ಏಪ್ರಿಲ್ 20ರ ನಂತರ ಐಟಿ ಕಂಪನಿ ಓಪನ್ ವಿಥ್ ಕಂಡೀಷನ್ಸ್ ಅಪ್ಲೈ
ಬೆಂಗಳೂರು, ಏಪ್ರಿಲ್ 16: ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಲಾಕ್ಡೌನ್ ನಿಂದಾಗಿ ಬಹುತೇಕ ಸಾಫ್ಟ್ ವೇರ್ ರಫ್ತು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಐಟಿ ಉದ್ಯಮಕ್ಕೆ ಪುನಶ್ಚೇತನ ನೀಡಲು ರಾಜ್ಯ ಐಟಿ ಬಿಟಿ ಸಚಿವ ಡಾ. ಆಶ್ವಥ ನಾರಾಯಣ ಮುಂದಾಗಿದ್ದಾರೆ. ಏಪ್ರಿಲ್ 20ರಿಂದ ನಿರ್ಬಂಧ, ನಿಯಮಗಳನ್ನು ಪಾಲಿಸಿಕೊಂಡು ಐಟಿ ಉದ್ಯಮ ಬಾಗಿಲು ತೆರೆಯಬಹುದು ಎಂಬ ಸುದ್ದಿ ಬಂದಿದೆ.
ಕೊರೊನಾ ಹೊಡೆತಕ್ಕೆ ಐಟಿ, ಐಟಿಯೇತರ ಉದ್ಯಮದ ಆರ್ಥಿಕ ಸ್ಥಿತಿ ಹದಗೆಟ್ಟಿವೆ. ಸರ್ಕಾರದ ಯೋಜನೆಗಳಿಗೆ ತಾಂತ್ರಿಕ ನೆರವು ಒದಗಿಸಿ ಕೆಲವು ಕಂಪನಿಗಳು ಸಮತೋಲನ ಕಾಯ್ದುಕೊಂಡಿವೆ. ಬಹುತೇಕ ಐಟಿ ಕಂಪನಿಗಳು ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಂಡಿದ್ದು, ಅತ್ಯಂತ ಯಶಸ್ವಿಯಾಗಿದೆ. ಬೆಂಗಳೂರು ಐಟಿ ಕ್ಷೇತ್ರ ಈ ಕೊರೊನಾ ಕಷ್ಟಕಾಲದಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ.
ಏಪ್ರಿಲ್ 20ರ ನಂತರವೂ ಐಟಿ-ಬಿಟಿಗೆ WFH ಆಯ್ಕೆಯೇ ಬೆಸ್ಟ್: ಡಿಸಿಎಂ ಅಶ್ವಥ್
ಲಾಕ್ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಐಟಿ ಉದ್ಯಮಕ್ಕೆ ಕಷ್ಟ ನಷ್ಟಗಳ ಬಗ್ಗೆ ಶುಕ್ರವಾರದಂದು ಎಂಎಸ್ ಬಿಲ್ಡಿಂಗ್ನಲ್ಲಿ ಡಾ. ಡಿಸಿಎಂ ಅಶ್ವಥ್ ನಾರಾಯಣ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಈ ಕಾನ್ಫರೆನ್ಸ್ ನಲ್ಲಿ IT, BT ಕಂಪನಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಲಾಕ್ಡೌನ್ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು IT, BT ಮುಖ್ಯಸ್ಥರ ಜೊತೆ ಚರ್ಚಿಸಲಾಯಿತು. ವರ್ಕ್ ಫ್ರಮ್ ಹೋಂ, ವಿನಾಯಿತಿ ನೀಡಿರುವ ಕಂಪನಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಐಟಿ ಉದ್ಯಮಕ್ಕೆ ಸಿಗಲಿರುವ ವಿನಾಯಿತಿ
* ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಚನೆಗಳನ್ನು ಐಟಿ ಕಂಪನಿಗಳು ಪಾಲಿಸುತ್ತಿವೆ. ಐಟಿ ಕಂಪನಿಗಳು ಸರ್ಕಾರಿ ವಾಹನ ಇಲ್ಲದಿರುವಾಗ ಖಾಸಗಿ ವಾಹನ ಬಳಸಬಹುದಾಗಿದ್ದು, 50 ಸೀಟುಗಳ ಬಸ್ ಇದ್ದರೆ 20 ಮಂದಿ ಮಾತ್ರ ಒಮ್ಮೆಗೆ ಸಂಚರಿಸಲು ಅನುಮತಿ ನೀಡಲಾಗಿದೆ. ನಮ್ಮ ಮೆಟ್ರೋ, ಬಿಎಂಟಿಸಿ ಸದ್ಯಕ್ಕಂತೂ ಕಾರ್ಯಾಚರಣೆ ಇರುವುದಿಲ್ಲ. ಬೈಕ್ ಇರುವವರು ಒಂದು ಬೈಕಿನಲ್ಲಿ ಒಬ್ಬರು ಮಾತ್ರ ಸಂಚರಿಸಬಹುದು. ಕಾರಿನಲ್ಲಿ ಇಬ್ಬರು ಮಾತ್ರ ಒಮ್ಮೆಗೆ ಸಂಚರಿಸಲು ಅನುಮತಿ ಸಿಗಲಿದೆ. ಎಲ್ಲವೂ ಕೇಂದ್ರದ ಮಾರ್ಗಸೂಚಿ, ಇ ಪಾಸ್ ವ್ಯವಸ್ಥೆಯಂತೆ ನಡೆಯಲಿದೆ ಎಂದು ಡಾ. ಅಶ್ವಥ್ ಹೇಳಿದರು.
