಗಳು ಕೂಡ ಯೋಜನೆ ರೂಪಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಮಧ್ಯಮ ವರ್ಗದ ಜನರು ಮನೆ ಖರೀದಿಸಲು ವಿಶೇಷ ಅವಕಾಶ ಕಲ್ಪಿಸುವ ಮೂಲಕ ಕೇಂದ್ರ ಬಜೆಟ್ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಶಾಶ್ವತ ಕಾಯಕಲ್ಪ ನೀಡುವ ನಿರೀಕ್ಷೆಯಲ್ಲಿದ್ದೇವೆ ಎಂದು ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿ ದಿನೇಶ್ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಡಿಮೆ ಬಡ್ಡಿ ಗೃಹ ಸಾಲ :
ಕರೋನಾ ಸಂಕಷ್ಟ ಕಾಲದಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಹೇಳಿಕೊಳ್ಳದಂತಹ ಸಂಕಷ್ಟ ಎದುರಿಸಿಲ್ಲ. ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಗೃಹ ಸಾಲ, ಗೃಹ ಸಾಲ ಕಂತು ಪಾವತಿ, ವಸತಿ ಖರೀದಿಸುವರಿಗೆ ತೆರಿಗೆ ವಿನಾಯಿತಿ ಬಹು ಮುಖ್ಯವಾದುದು. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಇದಕ್ಕೆ ಆದ್ಯತೆ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮನೆ ಖರೀದಿಸುವರಿಗೆ ಸಾಲ ಸೌಲಭ್ಯ, ಮರು ಪಾವತಿ, ಕಡಿಮೆ ಬಡ್ಡಿದರ, ತೆರಿಗೆ ವಿನಾಯಿತಿ ನೀಡಿದ್ದೇ ಆದಲ್ಲಿ ಮತ್ತೆ ರಿಯಲ್ ಎಸ್ಟೇಟ್ ಕ್ಷೇತ್ರ ಪುಟಿದೇಳಲಿದೆ. ದೇಶದಲ್ಲಿ ತಲೆದೋರಿರುವ ಅನಕ್ಷರಸ್ತ ಮತ್ತು ಅಕ್ಷರಸ್ತ ನಿರುದ್ಯೋಗಗಳಿಗೆ ಉದ್ಯೋಗ ಅವಕಾಶಗಳು ಸಿಗಲಿವೆ. ರಿಯಲ್ ಎಸ್ಟೇಟ್ ಉದ್ಯಮ ನಂಬಿರುವ ಪರ್ಯಾಯ ಉದ್ಯಮಗಳು ಆರ್ಥಿಕ ಸಂಕಷ್ಟದಿಂದ ಪಾರಾಗಲಿವೆ.
ಕೋವಿಡ್ ಸಂಕಷ್ಟದಲ್ಲಿ ಸಿಲುಕಿರುವ ಭಾರತವನ್ನು ಕರೋನಾ ಮುಕ್ತವಾಗಿಸುವ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ವಿಶ್ವದ ಅಗ್ರಮಾಣ್ಯ ರಾಷ್ಟ್ರಗಳು ಕೈಗೊಳ್ಳುತ್ತಿರುವ ಪರಿಹಾರೋಪಾಯಗಳು ತೆಗೆದುಕೊಳ್ಳುವ ಮೂಲಕ ಜಾಗತಿಕವಾಗಿ ಚರ್ಚೆಗೆ ಒಳಗಾಗಿದ್ದರೆ. ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ಮೇಲೆ ಎಲ್ಲರ ನಿರೀಕ್ಷೆಗಳು ಹೆಚ್ಚಾಗಿವೆ. ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಭಾರತದ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಾವ ಆರ್ಥಿಕ ಯೋಜನೆಗಳ ಮೊರೆ ಹೋಗುತ್ತಾರೋ ಕಾದು ನೋಡಬೇಕಿದೆ.