ಶೇ 50ರಷ್ಟು ಮಂದಿಗೆ ಮಾತ್ರ ಅನುಮತಿ
* ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಐಟಿ ವೃತ್ತಿಪರರು ಕೂಡಾ ನೆರವಾಗುತ್ತಿದ್ದಾರೆ. ಸರ್ಕಾರ ಮಾತ್ರವಲ್ಲ, ಸಂಸ್ಥೆಗಳು ಕೂಡಾ ಉದ್ಯೋಗಿಗಳ ಸುರಕ್ಷತ್ಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ವಿನಾಯಿತಿಯಿಂದ ಸಂಪೂರ್ಣ ಲಾಕ್ಡೌನ್ ಮುಗಿಯುವ ತನಕ ವರ್ಕ್ ಫ್ರಂ ಹೋಂ ಆಯ್ಕೆಯೇ ಸೂಕ್ತ ಎನಿಸುತ್ತದೆ. ಶೇ 50 ರಷ್ಟು ಅಗತ್ಯ ಸೇವೆಯ ಸಿಬ್ಬಂದಿ ಮಾತ್ರ ಕಚೇರಿಗೆ ತೆರಳಲು ಅನುಮತಿ ಸಿಗಲಿದೆ.
ಲಾಕ್ಡೌನ್ ವಿಸ್ತರಣೆ ಮಾರ್ಗಸೂಚಿ
ಮಾರ್ಚ್ 23ರಿಂದ ಏಪ್ರಿಲ್ 14ರ ತನಕ ಮೊದಲ ಅವಧಿಯಲ್ಲಿ 21 ದಿನಗಳ ಲಾಕ್ಡೌನ್ ಅವಧಿಯನ್ನು ದೇಶ ಎದುರಿಸಿದೆ. ಈಗ ಮೇ 3ರ ತನಕ 19 ದಿನಗಳ ಲಾಕ್ಡೌನ್ ವಿಸ್ತರಣೆಯಾಗಿದೆ. ಜೊತೆಗೆ ಏಪ್ರಿಲ್ 20ರ ತನಕ ರೆಡ್ ಅಲರ್ಟ್ ಇರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ತೀವ್ರವಾಗಿ ಅವಲೋಕನಕ್ಕೆ ಕರೆ ನೀಡಲಾಗಿದೆ. ಪರಿಸ್ಥಿತಿ ಸುಧಾರಿಸಿದರೆ ಮಾತ್ರ ಹೊಸ ಮಾರ್ಗಸೂಚಿಯ ಅನ್ವಯ ವಿನಾಯಿತಿ ನೀಡಲಾಗುತ್ತದೆ ಎಂದು ಮೋದಿ ಎಚ್ಚರಿಸಿದರು. ಮೋದಿ ಹೇಳಿದಂತೆ ಏಪ್ರಿಲ್ 15ರಂದು ಗೃಹ ಸಚಿವಾಲಯ ಮಾರ್ಗಸೂಚಿಯಲ್ಲಿ ಬದಲಾವಣೆಗಳಿಲ್ಲ.
ಸಂಚಾರಕ್ಕೆ ಇ ಪಾಸ್ ಅಗತ್ಯವಿದೆ
ದೂರಸಂಪರ್ಕ, ಇಂಟರ್ನೆಟ್ ಸೇವೆಗಳು, ಪ್ರಸಾರ ಮತ್ತು ಕೇಬಲ್ ಸೇವೆಗಳು. ಐಟಿ ಮತ್ತು ಐಟಿ ಸಕ್ರಿಯಗೊಳಿಸಿದ ಸೇವೆಗಳಿಗೆ ಮಾತ್ರ (ಅಗತ್ಯ ಸೇವೆಗಳಿಗೆ) ಅನುಮತಿ ಇದೆ. ಸಾಧ್ಯವಾದಷ್ಟು ಮನೆಯಿಂದ ಕೆಲಸ ಮಾಡಿ, ಅಗತ್ಯವಿದ್ದರೆ ಸಂಚಾರಕ್ಕೆ ಪಾಸ್ ಅಗತ್ಯ.
ಎಲ್ಲಾ ಸಾರಿಗೆ ಸೇವೆಗಳು - ವಾಯು, ರೈಲು, ರಸ್ತೆಮಾರ್ಗಗಳು - ಸ್ಥಗಿತಗೊಂಡಿವೆ. ಅಗತ್ಯ ಸರಕುಗಳಿಗೆ ಮಾತ್ರ ಸಾರಿಗೆ. ಒಳನಾಡು ಮತ್ತು ರಫ್ತುಗಾಗಿ ಸರಕು / ಸರಕುಗಳ ಅಂತರ-ರಾಜ್ಯ ಚಾಲನೆ ನೀಡಲಾಗಿದೆ. ಮಿಕ್ಕಂತೆ ಸಾರ್ವಜನಿಕ ಉಪಯುಕ್ತತೆಗಳು (ಪೆಟ್ರೋಲಿಯಂ, ಸಿಎನ್ಜಿ, ಎಲ್ಪಿಜಿ, ಪಿಎನ್ಜಿ ಸೇರಿದಂತೆ), ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಅಂಚೆ ಕಚೇರಿಗಳು, ವಿಪತ್ತು ನಿರ್ವಹಣೆ ಮತ್ತು ಮುಂಚಿನ ಎಚ್ಚರಿಕೆ ಏಜೆನ್ಸಿಗಳಿಗೆ ಮಾತ್ರ ಅನುಮತಿ ಇದೆ.